ಆಂಧ್ರದಲ್ಲಿ ಸಾಲುಸಾಲು ಪುರಾತನ ದೇವಾಲಯಗಳ ಧ್ವಂಸ: ಭಾರೀ ಒತ್ತಡಲ್ಲಿ ಸಿಎಂ ಜಗನ್
ಅವಿಭಜಿತ ಅಖಂಡ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ರಾಜಶೇಖರ ರೆಡ್ಡಿಯವರು ದುರಂತ ಸಾವನ್ನಪ್ಪಿದ್ದಾಗ, ಅದು ತಿರುಮಲ ತಿಮ್ಮಪ್ಪನ ಶಾಪ. ಹಿಂದೂಗಳ ಪವಿತ್ರ ಪೂಜಾಕೇಂದ್ರವಾಗಿರುವ ತಿರುಪತಿಯನ್ನು ಕ್ರಿಶ್ಚನೀಕರಣ ಮಾಡಲು ಹೊರಟಿದ್ದೇ ಅವರ ಸಾವಿಗೆ ಕಾರಣ ಎಂದು ಸಾಮಾಜಿಕ ತಾಣದಲ್ಲಿ ವ್ಯಾಖ್ಯಾನಿಸಲಾಗಿತ್ತು.
ಇದಾದ ನಂತರ ಅವರ ಪುತ್ರ ವೈ.ಎಸ್.ಜಗನ್ಮೋಹನ್ ರೆಡ್ಡಿ ಸಿಎಂ ಆದಾಗಲೂ, ಅಲ್ಲಿನ ಮುಜರಾಯಿ ವ್ಯಾಪ್ತಿಯ ದೇವಾಲಯದ ಆದಾಯಗಳನ್ನು ಕ್ರಿಶ್ಚನ್ ಧರ್ಮಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ದೂರೂ ಸಾಕಷ್ಟಿದ್ದವು.
ಆಂಧ್ರದಲ್ಲಿ 400 ವರ್ಷದ ಪುರಾತನ ರಾಮನ ವಿಗ್ರಹ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಈ ಆರೋಪ ವೈಎಸ್ಆರ್ ಕುಟುಂಬಕ್ಕೆ ಬೆಂಬಿಡದೆ ಕಾಡುತ್ತಿದೆ ಎನ್ನುವುದಕ್ಕೆ ಆಂಧ್ರದಲ್ಲಿನ ಸರಣಿ ದೇವಾಲಯಗಳ ಮೇಲಿನ ದಾಳಿ. ಕಳೆದ ಕೆಲವು ತಿಂಗಳಿನಿಂದ ಲೆಕ್ಕವಿಲ್ಲದಷ್ಟು ದೇವಾಲಯಗಳು ನೆಲಸಮಗೊಂಡಿರುವುದು ಜಗನ್ ಸರಕಾರಕ್ಕೆ ನುಂಗಲಾರದ ತುತ್ತಾಗುತ್ತಿದೆ.
ರಾಜಕೀಯ ತ್ಯಜಿಸುತ್ತೇನೆ: ಜಗನ್ಗೆ ಚಂದ್ರಬಾಬು ನಾಯ್ಡು ಸವಾಲು
ಆಂಧ್ರದ ದೇವಾಲಯಗಳ ಮೇಲಿನ ದಾಳಿಯು ಜಗನ್ ಸರಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗುವ ಸಾಧ್ಯತೆಯಿದೆ. ಯಾಕೆಂದರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಜಗನ್ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ, ಉಡುಪಿ ಪೇಜಾವರ ಮಠ ಸೇರಿದಂತೆ, ಹಲವು ಪೀಠಾಧಿಪತಿಗಳು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದಾರೆ.
ಮೋಹನ್ ಭಾಗವತ್- ಪೇಜಾವರ ಶ್ರೀಗಳ ಭೇಟಿ
ಬೆಂಗಳೂರಿನ ವಿದ್ಯಾಪೀಠದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರ ಜೊತೆ ಸುದೀರ್ಘವಾಗಿ ಆಂಧ್ರದಲ್ಲಿ ನಡೆಯುತ್ತಿರುವ ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಭಾಗವತ್ ಮಾತುಕತೆ ನಡೆಸಿದ್ದಾರೆ. "ಆಂಧ್ರದಲ್ಲಿ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಗಮನಿಸುತ್ತಿದ್ದೇವೆ. ಅಲ್ಲಿ, ಹಿಂದೂಗಳ ರಕ್ಷಣೆಗೆ ನಮ್ಮ ಸಂಘಟನೆ ಕಟಿಬದ್ದವಾಗಿದೆ"ಎಂದು ಭಾಗವತ್ ಹೇಳಿದ್ದಾರೆ.
ಮಾಜಿ ಕೇಂದ್ರ ಸಚಿವ ಅಶೋಕ್ ಗಜಪತಿರಾಜು
ಮಾಜಿ ಕೇಂದ್ರ ಸಚಿವ ಅಶೋಕ್ ಗಜಪತಿರಾಜು ಅವರನ್ನು ವಿಜಯನಗರ ಮತ್ತು ಪೂರ್ವ ಗೋದಾವರಿ ವ್ಯಾಪ್ತಿಯಲ್ಲಿ ಬರುವ ಮೂರು ಪುರಾಣ ಪ್ರಸಿದ್ದ ದೇವಾಲಯಗಳ ಟ್ರಸ್ಟಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. "ಕಳೆದ ಹತ್ತೊಂಬತ್ತು ತಿಂಗಳಲ್ಲಿ ಸುಮಾರು 128 ದೇವಾಲಯಗಳ ಮೇಲೆ ದಾಳಿ ನಡೆದಿದೆ" ಎಂದು ಗಜಪತಿರಾಜು ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ವಜಾಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೇ 2019ರಲ್ಲಿ ವೈ.ಎಸ್.ಜಗನ್ಮೋಹನ್ ರೆಡ್ಡಿ, ಆಂಧ್ರದ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು.
ರಾಮತೀರ್ಥದಲ್ಲಿರುವ ಕೋದಂಡರಾಮನ ದೇವಾಲಯ
ಸಾವಿರಾರು ವರ್ಷಗಳ ಇತಿಹಾಸವಿರುವ, ರಾಮತೀರ್ಥದಲ್ಲಿರುವ ಕೋದಂಡರಾಮನ ದೇವಾಲಯದ ಗರ್ಭಗುಡಿಗೆ ನುಗ್ಗಿ, ಮೂಲ ರಾಮನ ವಿಗ್ರಹವನ್ನು ದುಷ್ಕರ್ಮಿಗಳು ಹಾನಿ ಮಾಡಿದ್ದರು. ಕಳೆದ ಡಿಸೆಂಬರ್ ತಿಂಗಳಲ್ಲಿ ಈ ಘಟನೆ ನಡೆದಿತ್ತು. ಮೂಲ ವಿಗ್ರಹ ಭಗ್ನವಾಗಿರುವುದಕ್ಕೆ ದೇವಾಲಯದ ಪ್ರಧಾನ ಅರ್ಚಕರು ಕಣ್ಣೀರು ಇಡುತ್ತಿರುವ ದೃಶ್ಯ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ದೇವಾಲಯಕ್ಕೆ ಸೂಕ್ತ ಭದ್ರತೆಯನ್ನು ಒದಗಿಸುವ ಬದಲು, ಜಗನ್ ಸರಕಾರ, ಪ್ರಧಾನ ಅರ್ಚಕರನ್ನು ವಜಾಗೊಳಿಸಿತ್ತು.
ಜಗನ್ ವರ್ಸಸ್ ಚಂದ್ರಬಾಬು ನಾಯ್ಡು
ರಾಜ್ಯಾದ್ಯಂತ ದೇವಾಲಗಳ ಮೇಲಿನ ದಾಳಿಯಿಂದ ವಿಚಲಿತರಾದ ಸಿಎಂ ಜಗನ್, ಇದೆಲ್ಲಾ ತೆಲುಗುದೇಶಂ ಪಕ್ಷದ ಕೈವಾಡ ಎನ್ನುವ ಆರೋಪವನ್ನು ಹೊರಿಸಿದ್ದರು. "ರಾಜ್ಯದಲ್ಲಿ, ಹಲವು ಬಡವರ ಪರ ಯೋಜನೆಯನ್ನು ಸರಕಾರ ಜಾರಿಗೊಳಿಸುತ್ತಿದೆ. ಜನರ ಗಮನವನ್ನು ಬೇರೆಡೆ ಸೆಳೆಯಲು ವಿರೋಧ ಪಕ್ಷಗಳು ನಡೆಸುತ್ತಿರುವ ಹುನ್ನಾರವಿದು" ಎಂದು ಸಿಎಂ ಆರೋಪಿಸಿದ್ದರು. ಇತ್ತ, ತೆಲುಗುದೇಶಂ ಪಕ್ಷ ಈ ವಿಚಾರವನ್ನು ಇಟ್ಟುಕೊಂಡು ರಾಜ್ಯದೆಲ್ಲಡೆ ಹಂಗಾಮ ನಡೆಸುತ್ತಿದೆ.
