ಚಂದ್ರಬಾಬು ನಾಯ್ಡುಗೆ ತೀವ್ರ ಹಿನ್ನಡೆ, ಬಿಜೆಪಿಯತ್ತ ಟಿಡಿಪಿ ಶಾಸಕರು!
ಅಮರಾವತಿ, ಜೂನ್ 18: ತೆಲಂಗಾಣ ಕಾಂಗ್ರೆಸ್ ನಾಯಕರೊಬ್ಬರು ಪಕ್ಷ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಸುದ್ದಿಯ ಬೆನ್ನಲ್ಲೇ ತೆಲುಗು ದೇಶಂ ಪಾರ್ಟಿಯ ಹಿರಿಯ ನಾಯಕ, ಮಾಜಿ ಸಚಿವರೊಬ್ಬರು ಬಿಜೆಪಿ ಸೇರುವ ಸಾಧ್ಯತೆ ಕಂಡು ಬಂದಿದೆ. ಎನ್ ಚಂದ್ರಬಾಬು ನಾಯ್ಡುಗೆ ಇದರಿಂದ ತೀವ್ರ ಹಿನ್ನಡೆಯುಂಟಾಗುವ ಸಾಧ್ಯತೆಯಿದೆ.
ತೆಲಂಗಾಣ ಕಾಂಗ್ರೆಸ್ಸಿನ 12 ಶಾಸಕರು ಗುಂಪು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್ ) ಜತೆ ವಿಲೀನಗೊಂಡಿದ್ದು ನೆನಪಿರಬಹುದು. ಉಳಿದಿರುವ 6 ಮಂದಿ ಶಾಸಕರ ಪೈಕಿ ಮುನುಗೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಸುದ್ದಿ ಬಂದಿದೆ.
ಆಂಧ್ರ ದಿಗ್ವಿಜಯದ ನಂತರ ಜಗನ್ ಕಣ್ಣು ತೆಲಂಗಾಣದ ಮೇಲೆ!
ಈಗ ಟಿಡಿಪಿ ಎರಡು ಬಾರಿ ಶಾಸಕ, ಮಾಜಿ ಸಚಿವ ಇ ಪೆದ್ದಿ ರೆಡ್ಡಿ ಅವರು ಬಿಜೆಪಿ ಸೇರುವ ಸುಳಿವು ನೀಡಿದ್ದಾರೆ. ಈ ಬಗ್ಗೆ ಬಿಜೆಪಿಯಿಂದ ಆಹ್ವಾನ ಬಂದಿದೆ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಬಿಜೆಪಿ ಸೇರಲು ಮುಂದಾದ ತೆಲಂಗಾಣ ಕಾಂಗ್ರೆಸ್ ಶಾಸಕ
ಟಿಡಿಪಿ ಪ್ರಧಾನ ಕಾರ್ಯದರ್ಶಿಯಾಗಿರುವ ರೆಡ್ಡಿ ಅವರು ಎನ್ ಚಂದ್ರಬಾಬು ನಾಯ್ಡು ಅವರ ಅವಿಭಜಿತ ಆಂಧ್ರಪ್ರದೇಶದ ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಕರೀಂನಗರದ ನಾಯಕ ಪೆದ್ದಿ ರೆಡ್ಡಿ
ಹುಜೂರಾಬಾದ್ ಹಾಗೂ ಕರೀಂನಗರ ಜಿಲ್ಲೆಯಿಂದ ಗೆದ್ದಿರುವ ಪೆದ್ದಿರೆಡ್ಡಿ ಅವರಿಗೆ ಈ ಬಾರಿ ಕರೀಂನಗರದ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಿದ್ದರು.ಟಿಡಿಪಿ ಎರಡು ಬಾರಿ ಶಾಸಕ, ಮಾಜಿ ಸಚಿವ ಇ ಪೆದ್ದಿ ರೆಡ್ಡಿ ಅವರು ಈ ಬಗ್ಗೆ ಮಾತನಾಡಿ, ಒಲ್ಲದ ಮನಸ್ಸಿನಿಂದಲೆ ಪಕ್ಷ(ಟಿಡಿಪಿ) ತೊರೆಯಬೇಕಾಗುತ್ತದೆ. ಸದ್ಯ, ಆಂಧ್ರದಲ್ಲಿ ಪ್ರಬಲವಾಗಿ ವಿರೋಧ ಪಕ್ಷವಾಗಿ ನಿಲ್ಲಲು ಬಿಜೆಪಿ ಮಾತ್ರ ಸಾಧ್ಯ ಎಂದಿದ್ದಾರೆ.
