ಕೊರೊನಾ ಪ್ರಕರಣಗಳ ಏರಿಕೆ; ತಿರುಪತಿ ದೇಗುಲದಲ್ಲಿ ಮತ್ತೆ ನಿರ್ಬಂಧ
ತಿರುಮಲ, ಮಾರ್ಚ್ 31: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಭಕ್ತರ ಪ್ರವೇಶದ ಮೇಲೆ ಮತ್ತೆ ನಿರ್ಬಂಧ ಹೇರಲಾಗಿದೆ.
ದೇಗುಲದಲ್ಲಿನ ಸರ್ವ ದರ್ಶನದ ದೈನಂದಿನ ಟೋಕನ್ ವಿತರಣೆಯನ್ನು 22 ಸಾವಿರದಿಂದ 15 ಸಾವಿರಕ್ಕೆ ಇಳಿಸುತ್ತಿದ್ದು, ಆನ್ಲೈನ್ ವಿಶೇಷ ದರ್ಶನ ಟಿಕೆಟ್ಗಳನ್ನೂ ತಗ್ಗಿಸಲಾಗುವುದೆಂದು ಟಿಟಿಡಿ ನಿರ್ವಹಣಾ ಸಮಿತಿ ಮಾಹಿತಿ ನೀಡಿದೆ. ಸದ್ಯಕ್ಕೆ ದೇಗುಲ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ಎಲ್ಲಾ ವಾಹನಗಳನ್ನು ಅಲಿಪಿರಿಯಲ್ಲಿ ಸ್ಯಾನಿಟೈಸ್ ಮಾಡಲಾಗುತ್ತಿದೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಮತ್ತೆ ಹಿರಿಯರು, ಮಕ್ಕಳಿಗೂ ಅವಕಾಶ
ಫೆಬ್ರವರಿ ತಿಂಗಳ ನಂತರ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಆಂಧ್ರಪ್ರದೇಶದಲ್ಲಿಯೂ ಪ್ರಕರಣಗಳು ಏರಿಕೆಯಾಗಿದ್ದು, ದಿನನಿತ್ಯ ಸುಮಾರು ಒಂದು ಸಾವಿರದ ಸಮೀಪ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ನಿರ್ಬಂಧ ಹೇರುವ ಕ್ರಮ ಕೈಗೊಳ್ಳುತ್ತಿರುವುದಾಗಿ ಟಿಟಿಡಿ ಮಂಡಳಿ ತಿಳಿಸಿದೆ.
ಆಂಧ್ರದ ತಿರುಪತಿ, ಶ್ರೀಕಾಳಹಸ್ತಿ, ಕನಿಪಕ್ಕಂ ದೇಗುಲಗಳಿರುವ ಚಿತ್ತೂರು ಜಿಲ್ಲೆಯಲ್ಲಿ ಅತಿ ಹೆಚ್ಚಿನ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ.
ತಿರುಪತಿಗೆ ಬರುವ ಭಕ್ತರಿಗೆ ದೇಗುಲ ಆಡಳಿತ ಮಂಡಳಿ ಸದ್ಯಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಇಲ್ಲಿಗೆ ಭೇಟಿ ನೀಡುವ ಭಕ್ತರು ಮಾಸ್ಕ್ ಧರಿಸಿರಲೇಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಜ್ವರ, ಕೆಮ್ಮು ಹಾಗೂ ಶೀತ ಇರುವ ಜನರು ದೇಗುಲಕ್ಕೆ ಬರದಂತೆ ನಿರ್ಬಂಧ ವಿಧಿಸಲಾಗಿದೆ. ಕಳೆದ ಬೇಸಿಗೆಯಲ್ಲಿ ಕೊರೊನಾ ಕಾರಣದಿಂದಾಗಿ ತಿರುಪತಿ ದೇಗುಲವನ್ನು ಮೂರು ತಿಂಗಳ ಕಾಲ ಮುಚ್ಚಲಾಗಿತ್ತು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