ಹೌದೇ? ನಿಜವೇ? ತಿರುಪತಿಯಿಂದ ಲೋಕಸಭೆಗೆ ಅಚ್ಚರಿಯ ಅಭ್ಯರ್ಥಿ?
ಅಮರಾವತಿ, ಜನವರಿ 29: ಆಂಧ್ರಪ್ರದೇಶದ ಪ್ರತಿಷ್ಠಿತ ತಿರುಪತಿ ಲೋಕಸಭಾ ಕ್ಷೇತ್ರದಿಂದ ಈ ಬಾರಿ ಭಾರತೀಯ ಜನತಾ ಪಕ್ಷ ಅಚ್ಚರಿಯ ಅಭ್ಯರ್ಥಿಯೊಬ್ಬರನ್ನು ಕಣಕ್ಕಿಳಿಸಲು ಮುಂದಾಗಿದೆ. ಈ ಅಭ್ಯರ್ಥಿ ಸ್ಪರ್ಧಿಸುವುದಾದರೆ ನಮ್ಮ ಬೆಂಬಲ ನಿಮಗೆ ಎಂದು ಜನಸೇನಾ ಕೂಡಾ ತಲೆಯಾಡಿಸಿ ಒಪ್ಪಿಗೆ ಸೂಚಿಸಿದೆ. ವರದಿಗಳ ಪ್ರಕಾರ ಮಾಜಿ ಐಎಎಸ್ ಅಧಿಕಾರಿ ರತ್ನಪ್ರಭಾ ಅವರು ಈ ಎರಡು ಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ತಿರುಪತಿಯಿಂದ ಸ್ಪರ್ಧಿಸುವ ಸಾಧ್ಯತೆ ನಿಚ್ಚಳವಾಗಿದೆ.
ಇಷ್ಟಕ್ಕೂ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಜನಪ್ರಿಯರಾಗಿದ್ದ ಈ ಮಾಜಿ ಐಎಎಸ್ ಅಧಿಕಾರಿಯ ಹೆಸರನ್ನು ಸೂಚಿಸಿದ್ದಾದರೂ ಯಾರು ಎಂಬ ಪ್ರಶ್ನೆಗೆ ಉತ್ತರ ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್. ಪವನ್ ಅವರು ರತ್ನಪ್ರಭಾ ಸೂಕ್ತ ಅಭ್ಯರ್ಥಿ ಎಂದು ಬಿಜೆಪಿ ವರಿಷ್ಠರಿಗೆ ಸೂಚಿಸಿದ್ದಾರೆ. ಇನ್ನೊಂದು ಮೂಲದ ಪ್ರಕಾರ, ರತ್ನಪ್ರಭಾ ಅವರ ಆಯ್ಕೆ ಹಿಂದೆ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಹೆಸರು ಕೂಡಾ ಕೇಳಿ ಬಂದಿದೆ.
ಬಿಜೆಪಿ ಸೇರಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ರತ್ನಪ್ರಭಾ
ನಾಯ್ಡು ಹಾಗೂ ಕಲ್ಯಾಣ್ ತಮ್ಮ ವೈಮನಸ್ಯ ಮರೆತು ಒಮ್ಮತದ ಅಭ್ಯರ್ಥಿ ಆಯ್ಕೆಗಾಗಿ ಚರ್ಚಿಸಿ ನಿರ್ಣಯ ತೆಗೆದುಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ತಿರುಪತಿ ಮೇಲೆ ಹಿಡಿಯ ಹೊಂದಿರುವ ಆಡಳಿತಾರೂಢ ಜಗನ್ ಮೋಹನ್ ರೆಡ್ಡಿ ಕೂಡಾ ತಮ್ಮ ಪಕ್ಷದಿಂದ ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದಾರೆ.
ಕ್ಲೀನ್ ಇಮೇಜ್ ಇದು ಬಿಜೆಪಿಯ ಹೊಸ ಮಂತ್ರ
ರತ್ನಪ್ರಭಾ ಅವರು ಸರ್ಕಾರಿ ಹುದ್ದೆಯಲ್ಲಿದ್ದಾಗ ಕ್ಲೀನ್ ಇಮೇಜ್ ಹೊಂದಿದ್ದರು ಹೀಗಾಗಿ, ಬಿಜೆಪಿ ವರಿಷ್ಠರು ಕೂಡಾ ಈ ಮನವಿಯನ್ನು ತಕ್ಷಣವೇ ಪುರಸ್ಕರಿಸುವ ಸಾಧ್ಯತೆಯೂ ಇದೆ. ತೆಲುಗು ದೇಶಂ ಪಕ್ಷಕ್ಕೆ ತಿರುಪತಿಯಲ್ಲಿ ಗೆಲುವು ಅನಿವಾರ್ಯವಾಗಿದೆ. ಪ್ರಬಲ ಅಭ್ಯರ್ಥಿ ಆಯ್ಕೆಯಲ್ಲಿ ಎಡವಿ ಮೂರನೇ ಸ್ಥಾನಕ್ಕೆ ಕುಸಿಯುವ ಭಯ ಆವರಿಸಿದ್ದರಿಂದ ಅಭ್ಯರ್ಥಿ ಆಯ್ಕೆಯಲ್ಲಿ ನಾಯ್ಡು ಎಚ್ಚರಿಕೆ ವಹಿಸಿದ್ದಾರೆ ಎಂದು ಆಪ್ತರು ಹೇಳಿದ್ದಾರೆ.
