ಸ್ವಂತ ಜಿಲ್ಲೆಯಲ್ಲೇ ಚಂದ್ರಬಾಬು ನಾಯ್ಡು ಅಧಃಪತನ: ಟಿಡಿಪಿ ಅಸ್ತಿತ್ವ?
ಒಂದು ಚುನಾವಣೆಯಲ್ಲಿನ ಸೋಲಿನಿಂದ ಪಕ್ಷವೊಂದರೆ ಭವಿಷ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ಆದರೂ, 2019ರ ಆಂಧ್ರ ಪ್ರದೇಶ ಚುನಾವಣೆಯ ನಂತರ, ತೆಲುಗುದೇಶಂ ಪಕ್ಷಕ್ಕೆ ಸಾಲುಸಾಲು ಸೋಲು ಒಂದು ಕಡೆಯಾದರೆ, ದಿನದಿಂದ ದಿನಕ್ಕೆ ವೈ.ಎಸ್. ಜಗನ್ಮೋಹನ್ ರೆಡ್ಡಿ ಸರಕಾರ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಬಿಜೆಪಿಯ ಕೇಂದ್ರದ ನಾಯಕರ ಜೊತೆಗೆ ಮುನಿಸಿಕೊಂಡು, ಎನ್ಡಿಎ ವಿರೋಧಿ ಮೈತ್ರಿಕೂಟ ರಚಿಸಲು ದೇಶಾದ್ಯಂತ ಓಡಾಡಿದ್ದ ಚಂದ್ರಬಾಬು ನಾಯ್ಡು ಈಗ ಯಾರಿಗೂ ಬೇಡವಾದ ಕೂಸು. ಬಿಜೆಪಿ ಜೊತೆ ಮತ್ತೆ ಸಂಬಂಧ ಕುದುರಿಸಿಕೊಳ್ಳಲು ನಾಯ್ಡುಗೆ ಇರುವ ಅಡ್ಡಗಾಲೆಂದರೆ ಸಿಎಂ ಜಗನ್. ಯಾಕೆಂದರೆ, ಜಗನ್ ಕೇಂದ್ರ ಸರಕಾರದ ಜೊತೆಗೆ ಉತ್ತಮ ಬಾಂಧವ್ಯವನ್ನೇ ಇಟ್ಟುಕೊಂಡಿದ್ದಾರೆ.
ಆಂಧ್ರ ಪ್ರದೇಶ ಸ್ಥಳೀಯ ಸಂಸ್ಥೆ ಚುನಾವಣೆ; ಜಗನ್ ಪಕ್ಷದ ಜಯಭೇರಿ
ಕಳೆದ ಲೋಕಸಭಾ ಚುನಾವಣೆಯಲ್ಲಿ ಟಿಡಿಪಿ ಕೇವಲ ಮೂರು ಸ್ಥಾನವನ್ನಷ್ಟೇ ಗೆಲ್ಲಲು ಶಕ್ತವಾಗಿತ್ತು. ಹಾಗಾಗಿ, ತೆಲುಗುದೇಶಂ ಪಕ್ಷದ ಮುಖಂಡರು ದೆಹಲಿಯಲ್ಲೂ ಗಟ್ಟಿಯಾಗಿ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ಇನ್ನೊಂದು ಕಡೆ, ಸತತವಾಗಿ ಉಪಚುನಾವಣೆಯಲ್ಲೂ ಟಿಡಿಪಿಯ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ.
ಮುಂದಿನ ಚುನಾವಣೆಯ ಅಡಿಪಾಯ ಎಂದು ವ್ಯಾಖ್ಯಾನಿಸಲಾಗಿರುವ ಆಂಧ ಪ್ರದೇಶದ ಜಿಲ್ಲಾ ಮತ್ತು ಮಂಡಲ ಪರಿಷತ್ ಚುನಾವಣೆಯಲ್ಲಿ ತೆಲುಗುದೇಶಂ ಹೇಳಹೆಸರಿಲ್ಲದಂತೇ ಸೋಲು ಕಂಡಿದೆ. ಎಷ್ಟರಮಟ್ಟಿಗೆ ಅಂದರೆ, ಚಂದ್ರಬಾಬು ನಾಯ್ಡು ಸ್ವಕ್ಷೇತ್ರದಲ್ಲೇ ವೈಎಸ್ಆರ್ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದು ಟಿಡಿಪಿ ಅಸ್ತಿತ್ವವನ್ನೇ ಅಲ್ಲಾಡಿಸಿದೆ.
