ತಿರುಪತಿ ವಿಮಾನ ನಿಲ್ದಾಣದಲ್ಲಿ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ
ವಿಜಯವಾಡ,ಮಾರ್ಚ್ 1: ತಿರುಪತಿ ವಿಮಾನ ನಿಲ್ದಾಣದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆ ಮಾಡಲು ಹೊರಟಿದ್ದ ವಿರೋಧ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ತಿರುಪತಿಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಚಂದ್ರಬಾಬು ನಾಯ್ಡು ವಿರುದ್ಧ ಕ್ರೈಸ್ತ ಮುಖಂಡರ ಪ್ರತಿಭಟನೆ, ಟಿಡಿಪಿಗೆ ರಾಜೀನಾಮೆ
ಆಂಧ್ರ ಪ್ರದೇಶದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ಅಭ್ಯರ್ಥಿಗಳಿಗೆ ಆಡಳಿತರೂಢ ವೈಎಸ್ ಆರ್ ಸಿ ನಾಯಕರು ಹಣದ ಆಮಿಷವೊಡ್ಡಿ ಒತ್ತಡ ಹಾಕಿದ್ದರು ಎಂದು ಆರೋಪಿಸಿ ಪ್ರತಿಭಟನೆಗೆ ಮುಂದಾಗಿದ್ದರು.
ಚಂದ್ರಬಾಬು ನಾಯ್ಡು ಮತ್ತು ಪೊಲೀಸರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆಯಿತು. ತಾವು ತಿರುಪತಿ ಮತ್ತು ಚಿತ್ತೂರು ಜಿಲ್ಲಾಧಿಕಾರಿ ಬಳಿ ಅನುಮತಿ ಕೇಳಿದ್ದೇವೆ ಎಂದು ಚಂದ್ರಬಾಬು ನಾಯ್ಡು ಹೇಳಿದರೆ ತಮಗೆ ಜಿಲ್ಲಾಧಿಕಾರಿಯಿಂದ ಯಾವುದೇ ಆದೇಶ ಬಂದಿಲ್ಲ ಎಂದು ನಾಯ್ಡು ಅವರನ್ನು ವಿಮಾನ ನಿಲ್ದಾಣದಿಂದ ಹೊರಹೋಗಲು ನಿರಾಕರಿಸಿದರು.
ತಿರುಪತಿ ಮತ್ತು ಚಿತ್ತೂರಿನಲ್ಲಿ ಪ್ರತಿಭಟನೆಗೆ ಸಜ್ಜು
ತಿರುಪತಿ ಮತ್ತು ಚಿತ್ತೂರಿನಲ್ಲಿ ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಪ್ರತಿಭಟನೆಗೆ ಸಜ್ಜಾಗಿದ್ದ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ತಿರುಪತಿ ವಿಮಾನ ನಿಲ್ದಾಣದಿಂದ ಹೊರಗೆ ಹೋಗಲು ಬಿಡಲಿಲ್ಲ.
ಏರ್ಪೋರ್ಟ್ನಲ್ಲಿ ಪ್ರತಿಭಟನೆ
ವಿಮಾನ ನಿಲ್ದಾಣದ ಒಳಗೆ ಕುಳಿತಿರುವ ಚಂದ್ರಬಾಬು ನಾಯ್ಡು ಪೊಲೀಸರು ಹೊರಗೆ ಹೋಗಲು ಬಿಡದಿರುವುದಕ್ಕೆ ಕುಳಿತುಕೊಂಡು ಪ್ರತಿಭಟಿಸುತ್ತಿದ್ದಾರೆ. ಆಡಳಿತಾರೂ ವೈಎಸ್ ಆರ್ ಸಿ ನಾಯಕರು ತಮ್ಮ ಪಕ್ಷದ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ತಿರುಪತಿ ಮತ್ತು ಚಿತ್ತೂರು ಪಟ್ಟಣಗಳಲ್ಲಿ ಟಿಡಿಪಿ ಪ್ರತಿಭಟನೆಗೆ ಕರೆ ನೀಡಿತ್ತು.
ವಿಮಾನ ನಿಲ್ದಾಣದಲ್ಲಿ ಉದ್ವಿಗ್ನ ವಾತಾವರಣವಿತ್ತು
ವಿಮಾನ ನಿಲ್ದಾಣ ಸುತ್ತಮುತ್ತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಇಂದು ಬೆಳಗ್ಗೆ ಹೈದರಾಬಾದಿನಿಂದ ಬೆಳಗ್ಗೆ 9.35ರ ಸುಮಾರಿಗೆ ಆಗಮಿಸಿದ್ದ ಚಂದ್ರಬಾಬು ನಾಯ್ಡು ನಿಲ್ದಾಣದ ಹೊರಗೆ ಬರುತ್ತಿದ್ದಂತೆ ಪೊಲೀಸರು ವಶಪಡಿಸಿಕೊಂಡರು. ಕೋವಿಡ್-19 ನಿರ್ಬಂಧ ಹಿನ್ನೆಲೆಯಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದರು.
ಟಿಡಿಪಿ ನಾಯಕರಿಗೆ ಪ್ರತಿಭಟನೆಗೆ ಅವಕಾಶ ನೀಡಿರಲಿಲ್ಲ
ಸ್ಥಳೀಯ ಟಿಡಿಪಿ ನಾಯಕರು ಈ ಪಟ್ಟಣಗಳಲ್ಲಿನ ಪ್ರತಿಭಟನೆಗೆ ಅನುಮತಿ ಕೋರಿದ್ದರೂ ಪೊಲೀಸರು ನಿರಾಕರಿಸಿದ್ದರು. ಪೊಲೀಸರು ಜಿಲ್ಲೆಯ ಟಿಡಿಪಿ ನಾಯಕರನ್ನು ಗೃಹಬಂಧನದಲ್ಲಿರಿಸಿದ್ದಾರೆ. ತಮ್ಮ ನಾಯಕನನ್ನು ಸ್ವಾಗತಿಸಲು ವಿಮಾನ ನಿಲ್ದಾಣ ತಲುಪಲು ಪ್ರಯತ್ನಿಸಿದಾಗ ಹಲವಾರು ಟಿಡಿಪಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡರು.