ಜಗನ್ ಭೇಟಿ ಬಳಿಕ, ಸಿಟ್ಟಿಗೆದ್ದಿದ್ದ ರೋಜಾ ಮುಖದಲ್ಲಿ ಮಂದಹಾಸ
ಅಮರಾವತಿ, ಜೂನ್ 12: ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಫೈರ್ ಬ್ರ್ಯಾಂಡ್ ನಾಯಕಿ, ನಗರಿ ವಿಧಾನಸಭಾ ಕ್ಷೇತ್ರದ ಶಾಸಕಿ ರೋಜಾ ಮುಖದಲ್ಲಿ ಕೊನೆಗೂ ಮಂದಹಾಸ ಮೂಡಿದೆ. ಮುಖ್ಯಮಂತ್ರಿ ಜಗನ್ ರೆಡ್ಡಿ ಅವರ ಸಂಪುಟ ವಿಸ್ತರಣೆ ಕಾರ್ಯಕ್ಕೆ ಗೈರು ಹಾಜರಾಗಿದ್ದ ರೋಜಾ ಅವರು ಮಂಗಳವಾರದಂದು ಪ್ರತ್ಯಕ್ಷವಾಗಿದ್ದಾರೆ.
ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್!
ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ಜಗನ್ ಮೋಹನ್ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗಿರಲಿಲ್ಲ. ರೋಜಾಗೆ ಸಚಿವ ಸ್ಥಾನ ಕೈ ತಪ್ಪಿದರೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನದ ಹುದ್ದೆ ನೀಡುವಂತೆ ಆರ್ ಕೆ ರೋಜಾ ಅವರ ಹಿಂಬಾಲಕರು ಹೈಕಮಾಂಡನ್ನು ಆಗ್ರಹಿಸಿದ್ದಾರೆ.
ಜಗನ್ ಕ್ಯಾಬಿನೆಟ್ ನಲ್ಲಿ ಸಿಗದ ಸ್ಥಾನ, ಬೇಸತ್ತ ನಟಿ ರೋಜಾ ಮಾಡಿದ್ದೇನು?
ರೋಜಾ ಅವರಿಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಎಪಿ ಎಸ್ ಆರ್ ಟಿಸಿ) ದ ಅಧ್ಯಕ್ಷೆ ಪಟ್ಟ ಸಿಗಲಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ರೋಜಾ ಮಾತ್ರ ಕಳೆದ ಕೆಲ ದಿನಗಳಿಂದ ಪಕ್ಷದ ಹಿರಿಯ ನಾಯಕರು ಸೇರಿದಂತೆ ಸಿಎಂ ಜಗನ್ ಫೋನ್ ಕೂಡಾ ಎತ್ತಿರಲಿಲ್ಲ. ರೋಜಾ ಅವರ ಪತಿಗೆ ಕರೆ ಮಾಡಿದ್ದ ಜಗನ್ ತಮ್ಮನ್ನು ಭೇಟಿ ಮಾಡುವಂತೆ ಕೇಳಿಕೊಂಡಿದ್ದರು.
ಮುನಿಸು ಬಿಟ್ಟು ಕೊನೆಗೂ ಪಕ್ಷದ ಅಧ್ಯಕ್ಷ, ಮುಖ್ಯಮಂತ್ರಿಯನ್ನು ಕಾಣಲು ಬಂದ ರೋಜಾ ಅವರು ಕೆಲ ಹೊತ್ತು ಜಗನ್ ಜೊತೆ ಮಾತುಕತೆ ನಡೆಸಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ನಗುಮುಖದಲ್ಲಿ ಮಾತನಾಡಿ
ನಂತರ ಸುದ್ದಿಗಾರರೊಂದಿಗೆ ನಗುಮುಖದಲ್ಲಿ ಮಾತನಾಡಿ, ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಜಾತಿ ಕಾರಣ ಎಂದರೆ ನಾನು ಒಪ್ಪುವುದಿಲ್ಲ. ನಾನು ಎಂದೂ ನನ್ನ ರೆಡ್ಡಿ ಜಾತಿಯನ್ನು ಮುಂದಿಟ್ಟುಕೊಂಡು ಲಾಬಿ ಮಾಡಿಲ್ಲ. ಜಾತಿ ಆಧಾರದ ಮೇಲೆ ಸಚಿವ ಸಂಪುಟದ ಸ್ಥಾನ ಹಂಚಿಕೆ ಮಾಡಿರುವುದು ಜಗನ್ ಅವರ ನಿರ್ಧಾರ ಎಂದರು. ಆದರೆ, ರೋಜಾ ಅವರು ಜಗನ್ ಜೊತೆಗೆ ಏನು ಮಾತುಕತೆ ನಡೆಸಿದರು, ರೋಜಾಗೆ ಸಚಿವ ಸ್ಥಾನದ ಭರವಸೆ ಸಿಕ್ಕಿದೆಯೇ? ಅಥವಾ ನಿಗಮ ಮಂಡಳಿಯ ಸ್ಥಾನ ನೀಡಲಾಗುತ್ತಿದೆಯೇ? ಎಂಬುದರ ಬಗ್ಗೆ ರೋಜಾ ಏನು ಹೇಳಿಲ್ಲ.
