ಕೊರೊನಾ ಮುಂದೆ ತಿಮ್ಮಪ್ಪನೂ ಮಂಕು; ಕಾರ್ಮಿಕರಿಗೆ ಸಂಬಳ ಕೊಡಲು ಹಣವಿಲ್ಲ
ತಿರುಪತಿ , ಮೇ 12: ಕೊರೊನಾ ಲಾಕ್ಡೌನ್ನಿಂದ ಪ್ರಪಂಚದ ಅತ್ಯಂತ ಶ್ರೀಮಂತ ದೇವಾಲಯವಾದ ತಿರುಪತಿ ದೇವಸ್ಥಾನದ ಮೇಲೆ ಕರಿನೆರಳು ಬಿದ್ದಿದೆ. ಕಳೆದ ಎರಡು ತಿಂಗಳಿಂದ ದೇವಸ್ಥಾನದ ಹುಂಡಿ ಖಾಲಿ ಇರುವುದರಿಂದ ಕಾರ್ಮಿಕರಿಗೆ ಸಂಬಳ ನೀಡಲು ಹಣದ ಕೊರತೆ ಎದುರಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ (ಟಿಟಿಡಿ) ಹೇಳಿಕೊಂಡಿದೆ.
Recommended Video
ಕೊರೊನಾ ತಡೆಗಟ್ಟಲು ದೇಶದಲ್ಲಿ ಲಾಕ್ಡೌನ್ ಜಾರಿಯಿರುವುದರಿಂದ ದೇವಸ್ಥಾನವನ್ನು ಮುಚ್ಚಲಾಗಿದೆ. ಇದರಿಂದ ಭಕ್ತರು ಸಲ್ಲಿಸುತ್ತಿದ್ದ ದೇಣಿಗೆ ಹಣ, ಹುಂಡಿ ಹಣಕ್ಕೆ ತಡೆಯಾಗಿದೆ.
ಲಾಕ್ಡೌನ್: ತಿರುಪತಿ ದೇವಸ್ಥಾನದ ಕಾರ್ಮಿಕರ ಆತಂಕ ದೂರ
ಈ ಅವಧಿಯಲ್ಲಿ ದೇವಸ್ಥಾನಕ್ಕೆ ಬರಬಹುದಾಗಿದ್ದ ಸುಮಾರು 400 ಕೋಟಿ ಹಣ ಬಂದಿಲ್ಲ. ಹೀಗಾಗಿ ಕಾರ್ಮಿಕರಿಗೆ ಸಂಬಳ ನೀಡಲು ಹಣದ ಕೊರತೆ ಎದುರಾಗಿದೆ ಎಂದು ಟಿಟಿಡಿ ತಿಳಿಸಿದೆ. ಹುಂಡಿಯಿಂದ ಪ್ರತಿ ತಿಂಗಳು 130 ರಿಂದ 150 ಕೋಟಿ ರುಪಾಯಿ ಹಾಗೂ ಅಂಗಡಿ, ಮುಂಗಟ್ಟು, ವಸತಿ ಗೃಹಗಳಿಂದ 250 ಕೋಟಿ ರುಪಾಯಿ ಟಿಟಿಡಿಗೆ ಆದಾಯವಿದೆ.
ಸಿಬ್ಬಂದಿಗಳೆಷ್ಟು?
ಪ್ರತಿ ತಿಂಗಳು ಕಾರ್ಮಿಕರಿಗೆ ಸಂಬಳ ಹಾಗೂ ಪಿಂಚಣಿ ರೂಪದಲ್ಲಿ 120 ಕೋಟಿ ರುಪಾಯಿ ಹಣವನ್ನು ಟಿಟಿಡಿ ವ್ಯಯಿಸುತ್ತದೆ. ದೇವಸ್ಥಾನದಲ್ಲಿ 2000 ಕ್ಕೂ ಹೆಚ್ಚು ವಿವಿಧ ಶ್ರೇಣಿಯ ಕಾರ್ಮಿಕರು ಹಾಗೂ 300 ಜನ ಹಿರಿಯ ಸಿಬ್ಬಂದಿಗಳು ಮತ್ತು 1500 ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ.
1350 ಕೋಟಿ ರುಪಾಯಿಯನ್ನು ವ್ಯಯಿಸುತ್ತದೆ
ಪ್ರತಿ ವರ್ಷ ತಿರುಪತಿ ತಿರುಮಲ ದೇವಸ್ಥಾನ ಕಾರ್ಮಿಕರಿಗೆ, ಸಿಬ್ಬಂದಿಗೆ ಸಂಬಳ ನೀಡಲು ಅಂದಾಜು 1350 ಕೋಟಿ ರುಪಾಯಿಯನ್ನು ವ್ಯಯಿಸುತ್ತದೆ. ಕಳೆದ ಎರಡು ತಿಂಗಳಿನಿಂದ ಲಾಕ್ಡೌನ್ ಅವಧಿಯಲ್ಲಿ ಟಿಟಿಡಿ 300 ಕೋಟಿ ರುಪಾಯಿ ವ್ಯಯಿಸಿದೆ.
ಒಂದು ಲಕ್ಷದವರೆಗೆ ಭಕ್ತರು
ಸಾಮಾನ್ಯ ದಿನಗಳಲ್ಲಿ ತಿರುಪತಿ ದೇವಸ್ಥಾನಕ್ಕೆ ಪ್ರತಿ ದಿನ 80 ರಿಂದ 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ವಿಶೇಷ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಿರುತ್ತದೆ. ಕೊರೊನಾ ಲಾಕ್ಡೌನ್ ಜಾರಿಯಾದ ನಂತರ ದೇವಸ್ಥಾನದ ಪೂಜಾ ಕೈಂಕರ್ಯಗಳನ್ನು ಹೊರತಪಡಿಸಿ ಎಲ್ಲ ಚಟುವಟಿಕೆಗಳನ್ನು ರದ್ದು ಮಾಡಲಾಗಿದೆ.
ಗುತ್ತಿಗೆ ಕಾರ್ಮಿಕರು ಸಂಕಷ್ಟದಲ್ಲಿ
ಟಿಟಿಡಿಗೆ ಆದಾಯದಲ್ಲಿ ಖೋತಾ ಆಗಿರುವುದರಿಂದ ಗುತ್ತಿಗೆ ಕಾರ್ಮಿಕರು ತೀವ್ರ ಆತಂಕದಲ್ಲಿ ಸಿಲುಕಿದ್ದಾರೆ. ಗುತ್ತಿಗೆ ಕಾರ್ಮಿಕರಿಗೆ ಈ ತಿಂಗಳು ಸಂಬಳ ನೀಡಲು ಆಗುವುದಿಲ್ಲ ಎಂದು ಟಿಟಿಡಿ ತಿಳಿಸಿತ್ತು. ಕಡೆಗೆ ಮಾನವೀಯತೆ ದೃಷ್ಟಿಯಿಂದ ಈ ಒಂದು ತಿಂಗಳು ಗುತ್ತಿಗೆ ಕಾರ್ಮಿಕರಿಗೆ ಸಂಬಳ ನೀಡಲಾಗುತ್ತದೆ ಎಂದು ಟಿಟಿಡಿ ಹೇಳಿತ್ತು. ಲಾಕ್ಡೌನ್ ಹೀಗೆ ಮುಂದುವರೆದರೆ ತಿರುಪತಿ ದೇವಸ್ಥಾನದ ಕಾರ್ಮಿಕರಿಗೆ ತಿಮ್ಮಪ್ಪನೇ ಗತಿ ಎನ್ನುವ ಹಾಗಾಗಿದೆ.