ಪೊಲೀಸರ ಕಿರುಕುಳ: ಚಲಿಸುವ ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಕುಟುಂಬ
ಅಮರಾವತಿ, ನವೆಂಬರ್ 9: ಆಂಧ್ರಪ್ರದೇಶದಲ್ಲಿ ಪೊಲೀಸರ ದೌರ್ಜನ್ಯದ ಮತ್ತೊಂದು ಎದೆನಡುಗಿಸುವ ಪ್ರಕರಣ ವರದಿಯಾಗಿದ್ದು, ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.
ಎರಡು ಮಕ್ಕಳ ಸಹಿತ ನಾಲ್ವರ ಕುಟುಂಬವೊಂದು ಕರ್ನೂಲ್ನ ಪನ್ಯಮ್ ರೈಲ್ವೆ ನಿಲ್ದಾಣದಲ್ಲಿ ಚಲಿಸುವ ರೈಲಿನ ಎದುರು ಹಾರಿ ಜೀವ ಕಳೆದುಕೊಂಡ ಘಟನೆ ನವೆಂಬರ್ 3ರಂದು ನಡೆದಿದೆ. ಈ ಘಟನೆಯ ಬಳಿಕ ಅವರ ಸಾವಿನ ಕಾರಣ ವಿಡಿಯೋ ಮೂಲಕ ಬಹಿರಂಗವಾಗಿದೆ.
ಆಟೋ ಚಾಲಕನಾಗಿದ್ದ ಅಬ್ದುಲ್ ಸಲಾಮ್ ಎಂಬಾತನ ಕುಟುಂಬ ಈ ವಿಡಿಯೋ ಮಾಡಿದ್ದು ಅದರಲ್ಲಿ ನಂದ್ಯಾಲ್ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಸೋಮಶೇಖರ್ ರೆಡ್ಡಿ ಮತ್ತು ಕಾನ್ಸ್ಟೆಬಲ್ ಗಂಗಾಧರ್ ಅವರಿಂದ ದೈಹಿಕ ಮತ್ತು ಮಾನಸಿಕ ಕಿರುಕುಳ ಅನುಭವಿಸಿರುವುದಾಗಿ ಹೇಳಿದ್ದಾರೆ. ಕಳವು ಪ್ರಕರಣವೊಂದರಲ್ಲಿ ಅಬ್ದುಲ್ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು.
ಆಟೋ ಚಾಲಕನಾಗಿ ಕೆಲಸ ಮಾಡುವ ಮುನ್ನ ಅಬ್ದುಲ್ ಸಲಾಮ್ ನಂದ್ಯಾಲ್ನ ರೋಜಾಕುಂಟ ಪ್ರದೇಶದಲ್ಲಿ ಆಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡಿದ್ದರು. ಮಳಿಗೆಯಿಂದ ಮೂರು ಕೆಜಿ ಚಿನ್ನ ಕದ್ದ ಆರೋಪ ಅವರ ಮೇಲೆ ಇತ್ತು. ಪೊಲೀಸರು ಆತನನ್ನು ಬಂಧಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ಸಲಾಮ್ನ ಆಟೋದಲ್ಲಿ 70,000 ರೂ ಕಳೆದುಕೊಂಡಿದ್ದರ ಬಗ್ಗೆ ಸುಮಾರು ಒಂದು ವಾರದ ಹಿಂದೆ ಪ್ರಯಾಣಿಕರೊಬ್ಬರು ದೂರು ನೀಡಿದ್ದರು. ಈ ಸಂಬಂಧ ಸಲಾಮ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆತನಿಗೆ ಹಿಂಸಿಸಿದ್ದರು ಎನ್ನಲಾಗಿದೆ.
ಪೊಲೀಸರ ದೌರ್ಜನ್ಯ ತಡೆಯಲಾಗದೆ ಸಲಾಮ್ ಮತ್ತು ಅವರ ಕುಟುಂಬ ಜೀವ ತೆಗೆದುಕೊಳ್ಳಲು ನಿರ್ಧರಿಸಿತ್ತು. 'ನಾನು ಯಾವುದೇ ತಪ್ಪು ಮಾಡಿರಲಿಲ್ಲ. ಕಳ್ಳತನಕ್ಕೂ ನನಗೂ ಸಂಬಂಧವೇ ಇರಲಿಲ್ಲ. ಈ ಹಿಂಸೆಯನ್ನು ತಡೆದುಕೊಳ್ಳಲು ನನ್ನಿಂದ ಸಾಧ್ಯವಿಲ್ಲ. ನನಗೆ ಸಹಾಯ ಮಾಡಲು ಯಾರೂ ಇಲ್ಲ. ಸಾವಾದರೂ ನನಗೆ ಕಡೇಪಕ್ಷ ನೆಮ್ಮದಿ ನೀಡಬಹುದು' ಎಂದು ವಿಡಿಯೋದಲ್ಲಿ ಸಲಾಮ್ ಹೇಳಿದ್ದಾರೆ.
Police Brutality: Sheikh Abdul Salam & his family in Kurnool, Andhra Pradesh committed Sucide by jumping under train. The cause of the Sucide is police Harrasments, torture & humiliation. Helpless family recorded this video pleading they are innocent & leave them#JusticrForSalam pic.twitter.com/foaqREQvPa
— Aarif Shah (@aarifshaah) November 9, 2020
ಸಲಾಮ್ (45), ಪತ್ನಿ ನೂರ್ಜಹಾನ್ (38), ಮಗಳು ಸಲ್ಮಾ (14) ಮತ್ತು ಮಗ ಖಲಂದರ್ (10) ಚಲಿಸುವ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸೋಮಶೇಖರ್ ರೆಡ್ಡಿ ಮತ್ತು ಗಂಗಾಧರ್ ಅವರನ್ನು ಅಮಾನತುಗೊಳಿಸಿ ಬಂಧಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ.