ನಾಯ್ಡುಗೆ ಆಘಾತ, ಪೆದ್ದಿರೆಡ್ಡಿ ಸೇರಿ ಹಿರಿಯ ಮುಖಂಡರು ಬಿಜೆಪಿಗೆ
ಅಮರಾವತಿ, ಜೂನ್ 28: ತೆಲುಗು ದೇಶಂ ಪಾರ್ಟಿಯ ರಾಜ್ಯಸಭಾ ಸದಸ್ಯರು ಬಿಜೆಪಿ ಸೇರಿದ ಬೆನ್ನಲ್ಲೇ ಅನೇಕ ಹಿರಿಯ ಮುಖಂಡರು ಬಿಜೆಪಿ ಕೈ ಹಿಡಿಯಲು ಮುಂದಾಗಿದ್ದಾರೆ.
ತೆಲಂಗಾಣ ಕಾಂಗ್ರೆಸ್ ನಾಯಕರೊಬ್ಬರು ಪಕ್ಷ ತೊರೆದು ಬಿಜೆಪಿ ಸೇರಲು ಮುಂದಾಗಿದ್ದಾರೆ. ಈ ನಡುವೆ ತೆಲುಗು ದೇಶಂ ಪಾರ್ಟಿಯ ಹಿರಿಯ ನಾಯಕ, ಮಾಜಿ ಸಚಿವ ಇ ಪೆದ್ದಿ ರೆಡ್ಡಿ ಅವರು ಬಿಜೆಪಿ ಸೇರಿದ್ದಾರೆ.
ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿ ಸೇರಿದ ಟಿಡಿಪಿ ವಕ್ತಾರ ದಿನಕರ್
ತೆಲಂಗಾಣ ಕಾಂಗ್ರೆಸ್ಸಿನ 12 ಶಾಸಕರು ಗುಂಪು ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್ ಎಸ್ ) ಜತೆ ವಿಲೀನಗೊಂಡಿದ್ದು ನೆನಪಿರಬಹುದು. ಉಳಿದಿರುವ 6 ಮಂದಿ ಶಾಸಕರ ಪೈಕಿ ಮುನುಗೊಂಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ ರೆಡ್ಡಿ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಮುಂದಾಗಿರುವ ಸುದ್ದಿ ಬಂದಿದೆ.
ನಾಯ್ಡುಗೆ ಆಘಾತ, ಇನ್ನಷ್ಟು ಟಿಡಿಪಿ ಶಾಸಕರು, ಸಂಸದರು ಬಿಜೆಪಿಗೆ?
ಈಗ ಕೆಲ ದಿನಗಳ ಹಿಂದೆ ಟಿಡಿಪಿ ಎರಡು ಬಾರಿ ಶಾಸಕ, ಮಾಜಿ ಸಚಿವ ಇ ಪೆದ್ದಿ ರೆಡ್ಡಿ ಅವರು ಬಿಜೆಪಿ ಸೇರುವ ಸುದ್ದಿ ಖಚಿತಪಡಿಸಿದ್ದರು. ಈ ಬಗ್ಗೆ ಬಿಜೆಪಿಯಿಂದ ಆಹ್ವಾನವನ್ನು ಒಪ್ಪಿಕೊಂಡಿದ್ದೇನೆ ಎಂದಿದ್ದರು. ಟಿಡಿಪಿ ಪ್ರಧಾನ ಕಾರ್ಯದರ್ಶಿಯಾಗಿರುವ ರೆಡ್ಡಿ ಅವರು ಎನ್ ಚಂದ್ರಬಾಬು ನಾಯ್ಡು ಅವರ ಅವಿಭಜಿತ ಆಂಧ್ರಪ್ರದೇಶದ ರಾಜ್ಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಪೆದ್ದಿ ರೆಡ್ಡಿ ಜೊತೆಗೆ ಮೂವರು ಬಿಜೆಪಿಗೆ
