ಲಾಕ್ ಡೌನ್ ತೆರವುಗೊಂಡ ನಂತರ ತಿರುಪತಿ ತಿಮ್ಮಪ್ಪನ 2ವಾರದ ಆದಾಯ ಪ್ರಕಟ
ಅಮರಾವತಿ, ಜೂನ್ 25: ಸುದೀರ್ಘ ಅವಧಿಯ ಲಾಕ್ ಡೌನ್ ನಂತರ ಭಕ್ತರಿಗೆ ದರ್ಶನಕ್ಕೆ ಮುಕ್ತವಾದ ತಿರುಮಲ ವೆಂಕಟೇಶ್ವರಸ್ವಾಮಿ ದೇವಾಲಯದ ಎರಡು ವಾರಗಳ ಆದಾಯ ಎಷ್ಟು ಎನ್ನುವುದನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಪ್ರಕಟಿಸಿದೆ.
ಜೂನ್ ಹನ್ನೊಂದರಿಂದ ಓಪನ್ ಆಗಿರುವ ದೇವಸ್ಥಾನದ ಎರಡು ವಾರದ ಆದಾಯ 7.5 ಕೋಟಿ. ಲಾಕ್ ಡೌನ್ ಅವಧಿಯಲ್ಲಿ ದೇವಸ್ಥಾನ ಬಂದ್ ಆಗಿದ್ದರಿಂದ ಸುಮಾರು ಐನೂರು ಕೋಟಿ ರೂಪಾಯಿ ಟಿಟಿಡಿಗೆ ನಷ್ಟವಾಗಿತ್ತು.
ಕೊರೊನಾ ಪಾಸಿಟೀವ್ ಭಕ್ತ ತಂದಿಟ್ಟ ಆವಾಂತರ: ತಿರುಪತಿ ತಿಮ್ಮಪ್ಪನಿಗೂ ಸಂಕಟ!
"ಹುಂಡಿಯಲ್ಲಿ ಆರು ಕೋಟಿ ಸಂಗ್ರಹವಾಗಿದ್ದರೆ, ಮುನ್ನೂರು ರೂಪಾಯಿಯ ಆನ್ಲೈನ್ ದರ್ಶನದ ಟಿಕೆಟಿನಿಂದ 1.5 ಕೋಟಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಭಕ್ತರು ಸಮರ್ಪಿಸಿರುವ, ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳ ಮೌಲ್ಯವು ಇದರಲ್ಲಿ ಸೇರಿಲ್ಲ" ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
"ಜೂನ್ 21ರಂದು ಒಂದೇ ದಿನ ಹುಂಡಿಯಲ್ಲಿ 67ಲಕ್ಷ ರೂಪಾಯಿ ಸಂಗ್ರಹವಾಗಿದ್ದರೆ, ಜೂನ್ 17ರಂದು 37 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಸಾಕಷ್ಟು ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಲಬೇಕಿರುವುದರಿಂದ, ದೇವಸ್ಥಾನ ಪುನರಾರಂಭಗೊಂಡ ಮೊದಲಿನಲ್ಲಿ ಆರು ಸಾವಿರ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತಿತ್ತು"ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
"ಈಗ ಮುನ್ನೂರು ರೂಪಾಯಿಯ ಟಿಕೆಟ್ ಹೊಂದಿರುವ ಆರು ಸಾವಿರ ಭಕ್ತರಿಗೆ ಮತ್ತು ಮೂರು ಸಾವಿರ ಭಕ್ತರಿಗೆ ಧರ್ಮದರ್ಶನದ ಮೂಲಕ, ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ"ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.
"ಲಾಕ್ ಡೌನ್ ತೆರವುಗೊಂಡ ನಂತರ ಇದುವರೆಗೆ ಸುಮಾರು 25ಸಾವಿರ ಭಕ್ತರು ಮುಡಿ ಅರ್ಪಿಸಿದ್ದಾರೆ. ಹಂತ ಹಂತವಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ" ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.