ಬಿಜೆಪಿ ಸೇರಿದ ಹಿರಿಯ ಮುಖಂಡರು
ಇನ್ನೊಂದೆಡೆ, ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಎ.ಪಿ ಜಿತೇಂದ್ರ ರೆಡ್ಡಿ, ಆಂಧ್ರಪ್ರದೇಶದ ಮಾಜಿ ಗೃಹ ಸಚಿವೆ ಡಿ.ಕೆ ಅರುಣಾ, ಮಾಜಿ ಕಾಂಗ್ರೆಸ್ ಶಾಸಕ(ಎಂಎಲ್ಸಿ) ಪಿ ಸುಧಾಕರ್ ರೆಡ್ಡೀ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಇನ್ನಷ್ಟು ಮಂದಿ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಆಂಧ್ರಕ್ಕೂ ಈ ಗಾಳಿ ಬೀಸಿದ್ದು, ಪೆದ್ದಿ ರೆಡ್ಡಿ ಅವರು ಬಿಜೆಪಿ ಸೇರುವುದನ್ನೇ ಅನೇಕರು ಕಾಯುತ್ತಿದ್ದಾರೆ. ಅವರ ಹಿಂಬಾಲಕರು ಬಿಜೆಪಿ ಸೇರಲು ಉತ್ಸುಕ್ತರಾಗಿದ್ದಾರೆ ಎಂಬ ಸುದ್ದಿಯಿದೆ.
ಟಿಡಿಪಿ ಕಳಪೆ ಪ್ರದರ್ಶನ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಕಳೆದ ಡಿಸೆಂಬರ್ ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಮಾತ್ರ ಗಳಿಸಿದ್ದರು. ಈ ಪೈಕಿ ಒಬ್ಬರು ಈಗಾಗಲೇ ಟಿಆರ್ ಎಸ್ ಪಾಲಾಗಿದ್ದಾರೆ. ಹೀಗಾಗಿ, ತೆಲಂಗಾಣದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿತ್ತು. ಆದರೆ, ಪೆದ್ದಿ ರೆಡ್ಡಿ ಅವರು ಈ ರೀತಿ ಮಾಡಿದರೆ ಪಕ್ಷದ ಚುನಾವಣಾ ಭವಿಷ್ಯವೆ ಅತಂತ್ರವಾಗುತ್ತದೆ, ಸಂಘಟನಾ ಬಲ ಎಂಬುದು ಕುಸಿಯುತ್ತದೆ, ಹೋರಾಟದ ಕುರುಹು ತೋರದಿದ್ದರೆ ನಾಯಕತ್ವಕ್ಕೆ ಬೆಲೆ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಮಿಷನ್ 2024 ಟಾರ್ಗೆಟ್
ಆಂಧ್ರಪ್ರದೇಶದ ಬಿಜೆಪಿ ಘಟಕದಲ್ಲಿ ಸರಿ ಸುಮಾರು 35 ಲಕ್ಷ ಸದಸ್ಯರಿದ್ದು, ಬಿಜೆಪಿ ಇನ್ನು 7 ಲಕ್ಷ ಸದಸ್ಯರನ್ನು ಸೇರಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಮಿಷನ್ 2024 ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕೆ ಲಕ್ಷ್ಮಿನಾರಾಯಣ ಅವರಿಗೆ ಗುರಿ ನೀಡಿದ್ದಾರೆ. ಒಟ್ಟಾರೆ, ಶೇ 20ರಷ್ಟು ಸದಸ್ಯ ಬಲ ಹೆಚ್ಚಿಸಲು ಯೋಜನೆ ಸಿದ್ಧವಾಗಿದೆ.