ತಿರುಮಲ ವೆಂಕಟೇಶ್ವರ ದೇವಸ್ಥಾನದ ಗೋಪುರಕ್ಕೆ ಚಿನ್ನದ ಲೇಪನಕ್ಕೆ ಟಿಟಿಡಿ ನಿರ್ಧಾರ
ಏಳು ದಶಕಗಳ ನಂತರ ತಿರುಮಲದ ವೆಂಕಟೇಶ್ವರ ದೇವಸ್ಥಾನದ ಆನಂದ ನಿಲಯದ (ಗೋಪುರ) ಚಿನ್ನದ ಲೇಪನ ಕೆಲಸವನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು ಎಂದು ತಿರುಮಲ ತಿರುಪತಿ ದೇವಸ್ಥಾನ ಸಮಿತಿ ತಿಳಿಸಿದೆ.
ಈ ಬಾರಿ ಸಾಂಪ್ರದಾಯಿಕ ಶೈಲಿಯಲ್ಲಿ ಕೈಯಿಂದ ಚಿನ್ನದ ಲೇಪನ ಮಾಡುವುದುನ್ನು ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದ್ದು, ಮೊದಲ ಬಾರಿ ಆಧುನಿಕ ತಂತ್ರಜ್ಞಾನ ಬಳಸಿ ಚಿನ್ನದ ಲೇಪನ ಮಾಡಲು ನಿರ್ಧಾರ ಮಾಡಿದೆ. ಕೈಯಿಂದ ಚಿನ್ನದ ಲೇಪನ ಮಾಡಲು ದರ್ಶನಕ್ಕೆ ಅಡ್ಡಿಯಾಗುವುದರಿಂದ ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಚಾಮುಂಡಿ ಬೆಟ್ಟಕ್ಕೆ ನೀಡುತ್ತಿದ್ದ ವಾಹನ ಪಾಸ್ ರದ್ದು, ಕಾರಣ?
ಸಾಂಪ್ರದಾಯಿಕ ಶೈಲಿಯಲ್ಲಿ ಚಿನ್ನದ ಲೇಪನಕ್ಕಾಗಿ, ದೇವಲಾಯವನ್ನು ಕನಿಷ್ಠ 14 ದಿನಗಳ ಕಾಲ ಮುಚ್ಚಬೇಕಾಗುತ್ತದೆ. ದಿನಕ್ಕೆ ಸರಾಸರಿ 75,000 ಭಕ್ತರು ವೆಂಕಟೇಶ್ವರನ ದರ್ಶನವನ್ನು ಪಡೆಯುತ್ತಿದ್ದಾರೆ ಎಂದು ಟಿಟಿಡಿ ತಿಳಿಸಿದೆ.
ಸೋಮವಾರ ನಡೆದ ಟಿಟಿಡಿ ಆಡಳಿತ ಮಂಡಳಿ ಸಭೆಯಲ್ಲಿ ಆನಂದ ನಿಲಯದ ಚಿನ್ನದ ಲೇಪನಕ್ಕೆ ವಿದೇಶಿ ಕಂಪನಿಯ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ಅನಾನುಕೂಲ ಆಗದಂತೆ ನೋಡಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.
ಜೆಪಿ ನಗರ ದೇಗುಲದಲ್ಲಿ 1 ಲಕ್ಷ ಆಟದ ಸಾಮಗ್ರಿ ಬಳಸಿ ವಿಶೇಷ ಆಲಂಕಾರ
ಚಿನ್ನದ ಲೇಪನಕ್ಕೆ ಯಂತ್ರೋಪಕರಣ ಬಳಕೆ
ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಟಿಟಿಡಿ ಮಂಡಳಿ ಅಧ್ಯಕ್ಷ ವೈವಿ ಸುಬ್ಬಾ ರೆಡ್ಡಿ, "ದೇವಸ್ಥಾನದ ಗೋಪುರಕ್ಕೆ ಚಿನ್ನದ ಲೇಪನ ಮಾಡಲು ಎರಡು ತಂತ್ರಜ್ಞಾನಗಳನ್ನು ಬಳಸಲು ಯೋಜಿಸಲಾಗಿದೆ. ಆನಂದ ನಿಲಯಕ್ಕೆ ಚಿನ್ನದ ಲೇಪನಕ್ಕೆ ಯಂತ್ರೋಪಕರಣಗಳ ಬಳಕೆ. ಎರಡು ಭಾಗಗಳಿರುವ ಗೋಪುರದ ಅಚ್ಚನ್ನು ತಯಾರಿಸಲಾಗುವುದು, ಅದನ್ನು ಯಂತ್ರೋಪಕರಣಗಳನ್ನು ಬಳಸಿ ಗೋಪುರದ ಮೇಲೆ ಇರಿಸಲಾಗುತ್ತದೆ". ಎಂದು ತಿಳಿಸಿದ್ದಾರೆ. ಎರಡನೆಯದು ಗೋಪುರಕ್ಕೆ ಚಿನ್ನದ ಲೇಪನ ಸಿಂಪಡಿಸುವ ತಂತ್ರಜ್ಞಾನ ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಯಂತ್ರೋಪಕರಣ ಬಳಕೆಗೆ ಆಗಮ ಪಂಡಿತರ ಅನುಮತಿ