ವಿಜಯವಾಡದಲ್ಲಿರುವ ಶಾಸಕಿ ರೋಜಾ
ವಿಜಯವಾಡದಲ್ಲಿರುವ ಶಾಸಕಿ ರೋಜಾ ಅವರು ಜಾತಿ ಸಮೀಕರಣದ ಬಗ್ಗೆ ಮಾತನಾಡಿ, ಜಗನ್ ಅವರು ತಮ್ಮ ಸಚಿವ ಸಂಪುಟದಲ್ಲಿ ಎಲ್ಲಾ ಜಾತಿ, ಪಂಗಡದವರಿಗೆ ಸಮಾನ ಅವಕಾಶ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ. ನಾನು ಮದುವೆಗೆ ಮುನ್ನ ಎಂದೂ ರೆಡ್ಡಿ ಸಮುದಾಯವನ್ನು ಲಾಭಕ್ಕಾಗಿ ಬಳಸಿಲ್ಲ. ಮದುವೆಯಾಗಿದ್ದು ಹಿಂದುಳಿದ ವರ್ಗದವರನ್ನು, ನನ್ನ ಆಪ್ತ ವಲಯದಲ್ಲಿ ವಿವಿಧ ಜಾತಿ, ಪಂಗಡದವರಿದ್ದಾರೆ. ಜಾತಿಯನ್ನು ಮುಂದಿಟ್ಟುಕೊಂಡು ನಾನು ಸಚಿವ ಸ್ಥಾನಕ್ಕಾಗಿ ಎಂದಿಗೂ ಲಾಬಿ ಮಾಡಿಲ್ಲ, ಮಾಡುವುದಿಲ್ಲ ಎಂದರು.
ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಫೈರ್ ಬ್ರ್ಯಾಂಡ್
ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ರೋಜಾ ಅವರಿಗೆ ಎಂ ಎಲ್ಸಿಯಾಗಲು ಆಫರ್ ನೀಡಿದ್ದರು. 2004 ಹಾಗೂ 2009ರಲ್ಲಿ ಎರಡು ಬಾರಿ ಆಫರ್ ಬಂದರೂ ನಿರಾಕರಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ನಾಮಾಂಕಿತ ಶಾಸಕಿಯಾಗುವುದಕ್ಕಿಂತ ಜನಾದೇಶ ಪಡೆದು ಶಾಸಕಿಯಾಗುತ್ತೇನೆ ಎಂಬ ಮಾತು ಉಳಿಸಿಕೊಂಡರು. ನಾಯ್ಡು ವಿರುದ್ಧ ಪ್ರತಿ ಹಂತದಲ್ಲೂ ಹೋರಾಟ ಮಾಡಿ ಜಗನ್ ಗೆ ಬೆನ್ನೆಲುಬಾಗಿ ನಿಂತರೂ ರೋಜಾಗೆ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ ಎಂದು ರೋಜಾ ಅವರ ಆಪ್ತವಲಯ ಬೇಸರ ವ್ಯಕ್ತಪಡಿಸಿದೆ.
ಹರಕುಬಾಯಿಯಿಂದ ರೋಜಾಗೆ ಸ್ಥಾನ ತಪ್ಪಿತೇ?
