ತಿರುಪತಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ರತ್ನಪ್ರಭಾ
ತಿರುಪತಿ, ಮಾರ್ಚ್ 23: ಆಂಧ್ರಪ್ರದೇಶದ ಪ್ರತಿಷ್ಠಿತ ತಿರುಪತಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಭಾರತೀಯ ಜನತಾ ಪಕ್ಷ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಬಹುದು ಎಂಬ ಸುದ್ದಿ ನಿಜವಾಗಿದೆ. ಮಾಜಿ ಐಎಎಸ್ ಅಧಿಕಾರಿ ರತ್ನಪ್ರಭಾ ಅವರು ಬಿಜೆಪಿ ಹಾಗೂ ಜನಸೇನಾ ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ರತ್ನಪ್ರಭಾರನ್ನು ಆಯ್ಕೆ ಮಾಡಿ ಇಂದು ಘೋಷಿಸಲಾಗಿದೆ.
ಬಿಜೆಪಿ ಬೆಂಬಲಿತ ಜನಸೇನಾದ ಮುಖ್ಯಸ್ಥ ಪವನ್ ಕಲ್ಯಾಣ್ ಅಭ್ಯರ್ಥಿ ಆಯ್ಕೆ ಬಗ್ಗೆ ಸ್ಥಳೀಯ ಬಿಜೆಪಿ ಮುಖಂಡರೊಡನೆ ಚರ್ಚಿಸಿ ನಿರ್ಣಯ ತೆಗೆದುಕೊಂಡ ಬಳಿಕವೇ ರತ್ನಪ್ರಭಾ ಅವರ ಆಯ್ಕೆಯಾಗಿದೆ.
ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಕೊವಿಡ್ 19ನಿಂದಾಗಿ ಮೃತಪಟ್ಟಿದ್ದು, ಉಪ ಚುನಾವಣೆ 2021ರ ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಮೇ 2ಕ್ಕೆ ಫಲಿತಾಂಶ ಹೊರ ಬರಲಿದೆ.
ಆಡಳಿತಾರೂಢ ವೈಎಸ್ಸಾರ್ ಕಾಂಗ್ರೆಸ್ ಪಕ್ಷದಿಂದ ನಿರೀಕ್ಷೆಯಂತೆ ಸ್ಥಳೀಯ ವೈದ್ಯ ಡಾ. ಎಂ ಗುರುಮೂರ್ತಿ ಅವರನ್ನು ಕಣಕ್ಕಿಳಿಸಲಾಗಿದೆ. ತೆಲುಗುದೇಶಂ ಪಕ್ಷ(ಟಿಡಿಪಿ)ದಿಂದ ಮಾಜಿ ಕೇಂದ್ರ ಸಚಿವೆ ಪನಬಾಕ ಲಕ್ಷ್ಮಿ ಅವರನ್ನು ಮತ್ತೊಮ್ಮೆ ಸ್ಪರ್ಧಿಸಲು ಸೂಚಿಸಲಾಗಿದೆ. ಕಳೆದ ಬಾರಿ ಎರಡನೇ ಸ್ಥಾನಕ್ಕೆ ಲಕ್ಷ್ಮಿ ಕುಸಿದಿದ್ದರು.
2019ರಲ್ಲಿ ಬಿ ದುರ್ಗಾ ಪ್ರಸಾದ್ ರಾವ್ 7,22,877 (ಶೇ 55.03) ಮತಗಳನ್ನು ಪಡೆದು ಜಯ ಗಳಿಸಿದ್ದರು, ಟಿಡಿಪಿಯ ಪಿ ಲಕ್ಷ್ಮಿ4,94,501 ಮತ ( ಶೇ 37.65 ಮತ) ಗಳಿಸಿ ಎರಡನೇ ಸ್ಥಾನ ಗಳಿಸಿದ್ದರು. ನೋಟಾ 25,781 ಮತಗಳು ಬಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನೋಟಾಗಿಂತ ಕಡಿಮೆ 24,039 ಮತ ಗಳಿಸಿದ್ದರು. ಸರ್ವೆಪಲ್ಲಿ, ಗುಡೂರು(ಎಸ್ ಸಿ), ಸುಲ್ಲೂರ್ ಪೇಟ(ಎಸ್ ಸಿ), ವೆಂಕಟಗಿರಿ, ತಿರುಪತಿ, ಶ್ರೀಕಾಳಹಸ್ತಿ, ಸತ್ಯವೇಡು (ಎಸ್ ಸಿ) ಏಳು ವಿಧಾನಸಭಾ ಕ್ಷೇತ್ರಗಳನ್ನು ತಿರುಪತಿ ಲೋಕಸಭಾ ಕ್ಷೇತ್ರ ಹೊಂದಿದೆ.