ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಿದ್ದು ನಾವು: ಟಿಡಿಪಿ, ವೈಎಸ್ಆರ್ ಕಿತ್ತಾಟ- ವಾಸ್ತವ ಬೇರೆಯಾ?
ತಿರುಪತಿ, ಮೇ 5: ಗುರುವಾರ ತಿಮ್ಮಪ್ಪನ ಸನ್ನಿಧಾನದಲ್ಲಿ ಬೃಹತ್ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆಯಾಗಿದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಶ್ರೀ ವೆಂಕಟೇಶ್ವರ ಇನ್ಸ್ಟಿಟ್ಯೂಟ್ ಆಫ್ ಕ್ಯಾನ್ಸರ್ ಕೇರ್ ಅಂಡ್ ಅಡ್ವಾನ್ಸ್ಡ್ ರಿಸರ್ಚ್ (SVICCAR) ಆಸ್ಪತ್ರೆಗೆ ಚಾಲನೆ ನೀಡಿದರು. ಟಾಟಾ ಟ್ರಸ್ಟ್ ನಿರ್ಮಿಸಿರುವ ಇದು ಆಂಧ್ರದಲ್ಲೇ ಎರಡನೇ ಅತಿ ದೊಡ್ಡ ಕ್ಯಾನ್ಸರ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬರೋಬ್ಬರಿ 25 ಎಕರೆ ಪ್ರದೇಶದಲ್ಲಿರುವ ಈ ಆಸ್ಪತ್ರೆಯ ಉದ್ಘಾಟನೆ ಮೂಲಕ ಸಿಎಂ ಭರ್ಜರಿ ಪ್ರಚಾರ ಪಡೆದಿದ್ದಾರೆ. ಜಗನ್ ಮೋಹನ್ ರೆಡ್ಡಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ. ಇದು ಹಿಂದಿನ ಅವಧಿಯಲ್ಲಿ ಅಡಳಿತ ನಡೆಸಿದ್ದ ತೆಲುಗು ದೇಶಂ ಪಕ್ಷಕ್ಕೆ ಇರಿಸುಮುರುಸು ತಂದಿದೆ.
ತಿರುಪತಿಯಲ್ಲಿ ಇಂದು ಅತಿದೊಡ್ಡ ಕ್ಯಾನ್ಸರ್ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಉದ್ಘಾಟನೆ
ಟಿಡಿಪಿಯ ಚಂದ್ರಬಾಬು ನಾಯ್ಡು ಸಿಎಂ ಆಗಿದ್ದ ಅವಧಿಯಲ್ಲಿ ಆರಂಭಗೊಂಡ ಯೋಜನೆ ಇದು. ನಾಯ್ಡು 2018 ಆಗಸ್ಟ್ 31ರಂದು ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಒಂದೇ ವರ್ಷದಲ್ಲಿ ನಿರ್ಮಾಣವಾಗಬೇಕಿದ್ದ ಆಸ್ಪತ್ರೆ ತುಸು ವಿಳಂಬವಾಗಿ ಮುಗಿದಿದೆ. ಆದರೆ, ಈಗ ವೈಎಸ್ಸಾರ್ ಕಾಂಗ್ರೆಸ್ ಪಕ್ಷದವರು ಆಸ್ಪತ್ರೆಯ ಕ್ರೆಡಿಟ್ ಪಡೆದುಕೊಳ್ಳುತ್ತಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ನಾಯಕರು ಅಲವತ್ತುಕೊಂಡಿದ್ದಾರೆ.
"ಚಂದ್ರಬಾಬು ನಾಯ್ಡು ತಿರುಪತಿಯಲ್ಲಿ ಟಾಟಾ ಕ್ಯಾನ್ಸರ್ ರೀಸರ್ಚ್ ಇನ್ಸ್ಟಿಟ್ಯೂಟ್ ಸ್ಥಾಪನೆಗೆ ಕ್ರಮ ಕೈಗೊಂಡರು. ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕಾಗಿ ರತನ್ ಟಾಟಾ ಅವರನ್ನು ಕರೆತಂದರು. ಈಗ ಆಸ್ಪತ್ರೆ ಉದ್ಘಾಟನೆಯಲ್ಲಿ ಜಗನ್ ಟೇಪ್ ಕಟ್ ಮಾಡುತ್ತಾ ಯೋಜನೆಯ ಲಾಭ ಪಡೆದುಕೊಳ್ಳುತ್ತಿರುವುದು ಎಷ್ಟು ಸರಿ" ಎಂದು ಟ್ವಿಟ್ಟರ್ನಲ್ಲಿ ಟಿಡಿಪಿ ಆರ್ಭಟಿಸಿದೆ.
ಆಂಬ್ಯುಲೆನ್ಸ್ಗೆ ಹಣ ನೀಡಲಾಗದೆ ಮಗನ ಶವವನ್ನು ಬೈಕ್ನಲ್ಲಿ ಹೊತ್ತು ಸಾಗಿದ ತಂದೆ
ವಾಸ್ತವವೇ ಬೇರೆ; ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಕಾರ್ಯದಲ್ಲಿ ಟಿಡಿಪಿಯಾಗಲೀ, ವೈಎಸ್ಸಾರ್ ಕಾಂಗ್ರೆಸ್ ಆಗಲಿ ಹೆಚ್ಚಿನ ಪಾತ್ರ ಹೊಂದಿಲ್ಲ ಎಂಬುದು ವಾಸ್ತವ. ತಿರುಪತಿ ಬಳಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಟಾಟಾ ಟ್ರಸ್ಟ್ಗೆ ಮನವಿ ಮಾಡಿತ್ತು.
ಅದರಂತೆ ಟಾಟಾ ಸಂಸ್ಥೆ ಈ ಯೋಜನೆಗೆ ಆಸಕ್ತಿ ವಹಿಸಿ ಮುಂದೆ ಬಂದಿತು. ತಿರುಪತಿಯ ಝೂ ಪಾರ್ಕ್ ರಸ್ತೆಯಲ್ಲಿ ಟಿಟಿಡಿಗೆ ಸೇರಿದ 25 ಎಕರೆ ಭೂಮಿಯನ್ನು ಆಸ್ಪತ್ರೆ ನಿರ್ಮಾಣಕ್ಕೆ ಬಿಟ್ಟುಕೊಡಲಾಯಿತು. ಟಾಟಾ ಟ್ರಸ್ಟ್ನವರು ಸುಮಾರು 600 ಕೋಟಿ ರೂ ವೆಚ್ಚದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಿದ್ದಾರೆ. ಎರಡು ಪ್ರಾಮಾಣಿಕ ಸಂಸ್ಥೆಗಳಿಗೆ ಹೋಗಬೇಕಿದ್ದ ಕ್ರೆಡಿಟ್ ಅನ್ನು ರಾಜಕೀಯ ಪಕ್ಷಗಳು ತಮ್ಮೆಡೆಗೆ ಸೆಳೆದುಕೊಳ್ಳಲು ಯತ್ನಿಸುತ್ತಿರುವುದು ವಿಪರ್ಯಾಸವೇ ಸರಿ.
ಟಾಟಾ ಟ್ರಸ್ಟ್ ಕಟ್ಟಿರುವ ಈ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಸೇರಿದಂತೆ ಎಲ್ಲಾ ರೀತಿಯ ಸೌಕರ್ಯಗಳನ್ನ ಒದಗಿಸಲಾಗಿದೆ. 92 ಬೆಡ್ ವ್ಯವಸ್ಥೆ ಮಾಡಲಾಗಿದೆ. ಆಂಧ್ರದ ಇನ್ನೂ ಹಲವು ಕಡೆ ಟಾಟಾ ಟ್ರಸ್ಟ್ ಸಂಸ್ಥೆ ಕ್ಯಾನ್ಸರ್ ಆಸ್ಪತ್ರೆಗಳನ್ನ ನಿರ್ವಹಿಸುತ್ತಿದೆ. ಈಗ ತಿರುಪತಿ ತಿಮ್ಮಪ್ಪನ ಸನ್ನಿಧಿ ಬಳಿಯೇ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ ನಿರ್ಮಾಣವಾಗಿದೆ.
(ಒನ್ಇಂಡಿಯಾ ಸುದ್ದಿ)