"ದೇಗುಲದ ಗೋಪುರಕ್ಕೆ ಚಿನ್ನದ ಲೇಪನ ಮಾಡಲು ಸಾಂಪ್ರದಾಯಿಕ ಶೈಲಿಯ ಬದಲಿಗೆ ಯಂತ್ರೋಪಕರಣಗಳನ್ನು ಬಳಸಲು ಆಗಮ ಪಂಡಿತರಿಂದ ಅನುಮತಿ ಪಡೆದಿದ್ದೇವೆ. ಯಾವ ತಂತ್ರಜ್ಞಾನವನ್ನು ಬಳಸಬೇಕು ಎಂಬುದರ ಕುರಿತು ಮುಂದಿನ ಮಂಡಳಿಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಸಾಂಪ್ರದಾಯಿಕ ಶೈಲಿಯನ್ನು ತೊರೆದು ಯಂತ್ರಗಳ ಬಳಕೆ ಮಾಡಲು ಆಗಮ ಪಂಡಿತರು, ಶಾಸ್ತ್ರ ಸಂಪ್ರದಾಯಗಳ ಅನುಮತಿ ಪಡೆಯಬೇಕು. ಮಂಡಳಿ ಸಭೆಯಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ ಬಳಿಕ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ಬಾರಿ ಅದ್ದೂರಿ ಬ್ರಹ್ಮೋತ್ಸವ ಆಯೋಜನೆ
ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ಇತರ ನಿರ್ಣಯಗಳ ಕುರಿತು ಮಾತನಾಡಿದ ಅವರು, ಈ ವರ್ಷ ವೆಂಕಟೇಶ್ವರ ದೇವಸ್ಥಾನದ ವಾರ್ಷಿಕ ಬ್ರಹ್ಮೋತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ 2020 ಮತ್ತು 2021ರಲ್ಲಿ ವಾರ್ಷಿಕ ಹಬ್ಬವನ್ನು ಸರಳವಾಗಿ ನಡೆಸಲಾಯಿತು. ಕಾರ್ಯಕ್ರಮದ ಸಮಯದಲ್ಲಿ ಭಕ್ತರು ಭಗವಂತನ ದರ್ಶನ ಪಡೆಯಲು ನಾಲ್ಕು ಬೀದಿಗಳಲ್ಲಿ ಎಲ್ಲಾ ವಾಹನ ಸೇವೆಗಳು ನಡೆಯುತ್ತವೆ ಎಂದು ತಿಳಿಸಿದರು.
ಸೆಪ್ಟೆಂಬರ್ 27 ರಂದು ಬ್ರಹ್ಮೋತ್ಸವದ ಮೊದಲ ದಿನದಂದು ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ದೇವರಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸಲಿದ್ದಾರೆ. ಅಕ್ಟೋಬರ್ 1 ರಂದು ಗರುಡ ಸೇವೆ ಮತ್ತು ಅಕ್ಟೋಬರ್ 5 ರಂದು ಚಕ್ರ ಸ್ನಾನದೊಂದಿಗೆ ಬ್ರಹ್ಮೋತ್ಸವಗಳು ಮುಕ್ತಾಯಗೊಳ್ಳಲಿವೆ, ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ವಿವರಣೆ ನೀಡಿದರು.
ವೆಂಕಟೇಶ್ವರ ವೈಭವೋತ್ಸವ ಪುನರಾರಂಭ
ವೆಂಕಟೇಶ್ವರ ವೈಭವೋತ್ಸವವನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ ಮತ್ತು ಮೊದಲನೆಯದು ನೆಲ್ಲೂರು ಜಿಲ್ಲೆಯಲ್ಲಿ ಆಗಸ್ಟ್ 16 ರಿಂದ 20 ರವರೆಗೆ ವೈಭವೋತ್ಸವ ನಡೆಯಲಿದೆ ಎಂದು ಅವರು ಹೇಳಿದರು. "ತಿರುಪತಿಯಲ್ಲಿ ಸಂಪೂರ್ಣ ಅಧ್ಯಯನದ ನಂತರವೇ ಸರ್ವ ದರ್ಶನ ಟೋಕನ್ ವಿತರಣೆಯನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಭವಿಷ್ಯದಲ್ಲಿ ಭಕ್ತರಿಗೆ ದೀರ್ಘ ಕಾಯುವ ಅನಾನುಕೂಲತೆಯನ್ನು ತಪ್ಪಿಸಲಾಗುವುದು" ಎಂದು ಸುಬ್ಬಾರೆಡ್ಡಿ ಹೇಳಿದ್ದಾರೆ.