Recommended Video
ಅಮರಾವತಿ, ಜನವರಿ 12: ತೆಲಂಗಾಣ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೈ ಕೈ ಹಿಡಿದುಕೊಂಡು ಒಂದಾಗಿಯೇ ಚುನಾವಣೆ ಎದುರಿಸಿದ್ದ ಕಾಂಗ್ರೆಸ್ ಮತ್ತು ತೆಲುಗು ದೇಶಂ ಪಕ್ಷಗಳು ಸದ್ಯದಲ್ಲೇ ದೂರವಾಗಲಿವೆ.
ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ವತಃ ಟಿಡಿಪಿ ಮುಖಂಡ, ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರೇ ಖಚಿತಪಡಿಸಿದ್ದಾರೆ ಎಂಡು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸಲು ಸಿದ್ಧ. ಆದರೆ ಅದೇ ಸಮಯದಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಾಯ್ಡು ರಾಹುಲ್ ಗಾಂಧಿ ಅವರಿಗೆ ತಿಳಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ರಾಹುಲ್ ಗಾಂಧಿ ಭೇಟಿಯಾದ ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಕಾಂಗ್ರೆಸ್ ಜೊತೆ ಟಿಡಿಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಾದರೆ ಅದು ಲೋಕಸಭಾ ಚುನಾವಣೆಯ ಮೇಲೂ ಕಾಂಗ್ರೆಸ್ ಮೇಲೆ ಪರಿಣಾಮ ಬೀರಬಹುದು.
ನಾಯ್ಡು-ರಾಹುಲ್ ಭೇಟಿ
ಇತ್ತೀಚೆಗೆ ದೆಹಲಿಗೆ ತೆರಳಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಚಂದ್ರಬಾಬು ನಾಯ್ಡು ಭೇಟಿಯಾಗಿದ್ದರು. ಲೋಕಸಭಾ ಚುನಾವಣೆಯೊಟ್ಟಿಗೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲೂ ಮೈತ್ರ ಮಾಡಿಕೊಳ್ಳುವ ಬಗ್ಗೆ ಪ್ರಸ್ತಾಪ ಬಂದಾಗ 'ನಾವು ರಾಷ್ಟ್ರೀಯ ರಾಜಕಾರಣದಲ್ಲಿ ಮಾತ್ರ ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತೇವೆ. ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ' ಎಂದು ನಾಯ್ಡು ಹೇಳಿದ್ದಾರೆ.
ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!
ಮೈತ್ರಿ ಬಗ್ಗೆ ಟಿಡಿಪಿ ನಾಯಕರಲ್ಲಿ ಬೇಸರ
ಡಿಸೆಂಬರ್ ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಟಿಡಿಪಿ ಒಟ್ಟಾಗಿ ಸ್ಪರ್ಧಿಸಿದ್ದವು. ಆದರೆ ಫಲಿತಾಂಶ ಮಾತ್ರ ನಿರೀಕ್ಷೆಯಂತೆ ಬರಲಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್-ಟಿಡಿಪಿ ಮೈತ್ರಿ ಮಾಡಿಕೊಳ್ಳುತ್ತಿದೆ ಎಂದಾಗಲೇ ಅದನ್ನು ಸ್ಥಳೀಯ ಟಿಡಿಪಿ ಮುಖಂಡರು, ಕಾರ್ಯಕರ್ತರು ವಿರೋಧಿಸಿದ್ದರು. ಮೈತ್ರಿ ನಂತರ ಟಿಡಿಪಿ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತೂ ಕೇಳಿಬಂದಿತ್ತು.
ಮೋದಿ ಎದುರು ನಾನೇ ಬಗ್ಗಿದ್ದೇನೆ... ನನ್ನ ರಾಜ್ಯಕ್ಕಾಗಿ: ನಾಯ್ಡು ಹೊಸ ವರಸೆ!
ನಾಯ್ಡು ಆತಂಕವೇನು?
ಕಾಂಗ್ರೆಸ್-ಟಿಡಿಪಿ ಮೈತ್ರಿಯನ್ನು ಸ್ಥಳೀಯ ಟಿಡಿಪಿ ನಾಯಕರು ಒಪ್ಪುತ್ತಿಲ್ಲ. ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ಹಲವು ಟಿಕೆಟ್ ಆಕಾಂಕ್ಷಿಗಳಿಗೆ ಟಿಕೆಟ್ ಸಿಗದೆ ಬಂಡಯ ಏಳುವ ಸಾಧ್ಯತೆ ಇದೆ ಎಂಬುದು ನಾಯ್ಡು ಅವರಿಗೆ ಗೊತ್ತಿಲ್ಲದ ವಿಷಯವಲ್ಲ. ಅದೂ ಅಲ್ಲದೆ, ಚುನಾವಣೆ ಹತ್ತಿರವಾಗುತ್ತಿರುವಾಗ ಕಾರ್ಯಕರ್ತರು, ಪಕ್ಷದ ಇತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆದುಕೊಂಡರೆ ತಮಗೇ ಸಮಸ್ಯೆ ಎಂಬುದನ್ನು ಬಲ್ಲ ನಾಯ್ಡು ಆತಂಕಗೊಂಡಿದ್ದಾರೆ. ಇಂಥ ಸಮಸ್ಯೆಗಳಿಗೆ ಅವಕಾಶ ನೀಡಬಾರದೆಂಬ ಕಾರಣಕ್ಕೆ ವಿಧದಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ತಿಲಾಂಜಲಿ ಬಿಡಲಿದ್ದಾರೆ.
ಮಹಾಘಟಬಂಧನದ ಮೇಲೂ ಪರಿಣಾಮ?
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಆಡಿಕೊಂಡು, ಮಹಾಘಟಬಂಧನದ ಪಾಲುದಾರರಾದರೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಟಿಡಿಪಿಗಳು ಮುಖಾಮುಖಿಯಾಗಿ ಹೋರಾಡಬೇಕಿದೆ. ಇದು ಎರಡು ಪಕ್ಷಗಳ ನಡುವೆ ಅಂತರವನ್ನು ಹೆಚ್ಚಿಸಬಹುದು. ಒಟ್ಟಿನಲ್ಲಿ ನಾಯ್ಡು ಅವರ ಈ ನಿರ್ಧಾರ ಆಂಧ್ರಪ್ರದೇಶ ರಾಜಕೀಯದಲ್ಲಿ ಮಾತಗ್ರವಲ್ಲದೆ, ರಾಷ್ಟ್ರ ರಾಜಕಾರಣದ ಮೇಲೂ ಪ್ರಭಾವ ಬೀರುವುದು ಖಂಡಿತ.
RECOMMENDED STORIES