ಪವನ್ ಕಲ್ಯಾಣ್ ಬೆಂಬಲ ಶೇ 200ರಷ್ಟು ಇದೆ: ತಿರುಪತಿ ಬಿಜೆಪಿ ಅಭ್ಯರ್ಥಿ ರತ್ನಪ್ರಭ ವಿಶ್ವಾಸ
ತಿರುಪತಿ, ಮಾರ್ಚ್ 29: ಆಂಧ್ರಪ್ರದೇಶದ ತಿರುಪತಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಕರ್ನಾಟಕದ ಮಾಜಿ ಐಎಎಸ್ ಅಧಿಕಾರಿ ಕೆ. ರತ್ನಪ್ರಭ, ಸಂಸತ್ನಲ್ಲಿ ತಿರುಪತಿ ಮತ್ತು ಆಂಧ್ರಪ್ರದೇಶದ ಜನರ ಧ್ವನಿಯಾಗುವುದಾಗಿ ತಿಳಿಸಿದ್ದಾರೆ.
ತಿರುಪತಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಭಾನುವಾರ ಮೊದಲ ಬಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರತ್ನಪ್ರಭ, ದೇವರ ಆಶೀರ್ವಾದಿಂದ ತಮಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ. ಜನರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು, ಯಾವುದೇ ವೇದಿಕೆಯಲ್ಲಿ ಅಭಿವೃದ್ಧಿಯ ಅಗತ್ಯವಾದ ಯಾವುದೇ ಕ್ರಮಕ್ಕೆ ಮುಂದಾಗಲು ಮತ್ತು ಅಗತ್ಯಬಿದ್ದರೆ ಪ್ರಧಾನಿ ಬಳಿ ಧ್ವನಿ ಎತ್ತಲು ಕೂಡ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.
ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರತ್ನಪ್ರಭಾ
22 ಸಂಸದರಿದ್ದರೂ ನಮ್ಮ ಸಮಸ್ಯೆಗಳು ಎದ್ದು ಕಾಣಿಸುತ್ತಿಲ್ಲ ಮತ್ತು ನಮ್ಮ ಧ್ವನಿಯನ್ನು ಆಲಿಸುತ್ತಿಲ್ಲ ಎಂದು ವೈಎಸ್ಆರ್ ಕಾಂಗ್ರೆಸ್ ಸಂಸದರನ್ನು ಪರೋಕ್ಷವಾಗಿ ಟೀಕಿಸಿದ ರತ್ನಪ್ರಭ, ರಾಜ್ಯದ ಒಳಿತಿಗಾಗ ಹೋರಾಡಲು ತಮಗೆ ಚುನಾವಣೆಯಲ್ಲಿ ಗೆಲುವು ನೀಡಬೇಕು ಎಂದು ಕೋರಿದರು. ತಾವು ಆಂಧ್ರಪ್ರದೇಶದ ಮಣ್ಣಿನ ಮಗಳು. ಆಂಧ್ರಪ್ರದೇಶ ಜನ್ಮಭೂಮಿ ಮತ್ತು ಕರ್ನಾಟಕ ತಮ್ಮ ಕರ್ಮಭೂಮಿ ಎಂದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ತಮ್ಮ ಬಯಕೆಯ ಕಾರಣಕ್ಕೆ ನಿವೃತ್ತಿ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದಾಗಿ ತಿಳಿಸಿದ ಅವರು, ಪವನ್ ಕಲ್ಯಾಣ್ ಅವರ ಜನ ಸೇನಾ ಪಕ್ಷ ಈ ಚುನಾವಣೆಯಲ್ಲಿ ತಮಗೆ ಬೆಂಬಲ ನೀಡುತ್ತಿಲ್ಲ ಎಂಬ ಹೇಳಿಕೆಗಳು ಶೇ 200ರಷ್ಟು ಸತ್ಯಕ್ಕೆ ದೂರ ಎಂದರು.
'ನನ್ನ ಕೋರಿಕೆಯಂತೆ ಪವನ್ ಕಲ್ಯಾಣ್ ಅವರು ಪ್ರಚಾರದಲ್ಲಿ ಭಾಗವಹಿಸುವ ಭರವಸೆ ನೀಡಿದ್ದಾರೆ. ತಮ್ಮ ಪ್ರವಾಸಕ್ಕೆ ನಕಾಶೆ ಸಿದ್ಧಪಡಿಸುವಂತೆ ತಿಳಿಸಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಮತ್ತು ಜನ ಸೇನಾ ಜತೆಗೂಡಿ ಕೆಲಸ ಮಾಡಲಿವೆ' ಎಂದು ತಿಳಿಸಿದ್ದಾರೆ.