ವೈಕುಂಠ ಏಕಾದಶಿಯ ಒಂದೇ ದಿನದಂದು ತಿರುಮಲದಲ್ಲಿ ಒಂದೇ ದಿನ ರು. 4.39 ಕೋಟಿ ಸಂಗ್ರಹ
ತಿರುಪತಿ (ಆಂಧ್ರಪ್ರದೇಶ), ಡಿಸೆಂಬರ್ 27: ವೈಕುಂಠ ಏಕಾದಶಿಯಂದು (ಡಿಸೆಂಬರ್ 25, 2020- ಶುಕ್ರವಾರ) ತಿರುಮಲ ವೆಂಕಟೇಶ್ವರ ದೇವಸ್ಥಾನದಲ್ಲಿ 42,825 ಭಕ್ತರು ವೈಕುಂಠ ದ್ವಾರ ದರ್ಶನ ಪಡೆದಿದ್ದಾರೆ. ಲಾಕ್ ಡೌನ್ ನಿರ್ಬಂಧ ತೆರವಿನ ನಂತರ ಜೂನ್ 8ರಂದು ದೇವಸ್ಥಾನವು ಪುನರಾರಂಭ ಆದ ಮೇಲೆ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಹುಂಡಿ ಹಣ ಸಂಗ್ರಹವು ರು. 4.39 ಕೋಟಿಯಷ್ಟಾಗಿದೆ.
ಕೆಲವು ಭಕ್ತರು ದೇವಾಲಯದ ಆಡಳಿತ ಮಂಡಳಿ ವಿರುದ್ಧ ದೂರು ಹೇಳಿಕೊಂಡಿದ್ದಾರೆ. ತಾವು 10 ಸಾವಿರ ರುಪಾಯಿ ದೇಣಿಗೆ ಹಾಗೂ ಜತೆಗೆ ತಲಾ 1 ಸಾವಿರ ರುಪಾಯಿಯ ಟಿಕೆಟ್ ಖರೀದಿಸಿ, ವಿಶೇಷ ದರ್ಶನಕ್ಕಾಗಿ ಕಾಯ್ದಿರಿಸಿದ್ದರೂ 300 ರುಪಾಯಿ ಟಿಕೆಟ್ ಪಡೆದವರ ಜತೆಗೇ ತಾವೂ ದರ್ಶನ ಪಡೆಯಬೇಕಾಯಿತು ಎಂದು ಬೇಸರಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಟಿಟಿಡಿ ಸಿಬ್ಬಂದಿಯೊಂದಿಗೆ ಈ ಬಗ್ಗೆ ವಾಗ್ವಾದ ಕೂಡ ನಡೆಸಿದ್ದಾರೆ. ವೈಕುಂಠ ದ್ವಾರ ದರ್ಶನದ ನೂಕುನುಗ್ಗಲಿನಿಂದಾದ ಸಮಸ್ಯೆ ಬಗ್ಗೆ ಹಾಗೂ ಟಿಟಿಡಿ ಸವಾಲುಗಳನ್ನು ಆ ನಂತರ ವಿವರಣೆ ನೀಡಿ, ಹಿರಿಯ ಅಧಿಕಾರಿಗಳು ಭಕ್ತರನ್ನು ಸಮಾಧಾನ ಮಾಡಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಘಟನೆ ಬಗ್ಗೆ ಮಾತನಾಡಿದ್ದು, ಈ ಘಟನೆ ಆಗಿದ್ದು ಭಕ್ತರಲ್ಲಿನ ತಿಳಿವಳಿಕೆ ಕೊರತೆಯಿಂದ. ಶ್ರೀವಾಣಿ ಟ್ರಸ್ಟ್ ದಾನಿಗಳಿಗೂ ಮಹಾಲಘು ದರ್ಶನವೇ ಇತ್ತು. ಏಕೆಂದರೆ ಈ ಹತ್ತು ದಿನದಲ್ಲಿ ಭಾರೀ ಸಂಖ್ಯೆಯಲ್ಲಿ ಭಕ್ತರಿರುತ್ತಾರೆ. ಹೆಚ್ಚಿನ ಸಂಖ್ಯೆಯ ಭಕ್ತರಿಗೆ ದರ್ಶನ ದೊರಕಿಸಬೇಕು ಎಂಬುದು ಉದ್ದೇಶ. ಮಹಾಲಘು ದರ್ಶನ ಮಾತ್ರ ದೊರೆಯುತ್ತದೆ ಎಂಬ ಸಂಗತಿ ಟಿಟಿಡಿಯಿಂದ ಶ್ರೀವಾಣಿ ಟ್ರಸ್ಟ್ ಟಿಕೆಟ್ ನಲ್ಲಿ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ.
ಇನ್ನು ಇದೇ ವಿಚಾರದ ಬಗ್ಗೆ ಐವರು ಭಕ್ತರ ಗುಂಪು ಟಿಟಿಡಿ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಟಿಟಿಡಿಗೆ ಮುಜುಗರಕ್ಕೆ ಎಡೆ ಮಾಡಿದೆ.