ತಿರುಪತಿಯಲ್ಲಿ ಸರ್ವದರ್ಶನ ಟಿಕೆಟ್ಗಾಗಿ ನೂಕು ನುಗ್ಗಲು, ಹಲವರಿಗೆ ಗಾಯ
ತಿರುಮಲ, ಏಪ್ರಿಲ್ 12: ಕೊರೊನಾ ಸಾಂಕ್ರಾಮಿಕದಿಂದಾಗಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ಕಾಣಲು ಬರುವ ಭಕ್ತರ ಸಂಖ್ಯೆ ವಿರಳವಾಗಿತ್ತು. ಆದರೆ, ಈಗ ಮಾರ್ಗಸೂಚಿಗಳು ಬದಲಾಗಿದ್ದು, ಸರ್ವದರ್ಶನದ ಟಿಕೆಟ್ ಮಿತಿಯನ್ನು ಹೆಚ್ಚಿಸಲಾಗಿದೆ. ಹೀಗಾಗಿ, ದೇಗುಲ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಇದರೊಂದಿಗೆ ಶ್ರೀವಾರಿ ಸರ್ವದರ್ಶನ ಟಿಕೆಟ್ಗೆ ಭಾರಿ ಬೇಡಿಕೆ ಬಂದಿದೆ. ಸರ್ವದರ್ಶನ ಟಿಕೆಟ್ಗಾಗಿ ನಿರ್ಮಿಸಲಾಗಿದ್ದ ಸರತಿ ಸಾಲಿನಲ್ಲಿ ಭಕ್ತರ ದಂಡು ಹರಿದು ಬಂದಿತ್ತು. ಇದರಿಂದ ಕೆಲ ಭಕ್ತರು ಅಲ್ಲೇ ಮೂರ್ಛೆ ಹೋದರು. ಟಿಕೆಟ್ಗಾಗಿ ನೂಕು ನುಗ್ಗಲು ಉಂಟಾಗಿ, ಹಲವರಿಗೆ ಗಾಯಗಳಾಗಿವೆ.
ಇದಾದ ಬಳಿಕ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ತಿರುಪತಿಯ ಮೂರು ಸ್ಥಳಗಳಲ್ಲಿ ಸರ್ವದರ್ಶನ ಟಿಟಿಡಿ ಭಕ್ತರಿಗೆ ಟೋಕನ್ ನೀಡುತ್ತಿದೆ. ಟಿಟಿಡಿ ಎರಡನೇ ಛತ್ರ, ಭೂದೇವಿ ಕಾಂಪ್ಲೆಕ್ಸ್, ಮುಂತಾದಡೆ ಟೋಕನ್ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಅಪಾರ ಸಂಖ್ಯೆಯ ಭಕ್ತರು ಕೌಂಟರ್ಗಳಲ್ಲಿ ಟೋಕನ್ಗಾಗಿ ಕಾಯುತ್ತಿದ್ದಾರೆ. ಸರ್ವ ದರ್ಶನ ಟೋಕನ್ಗಾಗಿ ಭಕ್ತರು ಕಿಲೋಮೀಟರ್ಗಟ್ಟಲೆ ಕಾಯಬೇಕಾಗಿದೆ. ಸರ್ವದರ್ಶನ ಟೋಕನ್ಗಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದ ಭಕ್ತರು ಏಕಾಏಕಿ ಕೌಂಟರ್ ನತ್ತ ಧಾವಿಸುವ ಪ್ರಯತ್ನ ನಡೆಸಿದರು. ಇದರಿಂದ ಗದ್ದಲ ಉಂಟಾಯಿತು.
ಸರ್ವ ದರ್ಶನ ಟಿಕೆಟ್ಗಾಗಿ ಸಾವಿರಾರು ಜನ ಸೇರುತ್ತಿದ್ದರಿಂದ ನೂಕುನುಗ್ಗಲು ಉಂಟಾಯಿತು. ಕಾಲ್ತುಳಿತದಲ್ಲಿ ಹಲವರು ಪ್ರಜ್ಞೆ ಕಳೆದುಕೊಂಡ ಘಟನೆ ನಡೆದಿದೆ. ನೂಕುನುಗ್ಗಲು ಉಂಟಾಗಿ ಕೆಲವರು ಮಕ್ಕಳು ನಾಪತ್ತೆಯಾಗಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ. ಶ್ರೀವಾರಿ ದರ್ಶನದ ಟಿಕೆಟ್ ಗಾಗಿ ಗಂಟೆಗಟ್ಟಲೆ ಕಾದು ಕುಳಿತಿದ್ದ ಭಕ್ತರು ಟಿಟಿಡಿ ವ್ಯವಸ್ಥೆ ಬಗ್ಗೆ ಅಸಹನೆ ವ್ಯಕ್ತಪಡಿಸುತ್ತಿದ್ದು, ರೊಚ್ಚಿಗೆದ್ದಿದ್ದಾರೆ. ಶ್ರೀವಾರಿ ದರ್ಶನಕ್ಕೆ ಬಂದಿದ್ದ ಹಲವು ಭಕ್ತರು ಇತ್ತೀಚಿನ ಬೆಳವಣಿಗೆಯಿಂದ ಕಣ್ಣೀರು ಹಾಕುತ್ತಿದ್ದಾರೆ. ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಟಿಟಿಡಿ ಆಕ್ರೋಶ ವ್ಯಕ್ತಪಡಿಸಿದೆ. ಕನಿಷ್ಠ ಕುಡಿಯುವ ನೀರಿನ ಸೌಲಭ್ಯವನ್ನೂ ಕಲ್ಪಿಸಿಲ್ಲ ಎಂದು ಭಕ್ತರು ಕಂಗಾಲಾಗಿದ್ದಾರೆ.
ಇದೇ ವೇಳೆ ಗೋವಿಂದರಾಜ ಸ್ವಾಮಿ ಛತ್ರದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ. ಇತ್ತೀಚಿನ ಜಟಾಪಟಿ ಹಿನ್ನೆಲೆಯಲ್ಲಿ ಟಿಟಿಡಿ ಟಿಕೆಟ್ ನೀಡಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಟಿಡಿ ಸೆಕ್ಯುರಿಟಿ ಸಿಬ್ಬಂದಿಗಳು, ನೆರವಿಗೆ ಬಂದಿಲ್ಲ ಎಂದು ಆರೋಪ ಕೇಳಿ ಬಂದಿದೆ.
ಸದ್ಯ ಭಕ್ತರು ನೇರವಾಗಿ ಬೆಟ್ಟದ ತುದಿಯನ್ನು ತಲುಪಲು ಟಿಟಿಡಿ ಸೂಚಿಸಿದೆ. ಆದರೆ, ಈಗಾಗಲೇ ಟಿಕೆಟ್ ಪಡೆದಿರುವವರ ಸ್ಥಿತಿ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ. ಮತ್ತೊಂದೆಡೆ ಭಕ್ತರ ನೂಕುನುಗ್ಗಲು ಹಿನ್ನೆಲೆಯಲ್ಲಿ ವಿಐಪಿ ಬ್ರೇಕ್ ದರ್ಶನವನ್ನು ಟಿಟಿಡಿ ರದ್ದುಗೊಳಿಸಿದೆ. ಬುಧವಾರದಿಂದ ಭಾನುವಾರದವರೆಗೆ ವಿಐಪಿ ಬ್ರೇಕ್ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ ಮಂಡಳಿ ಪ್ರಕಟಿಸಿದೆ.