ಎಲ್ಲಾ ಕ್ಷೇತ್ರಗಳ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೆಲುಗುದೇಶಂ ಜೊತೆಗೆ ಕಾಂಗ್ರೆಸ್ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷವೂ ನೆಲಕಚ್ಚಿದೆ. ಚುನಾವಣೆ ನಡೆದ ಎಲ್ಲಾ ಕ್ಷೇತ್ರಗಳ ಫಲಿತಾಂಶವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ವೈ.ಎಸ್. ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಕ್ಲೀನ್ ಸ್ವೀಪ್ ಸಾಧನೆಯನ್ನು ಗೈದಿದೆ. ಚಂದ್ರಬಾಬು ನಾಯ್ಡು ಪ್ರತಿನಿಧಿಸುವ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲೂ ಟಿಡಿಪಿ ಸೋಲುಂಡಿದೆ.
ಚಂದ್ರಬಾಬು ಅವರ ಹುಟ್ಟೂರು ಚಂದ್ರಗಿರಿಯ ನಾರಾವರಿಪಲ್ಲೆಯಲ್ಲೂ ಟಿಡಿಪಿ ಸೋಲು
ಕುಪ್ಪಂ ತಾಲೂಕಿನ ಮಂಡಳ ಪರಿಷತ್ ಚುನಾವಣೆಯಲ್ಲಿ ತೆಲುಗುದೇಶಂ ಪಕ್ಷಕ್ಕೆ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಲಿಲ್ಲ. ಅಲ್ಲಿನ ನಾಲ್ಕು ಜಿಲ್ಲಾ ಪರಿಷತ್ ನಲ್ಲಿ ವೈಎಸ್ಆರ್ ಪಕ್ಷ ಜಯಭೇರಿ ಬಾರಿಸಿದೆ. 62 ಮಂಡಲ ಪರಿಷತ್ ನಲ್ಲಿ ವೈಎಸ್ಆರ್ ಪಕ್ಷದ ಮೂವತ್ತು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ 32 ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು, ಚಂದ್ರಬಾಬು ಅವರ ಹುಟ್ಟೂರು ಚಂದ್ರಗಿರಿ ತಾಲೂಕಿನ ನಾರಾವರಿಪಲ್ಲೆಯಲ್ಲೂ ಟಿಡಿಪಿ ಸೋತಿದೆ.
515 ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವೈಎಸ್ಆರ್ ಪಕ್ಷಕ್ಕೆ ಜಯ
ಒಟ್ಟಾರೆಯಾಗಿ ರಾಜ್ಯದಲ್ಲಿ ನಡೆದ 515 ಜಿಲ್ಲಾ ಪರಿಷತ್ ಚುನಾವಣೆಯಲ್ಲಿ 505 ಮತ್ತು 7,219 ಮಂಡಲ ಪರಿಷತ್ತಿನಲ್ಲಿ 5,998 ವೈಎಸ್ಆರ್ ಕಾಂಗ್ರೆಸ್ ಪಾಲಾಗಿದೆ. ಎಲ್ಲಾ ಜಿಲ್ಲೆಯ ಬಹುತೇಕ ಎಲ್ಲಾ ಕ್ಷೇತ್ರದಲ್ಲಿ ತೆಲುಗುದೇಶಂ ಸೋಲುಂಡಿದೆ. ಒಟ್ಟು 659 ಜಿಲ್ಲಾ ಪರಿಷತ್ತಿನಲ್ಲಿ 126 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ತೆಲುಗುದೇಶಂ ಕೇವಲ ಆರು ಮತ್ತು ಜನಸೇನಾ ಎರಡು, ಕಮ್ಯೂನಿಸ್ಟ್ ಎರಡು ಸೀಟನ್ನು ಗೆಲ್ಲಲು ಶಕ್ತವಾಗಿದೆ.
Recommended Video
ಜಗನ್ ಸಿಎಂ ಆದ ನಂತರ ನಡೆದ ಎಲ್ಲಾ ಚುನಾವಣೆಯಲ್ಲಿ ಟಿಡಿಪಿಗೆ ಸೋಲಾಗುತ್ತಿದೆ
"ತೆಲುಗುದೇಶಂ ಮುಖ್ಯಸ್ಥರಾದ ಚಂದ್ರಬಾಬು ನಾಯ್ಡು, ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯಿಲ್ಲ, ಹಾಗಾಗಿ ಈ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ" ಎಂದು ಹೇಳಿದ್ದರು. "ಹೀನಾಯ ಸೋಲು ಕಾಣುತ್ತೇವೆ ಎನ್ನುವ ಭಯಕ್ಕಾಗಿ ನಾಯ್ಡು ಈ ರೀತಿ ಜಾರಿಗೊಳ್ಳುತ್ತಿದ್ದಾರೆ" ಎಂದು ವೈಎಸ್ಆರ್ ಪ್ರತಿಕ್ರಿಯೆ ನೀಡಿತ್ತು. ಒಟ್ಟಿನಲ್ಲಿ, ಜಗನ್ ಸಿಎಂ ಆದ ನಂತರ ನಡೆದ ಎಲ್ಲಾ ಚುನಾವಣೆಯಲ್ಲಿ ಟಿಡಿಪಿಗೆ ಸೋಲಾಗುತ್ತಿದೆ.