ಈ ಹಿಂದೆ ವಿಧಾನಸಭೆಯಲ್ಲಿ ಟಿಡಿಪಿ ಶಾಸಕರೊಬ್ಬರ ವಿರುದ್ಧ ಅಸಂವಿಧಾನಿಕ ಪದ ಬಳಕೆ ಮಾಡಿದ್ದರಿಂದ ರೋಜಾ ಅವರನ್ನು ಸದನದಿಂದ ಹೊರ ಹಾಕಲಾಗಿತ್ತು. ಕಲಾಪದಲ್ಲಿ ಭಾಗವಹಿಸದಂತೆ ಸ್ಪೀಕರ್ ಆದೇಶಿಸಿದ್ದರು. ತೆಲುಗುದೇಶಂ ಪಕ್ಷದವರು ಕೆಣಕಿದಾಗಲೆಲ್ಲ ಸರಿ ಸಮವಾಗಿ ನಿಯಂತ್ರಣವಿಲ್ಲದ್ದಂತೆ 'ಉರಿ ನಾಲಗೆ' ಭಾಷಣ ಮಾಡುವ ಮೂಲಕ ಪ್ರತ್ಯುತ್ತರ ನೀಡುತ್ತಿದ್ದ ರೋಜಾ ಅವರಿಗೆ ಇದೇ ವರ ಹಾಗೂ ಶಾಪವಾಗಿರಬಹುದು ಎಂದು ರಾಜಕೀಯ ನಾಯಕರು ವಿಶ್ಲೇಷಿಸಿದ್ದಾರೆ. ಆದರೆ, ಪಕ್ಷ ನಿಷ್ಠೆ ತೋರಿಸುವ ಸಲುವಾಗಿ ಟಿಡಿಪಿ ನಾಯಕರು, ಚಂದ್ರಬಾಬು ನಾಯ್ಡು ಅವರನ್ನು ಎದುರು ಹಾಕಿಕೊಂಡು ಹೋರಾಟ ನಡೆಸಿದ ರೋಜಾ ಅವರಿಗೆ ಸೂಕ್ತ ಸ್ಥಾನಮಾನ ಇಂದಲ್ಲ ನಾಳೆ ಸಿಗಬಹುದು ಎಂಬ ಅನಿಸಿಕೆ ವ್ಯಕ್ತವಾಗಿದೆ.
ಜಗನ್ ಕ್ಯಾಬಿನೆಟ್ ಜಾತಿ ಲೆಕ್ಕಾಚಾರ
ಕ್ಯಾಬಿನೆಟ್ ಜಾತಿ ಲೆಕ್ಕಾಚಾರ 11 ಮಂದಿ ಮುಂದುವರಿದ ಜಾತಿ, ಪಂಗಡ, 7 ಮಂದಿ ಹಿಂದುಳಿದ ವರ್ಗ, 5 ಎಸ್ಸಿ, 1 ಎಸ್ಟಿ ಹಾಗೂ 1 ಅಲ್ಪಸಂಖ್ಯಾತ ಸಮುದಾಯಕ್ಕೆ ಹಂಚಲಾಗಿದೆ. ಈ ಪೈಕಿ ನಾಲ್ವರು ರೆಡ್ಡಿ ಸಮುದಾಯಕ್ಕೆ ಸೇರಿದ್ದಾರೆ. ಬಲಿನೇನಿ ಶ್ರೀನಿವಾಸ(ಓಂಗೊಲೆ), ಮೆಕಪಟಿ ಗೌತಮ್ ರೆಡ್ಡಿ(ಆತ್ಮಕೂರು), ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ(ಪುಂಗನೂರು), ಬುಗ್ಗನ್ನ ರಾಜೇಂದ್ರ ನಾಥ್ ರೆಡ್ಡಿ(ದೊನೆ) ಅವರಿಗೆ ಅವಕಾಶ ಸಿಕ್ಕಿದೆ
ರೆಡ್ಡಿ ಸಮುದಾಯಕ್ಕೆ ಸೇರಿರುವ ರೋಜಾ ಅವರಿಗೆ ಸ್ಥಾನ ಸಿಗದೆ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರಿಗೆ ಸ್ಥಾನ ಸಿಕ್ಕಿದೆ. ಗಾಯದ ಮೇಲೆ ಬರೆ ಎಳೆದಂತೆ, ಗೃಹ ಸಚಿವ ಸ್ಥಾನವನ್ನು ಸಬಿತಾ ಇಂದ್ರ ರೆಡ್ಡಿ ಅವರಿಗೆ ನೀಡಲಾಗಿದೆ. ಇದರಿಂದ ರೋಜಾ ಸಹಜವಾಗಿ ಬೇಜಾರು ಮಾಡಿಕೊಂಡಿದ್ದಾರೆ.