ತಿರುಮಲದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ; ಘೋಷಣೆ ಮಾಡಿದ ಟಿಟಿಡಿ
ತಿರುಮಲ, ಏಪ್ರಿಲ್ 21: ತಿರುಮಲದಲ್ಲಿರುವ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ತಿರುಪತಿ ತಿರುಮಲ ದೇವಸ್ಥಾನ ಮಂಡಳಿ ಬುಧವಾರ ಮತ್ತೊಮ್ಮೆ ಘೋಷಣೆ ಮಾಡಿದೆ.
ಈಚೆಗಷ್ಟೆ, ಭಗವಾನ್ ವೆಂಕಟೇಶ್ವರನ ವಾಸಸ್ಥಾನವಾದ ತಿರುಮಲವು ಭಗವಾನ್ ಅಂಜನೇಯನ ಜನ್ಮಸ್ಥಳ ಎಂದು ಹೇಳಿ ತಗಾದೆ ತೆಗೆದಿತ್ತು. ಜೊತೆಗೆ ಹೊಸ ವರ್ಷವಾದ ಯುಗಾದಿಯಂದು (ಏಪ್ರಿಲ್ 13) ಸಾಕ್ಷ್ಯವನ್ನು ಸಾಬೀತುಪಡಿಸುವುದಾಗಿ ತಿಳಿಸಿತ್ತು.
ಅಂಜನಾದ್ರಿ ಬೆಟ್ಟ ಆಂಜನೇಯನ ಜನ್ಮಸ್ಥಳ ಅಲ್ವಂತೆ, ತಿರುಮಲ ಅಂತೆ: ಟಿಟಿಡಿ ಹೊಸ ಕ್ಯಾತೆ
ತಿರುಮಲದಲ್ಲಿರುವ ಅಂಜನಾದ್ರಿ ಭಗವಾನ್ ಅಂಜನೇಯನ ಜನ್ಮಸ್ಥಳವಾಗಿದ್ದು, ಕರ್ನಾಟಕದ ಬಳ್ಳಾರಿ ಜಿಲ್ಲೆಯ ಹಂಪಿಯಲ್ಲಿರುವ ಅಂಜನಾದ್ರಿ ಬೆಟ್ಟವಲ್ಲ ಎಂದು ಹೇಳಿಕೆ ನೀಡಿ, ಅದಕ್ಕೆ ಪೂರಕವಾದ ಶಿಲಾಶಾಸನ ಮತ್ತು ವೈಜ್ಞಾನಿಕ ಪುರಾವೆಗಳನ್ನು ಪ್ರಸ್ತುತಪಡಿಸುವುದಾಗಿ ತಿಳಿಸಿತ್ತು. ಇಂದು ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಘೋಷಣೆ ಮಾಡಿದೆ. ಮುಂದೆ ಓದಿ...
ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿದ್ದ ಟಿಟಿಡಿ
ಆಂಜನೇಯನ ಜನ್ಮಸ್ಥಳದ ಕುರಿತು ಅಧ್ಯಯನ ನಡೆಸಲು ಟಿಟಿಡಿ ಅಧ್ಯಯನ ಸಮಿತಿಯನ್ನು ರಚಿಸಿ ಕಳೆದ ಡಿಸೆಂಬರ್ನಲ್ಲಿ ತಜ್ಞರನ್ನು ನೇಮಿಸಿತ್ತು. ಅಧ್ಯಯನ ನಡೆಸಿ ಅಭಿಪ್ರಾಯ ತಿಳಿಸುವಂತೆ ರಾಷ್ಟ್ರೀಯ ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಮುರಳೀಧರ ಶರ್ಮಾ ಅವರ ನೇತೃತ್ವದಲ್ಲಿ ವಿದ್ವಾಂಸರನ್ನು ಒಳಗೊಂಡ ಸಮಿತಿಗೆ ಸೂಚಿಸಿತ್ತು. ಪುರಾತನ ಸಾಹಿತ್ಯ, ಶಾಸನಗಳು, ಐತಿಹಾಸಿಕ ಸಂಗತಿಗಳ ಆಧಾರದಲ್ಲಿ ಹಲವಾರು ಸಾಕ್ಷ್ಯಗಳನ್ನು ಸಂಗ್ರಹಿಸಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಪ್ರೊ. ಶರ್ಮಾ ಹೇಳಿದ್ದಾರೆ.
"ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ"
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಅಂಜನಿ ದೇವಿ ಆಕಾಶ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿ, ಭಗವಾನ್ ಆಂಜನೇಯನಿಗೆ ಜನ್ಮ ನೀಡಲು ಮೊದಲು ತಪಸ್ಸು ಮಾಡಿದರು ಎಂಬುದು ಟಿಟಿಡಿ ಅಭಿಪ್ರಾಯವಾಗಿತ್ತು. ತಿರುಮಲದ ಉತ್ತರ ದಿಕ್ಕಿನಲ್ಲಿ, ಐದು ಕಿಲೋ ಮೀಟರ್ ದೂರದಲ್ಲಿ ಜಾಪಾಲಿ ತೀರ್ಥವಿದೆ. ಪರ್ವತಗಳಿಂದ ಆವೃತವಾಗಿರುವ ಈ ಪ್ರದೇಶದಲ್ಲಿ ಅಂಜನಾದ್ರಿ ಇದ್ದು, ಇದೇ ಆಂಜನೇಯನ ಜನ್ಮಸ್ಥಳ ಎಂದು ಮಂಡಳಿ ಹೇಳಿದೆ.
ರಾಮನವಮಿಯಂದು ಘೋಷಣೆ ಮಾಡಿದ ಟಿಟಿಡಿ
ರಾಮನವಮಿ ದಿನವಾದ ಬುಧವಾರ, ತಮಿಳುನಾಡು ರಾಜ್ಯಪಾಲ ಬನ್ವಾರಿ ಲಾಲ್ ಪುರೋಹಿತ್ ಅವರ ಸಮ್ಮುಖದಲ್ಲಿ ಸಮಿತಿಯು ಈ ಘೋಷಣೆ ಮಾಡಿದೆ. ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್. ಜವಾಹರ್ ರೆಡ್ಡಿ, ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮರೆಡ್ಡಿ ಉಪಸ್ಥಿತರಿದ್ದರು. "ಶ್ರೀಆಂಜನೇಯಸ್ವಾಮಿ ವಾರಿ ಜನ್ಮಸ್ಥಲಂ ತಿರುಮಲೋನಿ ಅಂಜನಾದ್ರಿ" ಎಂಬ ಶೀರ್ಷಿಕೆಯ ಕಿರುಹೊತ್ತಿಗೆಯನ್ನು ಸಮಿತಿ ಸಿದ್ಧಪಡಿಸಿದ್ದು, ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಪ್ರತಿಪಾದಿಸಲಾಗಿದೆ.
ಪುಸ್ತಕ ಸಿದ್ಧಪಡಿಸಿದ ಸಮಿತಿ
"ಶಿವ, ಬ್ರಹ್ಮ, ಬ್ರಹ್ಮಾಂಡ, ವರಾಹ ಮತ್ತು ಮತ್ಸ್ಯ ಪುರಾಣಗಳು, ವೆಂಕಟಾಚಲ ಮಹಾತ್ಯಂ ಮತ್ತು ವರಾಹಮಿಹಿರಾ ಬೃಹತ್ ಸಂಹಿತಾದ ಸಾಕ್ಷ್ಯಗಳು ತಿರುಮಲದಲ್ಲಿರುವ ಅಂಜನಾದ್ರಿ ಭಗವಾನ್ ಆಂಜನೇಯನ ಜನ್ಮಸ್ಥಳವಾಗಿದೆ'' ಎಂದು ಈ ಮುನ್ನ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಸ್ ಜವಾಹರ್ ರೆಡ್ಡಿ ಅವರು ಹೇಳಿದ್ದರು.