ಕೊರೊನಾಗೆ ಆಯುರ್ವೇದ ಮದ್ದು; ನೆಲ್ಲೂರಿನಲ್ಲಿ ಸೇರಿದ ಸಾವಿರಾರು ಜನ
ನೆಲ್ಲೂರು, ಮೇ 21: ಕೊರೊನಾ ಸೋಂಕಿಗೆ ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಆಯುರ್ವೇದ ಔಷಧಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಈ ಔಷಧಿಗಾಗಿ ಸಾವಿರಾರು ಜನರು ಸೇರಿರುವ ಸಂಗತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನೆಲ್ಲೂರಿನ ಮುತ್ತುಕೂರ್ ಮಂಡಲದ ಕೃಷ್ಣಪಟ್ಟಣಂ ಗ್ರಾಮದಲ್ಲಿ ಸ್ಥಳೀಯ ಬೋಗಿನಿ ಆನಂದಯ್ಯ ಎಂಬುವವರು ಉಚಿತ ಆಯುರ್ವೇದ ಔಷಧಿ ನೀಡುತ್ತಿದ್ದು, ಈ ಔಷಧಿ ಪಡೆಯಲು ನಿತ್ಯ ನೂರಾರು ಮಂದಿ ಬರುತ್ತಿದ್ದಾರೆ. ಶುಕ್ರವಾರ ವೈಎಸ್ಆರ್ ಕಾಂಗ್ರೆಸ್ ಪಕ್ಷದಿಂದ ಔಷಧ ವಿತರಣೆ ಮಾಡುವುದಾಗಿ ತಿಳಿಸಿದ್ದು, ಸಾವಿರಾರು ಜನರು ಜಮಾಯಿಸಿದ್ದರು. ಆದರೆ ಆಡಳಿತದಿಂದ ವಿತರಣೆ ಕುರಿತು ಸ್ಪಷ್ಟತೆ ದೊರೆಯದ ಕಾರಣ ಜನರು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದರು ಎನ್ನಲಾಗಿದೆ.
ಕೊರೊನಾ ದೂರವಿಡಲು ಚ್ಯವನ್ಪ್ರಾಶ್, ಅರಿಶಿಣ ಬೆರೆಸಿದ ಹಾಲು ಸೇವನೆ ಸಲಹೆಗೆ ವೈದ್ಯರ ಟೀಕೆ
ಔಷಧಿ ವಿತರಣೆ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಡಳಿತದ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿದೆ. ಆದರೆ ಆಯುರ್ವೇದ ಚಿಕಿತ್ಸೆಗೆ ಜನರು ಹೆಚ್ಚು ಒಲವು ತೋರಿದ್ದರಿಂದ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ನಿರ್ದೇಶನ ನೀಡಿ ವಾಪಸ್ಸಾಗಿದ್ದಾರೆ. ಔಷಧಕ್ಕೆ ಉಪಯೋಗಿಸಿರುವ ಗಿಡಮೂಲಿಕೆಯ ಮಾಹಿತಿ ಸಂಗ್ರಹಿಸಿದ್ದು, ವರದಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು ಎಂದು ಆಯುಷ್ ವೈದ್ಯರು ತಿಳಿಸಿದ್ದಾರೆ.
ಬೋಗಿನಿ ಆನಂದಯ್ಯ ಒಂದು ತಿಂಗಳಿನಿಂದಲೂ ಉಚಿತ ಚಿಕಿತ್ಸೆ ಹಾಗೂ ಔಷಧಿ ನೀಡುತ್ತಿದ್ದು, ದಿನನಿತ್ಯ ನೂರಾರು ಮಂದಿ ಆಗಮಿಸುತ್ತಿದ್ದಾರೆ. 20 ಸಾವಿರಕ್ಕೂ ಹೆಚ್ಚು ಮಂದಿಗೆ ಔಷಧ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಔಷಧಕ್ಕೆ ಗಿಡಮೂಲಿಕೆಗಳನ್ನು ಬಳಸುತ್ತಿದ್ದೇವೆ. ಇದು ಕೊರೊನಾ ತಡೆಗೆ ಹಾಗೂ ಗುಣಪಡಿಸಲು ಸಹಕಾರಿಯಾಗಿದೆ ಎಂದು ಹೇಳಿದ್ದಾರೆ.