ಉಪ ಚುನಾವಣೆ ಸಿದ್ಧವಾಗಬೇಕಿದೆ
ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಬಲ್ಲಿ ದುರ್ಗಾ ಪ್ರಸಾದ್ ರಾವ್ ಅವರು ಸೆಪ್ಟೆಂಬರ್ ತಿಂಗಳಲ್ಲಿ ಕೊವಿಡ್ 19ನಿಂದಾಗಿ ಮೃತಪಟ್ಟಿದ್ದು, ಉಪ ಚುನಾವಣೆ 2021ರಲ್ಲಿ ನಡೆಯಲಿದ್ದು, ಈ ಬಾರಿ ಗುರುಮೂರ್ತಿ ಎಂಬ ಅಭ್ಯರ್ಥಿಯನ್ನು ವೈಎಸ್ಸಾರ್ ಕಾಂಗ್ರೆಸ್ ಹೆಸರಿಸಿದೆ. ಕಾಂಗ್ರೆಸ್ಸಿನಿಂದ ಚಿಂಟಾ ಮೋಹನ್ ಅಭ್ಯರ್ಥಿಯಾಗಿದ್ದರೆ, ಟಿಡಿಪಿ ಈ ಮುಂಚೆ ಪನಬಾಕ ಲಕ್ಷ್ಮಿ ಹೆಸರನ್ನು ಘೋಷಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನು ಬದಲಾಯಿಸಲು ಟಿಡಿಪಿ ನಿರ್ಧರಿಸಿದ್ದು, ಬಿಜೆಪಿ-ಟಿಡಿಪಿ ಹಾಗೂ ಜನಸೇನಾ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಯಿತು.
ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಬಿಜೆಪಿಗೆ, ಖರ್ಗೆ ವಿರುದ್ಧ ಸ್ಪರ್ಧೆ?
2019ರಲ್ಲಿ ತಿರುಪತಿ ಲೋಕಸಭಾ ಚುನಾವಣೆ
2019ರಲ್ಲಿ ಬಿ ದುರ್ಗಾ ಪ್ರಸಾದ್ ರಾವ್ 7,22,877 (ಶೇ 55.03) ಮತಗಳನ್ನು ಪಡೆದು ಜಯ ಗಳಿಸಿದ್ದರು, ಟಿಡಿಪಿಯ ಪಿ ಲಕ್ಷ್ಮಿ4,94,501 ಮತ ( ಶೇ 37.65 ಮತ) ಗಳಿಸಿ ಎರಡನೇ ಸ್ಥಾನ ಗಳಿಸಿದ್ದರು. ನೋಟಾ 25,781 ಮತಗಳು ಬಂದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ನೋಟಾಗಿಂತ ಕಡಿಮೆ 24,039 ಮತ ಗಳಿಸಿದ್ದರು.
ಸರ್ವೆಪಲ್ಲಿ, ಗುಡೂರು(ಎಸ್ ಸಿ), ಸುಲ್ಲೂರ್ ಪೇಟ(ಎಸ್ ಸಿ), ವೆಂಕಟಗಿರಿ, ತಿರುಪತಿ, ಶ್ರೀಕಾಳಹಸ್ತಿ, ಸತ್ಯವೇಡು (ಎಸ್ ಸಿ) ಏಳು ವಿಧಾನಸಭಾ ಕ್ಷೇತ್ರಗಳನ್ನು ತಿರುಪತಿ ಲೋಕಸಭಾ ಕ್ಷೇತ್ರ ಹೊಂದಿದೆ.
ರತ್ನಪ್ರಭಾ ಕಿರು ಪರಿಚಯ
ಹೈದರಾಬಾದ್ ಮೂಲದ ರತ್ನಪ್ರಭಾ ಅವರು 1981ನೇ ಬ್ಯಾಚ್ ಐಎಎಸ್ ಅಧಿಕಾರಿ. ತಂದೆ ಸಿವಿಲ್ ಇಂಜಿನಿಯರ್ ಆಗಿದ್ದರು. ತಾಯಿ ವೈದ್ಯೆ. ರತ್ನಪ್ರಭಾ ಅವರ ಸಹೋದರ ಸಹ ನಾಗರಿಕ ಸೇವೆಯಲ್ಲಿದ್ದಾರೆ.
1981ರಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಬೀದರ್ನಲ್ಲಿ ರತ್ನಪ್ರಭಾ ಅವರು ಸೇವೆ ಆರಂಭಿಸಿದರು. ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.
ನಿವೃತ್ತಿ ಬಳಿಕ ಬಿಜೆಪಿ ಸೇರಿದ ರತ್ನಪ್ರಭಾ ಅವರನ್ನು ಅಭ್ಯರ್ಥಿಯಾಗಿ ಮಾಡಿದರೆ ದಲಿತ ಸಮುದಾಯದ ಮತಗಳ ಜೊತೆಗೆ ಪ್ರಜ್ಞಾವಂತರ ಮತಗಳು ಸಹ ಬಿಜೆಪಿಗೆ ಬರುತ್ತದೆ ಎಂಬ ನಂಬಿಕೆಯಿದೆ.