ಒಂಬತ್ತು ದೇವಾಲಯಗಳ ಪುನರ್ನಿಮಾಣಕ್ಕೆ ಭೂಮಿಪೂಜೆ
ದೇವಾಲಗಳ ಮೇಲಿನ ದಾಳಿ ವೈಎಸ್ಆರ್ ಮತ್ತು ಟಿಡಿಪಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ. ಚಂದ್ರಬಾಬು ನಾಯ್ಡು ಅವಧಿಯಲ್ಲಿ ಅಂದರೆ 2016ರಲ್ಲಿ ವಿಜಯವಾಡ ಭಾಗದಲ್ಲಿ ದಾಳಿಗೊಳಗಾಗಿ ನೆಲಸಮಗೊಂಡಿದ್ದ ಒಂಬತ್ತು ದೇವಾಲಯಗಳ ಪುನರ್ನಿಮಾಣಕ್ಕೆ ಸಿಎಂ ಜಗನ್, ಹೋದವಾರ (ಜನವರಿ 8) ಭೂಮಿಪೂಜೆ ನೆರವೇರಿಸಿದ್ದಾರೆ. ಕೃಷ್ಣಪುಷ್ಕರಂ ವೇಳೆ ಈ ದೇವಾಲಯಗಳ ಮೇಲೆ ದಾಳಿ ನಡೆದಿತ್ತು.
ದೇವಾಲಯಗಳಿಗೂ ಜಗನ್ ಭೇಟಿ ನೀಡಲು ಆರಂಭಿಸಿದ್ದಾರೆ
ರಾಷ್ಟಮಟ್ಟದಲ್ಲಿ ದೇವಾಲಗಳ ಮೇಲಿನ ದಾಳಿ ಜಗನ್ ಸರಕಾರಕ್ಕೆ ಮುಜುಗರವನ್ನು ತರುತ್ತಿದೆ. ಇನ್ನೊಂದು ಕಡೆ, ಹಿಂದೂಪರ ಸಂಘಟನೆಗಳೂ ಎಚ್ಚರಿಕೆಯನ್ನು ನೀಡುತ್ತಿವೆ. ವಿರೋಧ ಪಕ್ಷಗಳು ಇದರ ಲಾಭವನ್ನು ಪಡೆಯುತ್ತಿರುವುದನ್ನು ಅರಿತ ಜಗನ್, 77 ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗೆ, ಶನಿಮಹಾತ್ಮ ಸೇರಿದಂತೆ ಹಲವು ದೇವಾಲಯಗಳ ಪುನರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಜೊತೆಗೆ, ದೇವಾಲಯಗಳಿಗೂ ಜಗನ್ ಭೇಟಿ ನೀಡಲು ಆರಂಭಿಸಿದ್ದಾರೆ.
ಚಿನ್ನ ಜೇಯರ್ ಸ್ವಾಮಿ
ರಾಮತೀರ್ಥದಲ್ಲಿರುವ ಹಾನಿಗೊಳಗಾದ ದೇವಾಲಯಕ್ಕೆ ಭೇಟಿ ನೀಡಿದ್ದ ಚಂದ್ರಬಾಬು ನಾಯ್ಡು ಸರಕಾರದ ವಿರುದ್ದ ಕಿಡಿಕಾರಿದ್ದರು. "ದೇವಾಲಯಗಳ ಮೇಲೆ ದಾಳಿಯ ಘಟನೆ ಇಲ್ಲಿ ವರದಿಯಾಗಿದ್ದು ಕಮ್ಮಿ. ಭಕ್ತರಿಗೆ ಇಂದು ಏನಾಗುತ್ತದೆ, ನಾಳೆ ಏನಾಗುತ್ತದೆ ಎನ್ನುವ ಭಯ ಕಾಡುತ್ತಿದೆ. ಪ್ರಕಾಶಂ ಜಿಲ್ಲೆಯ ನರಸಿಂಹಸ್ವಾಮಿ ದೇವಾಲಯದ ಮೇಲೂ ದಾಳಿ ನಡೆದಿದೆ"ಎಂದು ಚಿನ್ನ ಜೇಯರ್ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಈ ಘಟನೆ, ಸರಕಾರಕ್ಕೆ ಮುಳುವಾಗುವ ಮುನ್ನ ಸಿಎಂ ಜಗನ್ ಎಚ್ಚೆತ್ತುಕೊಳ್ಳಬೇಕಿದೆ.