ತಿರುಪತಿ ಭಕ್ತರಿಗೆ ಸಿಹಿಸುದ್ದಿ, ಪಾದಯಾತ್ರೆಗೆ ಶ್ರೀವಾರಿ ಮೆಟ್ಟಿಲು ಸಿದ್ಧ
ಅಮರಾವತಿ, ಮೇ 05; ತಿರುಪತಿಗೆ ಪಾದಯಾತ್ರೆ ಮೂಲಕ ಹೋಗುವ ಭಕ್ತರಿಗೆ ಸಿಹಿಸುದ್ದಿ. ತಿರುಪತಿ ಶ್ರೀವಾರಿ ಮೆಟ್ಟಿಲು ಮಾರ್ಗ ಪುನಾರಂಭಗೊಂಡಿದೆ. ಕಳೆದ ವರ್ಷದ ನವೆಂಬರ್ನಲ್ಲಿ ಸುರಿದ ಮಳೆಯಿಂದ ಪಾದಚಾರಿ ಮಾರ್ಗದ ಮೆಟ್ಟಿಲುಗಳಿಗೆ ಹಾನಿಯಾಗಿತ್ತು.
ಮೆಟ್ಟಿಲುಗಳ ದುರಸ್ತಿ ಕಾರ್ಯ ಈಗ ಪೂರ್ಣಗೊಂಡಿದ್ದು ಗುರುವಾರ ಮೆಟ್ಟಿಲುಗಳನ್ನು ಸಾರ್ವಜನಿಕರ ಪ್ರವೇಶಕ್ಕೆ ಉದ್ಘಾಟಿಸಲಾಗಿದೆ. ಇದರಿಂದಾಗಿ ತಿರುಪತಿಗೆ ಪಾದಯಾತ್ರೆ ಮೂಲಕ ದೇವರ ದರ್ಶನಕ್ಕೆ ಹೋಗುವವರಿಗೆ ಅನುಕೂಲವಾಗಿದೆ.
2021ರ ನವೆಂಬರ್ನಲ್ಲಿ ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗಿತ್ತು. ತಿರುಪತಿ, ನೆಲ್ಲೂರು, ತಿರುಮಲ ಬೆಟ್ಟ, ಘಾಟ್ ರಸ್ತೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ದೇಗುಲ ಸಂಪೂರ್ಣವಾಗಿ ಜಲಾವೃತಗೊಂಡು ವಿಶ್ವತ ಅತ್ಯಂತ ಶ್ರೀಮಂತ ದೇವರಾದ ತಿರುಪತಿ ತಿಮ್ಮಪ್ಪನ ದೇಗುಲದ ಬಾಗಿಲು ಮುಚ್ಚವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನವಸತಿ ಪ್ರದೇಶಗಳು ನಗರದ ಹಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಸಿಕ್ಕಿ ವಾಹನಗಳು ಕೊಚ್ಚಿ ಹೋಗಿದ್ದವು. ಇನ್ನು ತಿರುಮಲ ಬೆಟ್ಟಕ್ಕೆ ಹತ್ತುವ ರಸ್ತೆ ಮಾರ್ಗದಲ್ಲಿ ಹಲವೆಡೆ ಭೂಕುಸಿತ ಉಂಟಾಗಿ ಬೆಟ್ಟ ಕುಸಿದು ರಸ್ತೆಗಳು ಸಂಪೂರ್ಣವಾಗಿ ಕೊಚ್ಚಿಹೋಗಿತ್ತು.
ಪಾದಾಚಾರಿ ಮಾರ್ಗಕ್ಕೆ ಗ್ರೀನ್ ಸಿಗ್ನಲ್; ಪಾದಾಚಾರಿ ಮಾರ್ಗದಲ್ಲಿ ಎಲ್ಲೆಲ್ಲಿ ಮೆಟ್ಟಿಲುಗಳಿಗೆ ಹಾನಿಯಾಗಿತ್ತೋ ಅವುಗಳನ್ನು ಸಂಪೂರ್ಣ ದುರಸ್ಥಿ ಮಾಡಲಾಗಿದೆ. ಮಾರ್ಗ ಉದ್ಘಾಟನೆಗೂ ಮುನ್ನ 20 ಕಿ. ಮೀ. ದೂರದಲ್ಲಿರುವ ಶ್ರೀವಾರಿಮೆಟ್ಟುವಿನಲ್ಲಿ ನಡೆದ ಪೂಜೆಯಲ್ಲಿ ಟಿಟಿಡಿ ಅಧ್ಯಕ್ಷ ವೈ. ವಿ. ಸುಬ್ಬಾರೆಡ್ಡಿ, ಕಾರ್ಯನಿರ್ವಹಣಾಧಿಕಾರಿ ಕೆ. ಎಸ್. ಜವಾಹರರೆಡ್ಡಿ ಹಾಗೂ ಹೆಚ್ಚುವರಿ ಇಒ ಎ. ವಿ .ಧರ್ಮಾರೆಡ್ಡಿ ಪಾಲ್ಗೊಂಡಿದ್ದರು.
ದೇಶದ ಶ್ರೀಮಂತ ದೇವಾಲಯಗಳ ಪೈಕಿ ತಿರುಪತಿಯೂ ಒಂದು. ವಿವಿಧ ರಾಜ್ಯಗಳ ಭಕ್ತರು ತಿಮ್ಮಪ್ಪನ ದರ್ಶನಕ್ಕಾಗಿ ಆಗಮಿಸುತ್ತಾರೆ. ಈಗ ದುರಸ್ತಿಗೊಂಡಿರುವ ಮಾರ್ಗ ಪಾದಯಾತ್ರೆಯಲ್ಲಿ ದೇಶರ ದರ್ಶನಕ್ಕೆ ಸಾಗಲು ಹತ್ತಿರದ ಮಾರ್ಗವಾಗಿದೆ.