ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಸಂಸದನ ವಿರುದ್ಧ ಸುಪ್ರೀಂ ತೀರ್ಪು
ನವದೆಹಲಿ, ಮೇ 17: ತಮ್ಮ ವಿರುದ್ಧದ ದೇಶದ್ರೋಹ ಪ್ರಕರಣದಲ್ಲಿ ಜಾಮೀನು ಕೋರಿ ವೈಎಸ್ಆರ್ ಕಾಂಗ್ರೆಸ್ ಸಂಸದ ಕನಮುರಿ ರಘುರಾಮ ಕೃಷ್ಣಂರಾಜು ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆಂಧ್ರಪ್ರದೇಶ ಸಿಐಡಿ ಹೂಡಿರುವ ದೇಶದ್ರೋಹ ಪ್ರಕರಣದಲ್ಲಿ ಅವರಿಗೆ ಅಲ್ಲಿನ ಹೈಕೋರ್ಟ್ ನಿಂದ ಜಾಮೀನು ಸಿಕ್ಕಿರಲಿಲ್ಲ.
ಹೈಕೋರ್ಟ್ ಜಾಮೀನು ನಿರಾಕರಿಸಿದ ಬಳಿಕ ರಾಜು ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಅಲ್ಲಿ ಅವರು ಸಿಐಡಿ ಅಧಿಕಾರಿಗಳು ತಮ್ಮ ಮೇಲೆ ವಿವೇಚನೆ ಇಲ್ಲದೆ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಅಳಲು ತೋಡಿಕೊಂಡಿದ್ದರು.
ಘಟನೆ ಕುರಿತು ವೈದ್ಯಕೀಯ ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಗುಂಟೂರು ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಿತ್ತು. ವೈದ್ಯಕೀಯ ತಪಾಸಣೆಯ ವಿಡಿಯೊವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ನಿರ್ದೇಶಿಸಲಾಗಿತ್ತು.
ತಾವು ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಕೂಡಲೇ ಜಾಮೀನು ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಬೇಕು ಎಂದು ಕೋರಿ ಅವರು ಮತ್ತೊಂದು ಅರ್ಜಿಯನ್ನು ಸಂಸದ ರಾಜು ಪರ ವಕೀಲ ಮುಕುಲ್ ರೋಹ್ಟಗಿ ಅವರು ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದಾರೆ.
ವೈಯಕ್ತಿಕ ದ್ವೇಷ, ನಾನು ವಿಚಾರಣಾಧೀನ ಕೈದಿಯಾಗಲಾರೆ
ಈ ಪ್ರಕರಣ ತಮ್ಮ ಕಕ್ಷಿದಾರರಾ ಸಂಸದ ಕೃಷ್ಣಂರಾಜು ವಿರುದ್ಧ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ವೈಯಕ್ತಿಕ ಹಗೆಯಿಂದ ನಡೆದುಕೊಂಡಿದ್ದಾರೆ, ಕೆಲ ಸಮುದಾಯಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಎಂದು ಸುಳ್ಳು ಆರೋಪದ ಮೇಲೆ ದೇಶದ್ರೋಹದ ಕೇಸ್ ಹಾಕಲಾಗಿದೆ ಎಂದು ವಕೀಲ ಮುಕುಲ್ ರೋಹ್ಟಗಿ ವಾದಿಸಿ, ಈ ಕಾರಣದಿಂದಲೇ ಬೇರೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಕೋರಲಾಗಿತ್ತು ಎಂದಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮ್ಮ ಪಕ್ಷದ ನೇತಾರ ಹಾಗೂ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಜಾಮೀನು ಪಡೆದಿದ್ದು ಹೇಗೆ ಎಂದು ಪ್ರಶ್ನಿಸಿ, ಅವರ ಜಾಮೀನನ್ನು ರದ್ದುಗೊಳಿಸಬೇಕೆಂದು ಕೃಷ್ಣಂ ರಾಜು ಸಿಬಿಐ ನ್ಯಾಯಾಲಯಕ್ಕೆೀ ಹಿಂದೆ ಮನವಿ ಸಲ್ಲಿಸಿದ್ದರು. ಅಧಿಕಾರ ದುರುಪಯೋಗದಿಂದ ಪೊಲೀಸರನ್ನು ನನ್ನ ವಿರುದ್ಧ ಎತ್ತಿ ಕಟ್ಟಲಾಗಿದೆ ಹೀಗಾಗಿ ಸೆರೆಯಲ್ಲಿರುವ ತಮ್ಮನ್ನು ವಿಚಾರಣಾಧೀನ ಕೈದಿ ಎಂದು ಆರೋಪಿಸಲಾಗದು ಎಂದು ಸಂಸದ ಕೃಷ್ಣಂರಾಜು ಕೋರಿದ್ದರು. ತಮ್ಮ ವಿರುದ್ಧ ಹೂಡಲಾಗಿರುವ ಮೊಕದ್ದಮೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸಿದೆ ಎಂದು ಹೇಳಿದ್ದರು.
ಇದೆಲ್ಲವನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ವಿಭಾಗೀಯ ಪೀಠದ ನ್ಯಾ ವಿನೀತ್ ಸರನ್ ಹಾಗೂ ಬಿಆರ್ ಗವಾಯಿ ಅವರು ಈ ಕೆಳಕಂಡ ಅಂಶಗಳುಳ್ಳ ಆದೇಶ ನೀಡಿದ್ದಾರೆ.
ತೆಲಂಗಾಣದ ಸಿಕಂದರಾಬಾದ್ ಆರ್ಮಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಬೇಕು, ತೆಲಂಗಾಣ ಹೈಕೋರ್ಟ್ ನೇಮಿಸುವ ನ್ಯಾಯಾಂಗ ಅಧಿಕಾರಿ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಯಾಗಬೇಕು. ಆರ್ಮಿ ಆಸ್ಪತ್ರೆಯ ಮೂವರು ನುರಿತ ವೈದ್ಯರಿಂದ ಪರೀಕ್ಷೆಯಾಗಲಿ
ವೈದ್ಯಕೀಯ ಪರೀಕ್ಷೆಯನ್ನು ವಿಡಿಯೋ ಮಾಡಬೇಕು ಹಾಗೂ ತೆಲಂಗಾಣ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸತಕ್ಕದ್ದು. ಮುಂದಿನ ಆದೇಶ ಬರುವ ತನಕ ಸಂಸದ ಕೃಷ್ಣಂರಾಜು ಅವರು ನ್ಯಾಯಾಂಗ ಬಂಧನದ್ದಾರೆ ಎಂದು ಪರಿಗಣಿಸಿ ಅದೇ ಆಸ್ಪತ್ರೆಯಲ್ಲಿರಿಸಬೇಕು. ವೈದ್ಯಕೀಯ ವೆಚ್ಚವನ್ನು ಅವರೇ ಭರಿಸತಕ್ಕದ್ದು.