ಕರೀಂನಗರದ ಮಾಜಿ ಶಾಸಕ, ಸಚಿವ ಇ ಪೆದ್ದಿರೆಡ್ಡಿ ಅವರ ಜೊತೆಗೆ ಅದಿಲಾಬಾದ್ ನ ಮಾಜಿ ಶಾಸಕ ಬೊಡಾ ಜನಾರ್ದನ್, ವಾರಂಗಲ್ ನ ಮಾಜಿ ಸಂಸದ ಚಡಾ ಸುರೇಶ್ ರೆಡ್ಡಿ ಅವರು ಬಿಜೆಪಿ ಸೇರಿದ್ದಾರೆ. ಜೊತೆಗೆ ಕಾಂಗ್ರೆಸ್ಸಿನ ಮಾಜಿ ಶಾಸಕ ಪಿ ಶಶಿಧರ ರೆಡ್ಡಿ, ಶೇಖ್ ರಹಮತುಲ್ಲಾ ಅವರು ಬಿಜೆಪಿ ಕೈ ಹಿಡಿದಿದ್ದಾರೆ.ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ ರಾವ್ ಅವರ ಸಮ್ಮುಖದಲ್ಲಿ ಪಕ್ಷ ಸೇರಿದರು. ಇದಕ್ಕೂ ಮುನ್ನ ಪಕ್ಷದ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಅವರ ಕೂಡಾ ಬಿಜೆಪಿಗೆ ಬಂದಿದ್ದಾರೆ.
ಹುಜೂರಾಬಾದ್ ಹಾಗೂ ಕರೀಂನಗರ ಜಿಲ್ಲೆಯಿಂದ ಗೆದ್ದಿರುವ ಪೆದ್ದಿರೆಡ್ಡಿ ಅವರಿಗೆ ಈ ಬಾರಿ ಕರೀಂನಗರದ ಲೋಕಸಭಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಬಿಜೆಪಿ ಅಭ್ಯರ್ಥಿ ಜಯಭೇರಿ ಬಾರಿಸಿದ್ದರು.
ಬಿಜೆಪಿ ಸೇರಿದ ಹಿರಿಯ ಮುಖಂಡರು
ಇನ್ನೊಂದೆಡೆ, ತೆಲಂಗಾಣ ರಾಷ್ಟ್ರೀಯ ಸಮಿತಿ ನಾಯಕ ಎ.ಪಿ ಜಿತೇಂದ್ರ ರೆಡ್ಡಿ, ಆಂಧ್ರಪ್ರದೇಶದ ಮಾಜಿ ಗೃಹ ಸಚಿವೆ ಡಿ.ಕೆ ಅರುಣಾ, ಮಾಜಿ ಕಾಂಗ್ರೆಸ್ ಶಾಸಕ(ಎಂಎಲ್ಸಿ) ಪಿ ಸುಧಾಕರ್ ರೆಡ್ಡೀ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಇನ್ನಷ್ಟು ಮಂದಿ ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ. ಈ ನಡುವೆ ಆಂಧ್ರಕ್ಕೂ ಈ ಗಾಳಿ ಬೀಸಿದ್ದು, ಪೆದ್ದಿ ರೆಡ್ಡಿ ಅವರು ಬಿಜೆಪಿ ಸೇರುವುದನ್ನೇ ಅನೇಕರು ಕಾಯುತ್ತಿದ್ದಾರೆ. ಅವರ ಹಿಂಬಾಲಕರು ಬಿಜೆಪಿ ಸೇರಲು ಉತ್ಸುಕ್ತರಾಗಿದ್ದಾರೆ ಎಂಬ ಸುದ್ದಿಯಿದೆ.
ಮಿಷನ್ 2024 ಟಾರ್ಗೆಟ್
ಆಂಧ್ರಪ್ರದೇಶದ ಬಿಜೆಪಿ ಘಟಕದಲ್ಲಿ ಸರಿ ಸುಮಾರು 35 ಲಕ್ಷ ಸದಸ್ಯರಿದ್ದು, ಬಿಜೆಪಿ ಇನ್ನು 7 ಲಕ್ಷ ಸದಸ್ಯರನ್ನು ಸೇರಿಸಿಕೊಳ್ಳಲು ಯೋಜನೆ ಹಾಕಿಕೊಳ್ಳಲಾಗಿದೆ. ಮಿಷನ್ 2024 ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಆಂಧ್ರಪ್ರದೇಶ ಬಿಜೆಪಿ ಅಧ್ಯಕ್ಷ ಕೆ ಲಕ್ಷ್ಮಿನಾರಾಯಣ ಅವರಿಗೆ ಗುರಿ ನೀಡಿದ್ದಾರೆ. ಒಟ್ಟಾರೆ, ಶೇ 20ರಷ್ಟು ಸದಸ್ಯ ಬಲ ಹೆಚ್ಚಿಸಲು ಯೋಜನೆ ಸಿದ್ಧವಾಗಿದೆ. ಇದು ಇನ್ನು ಆರಂಭ ಅಷ್ಟೇ, ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅವರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ, ಅನೇಕರು ಬಿಜೆಪಿ ಸೇರಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಕೆ ಲಕ್ಷ್ಮಿನಾರಾಯಣ ಹೇಳಿದರು.
ಚುನಾವಣೆಯಲ್ಲಿ ಟಿಡಿಪಿ ಕಳಪೆ ಪ್ರದರ್ಶನ
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಕಳೆದ ಡಿಸೆಂಬರ್ ನಲ್ಲಿ ನಡೆದ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಎರಡು ಸ್ಥಾನ ಮಾತ್ರ ಗಳಿಸಿದ್ದರು. ಈ ಪೈಕಿ ಒಬ್ಬರು ಈಗಾಗಲೇ ಟಿಆರ್ ಎಸ್ ಪಾಲಾಗಿದ್ದಾರೆ. ಹೀಗಾಗಿ, ತೆಲಂಗಾಣದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿತ್ತು. ಆದರೆ, ಪೆದ್ದಿ ರೆಡ್ಡಿ ಅವರು ಈ ರೀತಿ ಮಾಡಿದರೆ ಪಕ್ಷದ ಚುನಾವಣಾ ಭವಿಷ್ಯವೆ ಅತಂತ್ರವಾಗುತ್ತದೆ, ಸಂಘಟನಾ ಬಲ ಎಂಬುದು ಕುಸಿಯುತ್ತದೆ, ಹೋರಾಟದ ಕುರುಹು ತೋರದಿದ್ದರೆ ನಾಯಕತ್ವಕ್ಕೆ ಬೆಲೆ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಎನ್ಡಿಎ ಮೈತ್ರಿ ಮುರಿದುಕೊಂಡಿದ್ದು ದೊಡ್ಡ ತಪ್ಪು
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಡಿಪಿ 23 ಸ್ಥಾನವನ್ನು ಮಾತ್ರ ಗಳಿಸಿತ್ತು. ಲೋಕಸಭೆ ಚುನಾವಣೆಯಲ್ಲಿ 25 ಸ್ಥಾನಗಳ ಪೈಕಿ 3 ಸ್ಥಾನ ಗಳಿಸಲು ಸಾಧ್ಯವಾಗಿತ್ತು. ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಕು ಎಂದು ಮನವಿ ಮಾಡಿದ್ದ ಎನ್ ಚಂದ್ರಬಾಬು ನಾಯ್ಡು ಅವರು ಬೇಡಿಕೆ ಈಡೇರದ ಕಾರಣ, ಎನ್ಡಿಎ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದರು.
ಬಿಜೆಪಿ ಜತೆ ಟಿಟಿಪಿ ಮೈತ್ರಿ ಮುರಿದುಕೊಂಡಿದ್ದು ದೊಡ್ಡ ತಪ್ಪು ಹೆಜ್ಜೆಯಾಗಿತ್ತು. ಈ ಬಗ್ಗೆ ನಾಯ್ಡು ಅವರು ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡರು, ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ನಮಗೆ ಭರವಸೆ ಇದೆ ಎಂದು ಟಿಡಿಪಿ ನಾಯಕರೊಬ್ಬರು ಹೇಳಿದ್ದಾರೆ.