ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!
Recommended Video
ಅಮರಾವತಿ, ಡಿಸೆಂಬರ್ 26 : ಕೇಂದ್ರದಲ್ಲಿರುವ ಎನ್ ಡಿಎ ಸರ್ಕಾರಕ್ಕೆ ಕಾಂಗ್ರೆಸ್ ಗಿಂತ ದೊಡ್ಡ ದುಃಸ್ವಪ್ನವೆನ್ನಿಸಿದ್ದ ತೆಲುಗುದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರ ಜುಟ್ಟು ಕೊನೆಗೂ ಪ್ರಧಾನಿ ನರೇಂದ್ರ ಮೋದಿಗೆ ಸಿಕ್ಕಂತಾಗಿದೆ! ತೆಲಂಗಾಣ ಸೆಂಟಿಮೆಂಟ್ ಅನ್ನೇ ಇಟ್ಟುಕೊಂಡು ಚಂದ್ರಬಾಬು ನಾಯ್ಡು ಅವರನ್ನು ಹಣಿಯುವ ಕೆಲಸ ಮಾಡಲು ಮೋದಿ ಮುಂದಾಗಿದ್ದಾರೆ.
ಕಾಂಗ್ರೆಸ್ಗಿಂತಲೂ ಬಿಜೆಪಿ ಅಪಾಯಕಾರಿ: ಚಂದ್ರಬಾಬು ನಾಯ್ಡು
ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರದ ಸಮಯದಲ್ಲಿ ನಾಯ್ಡು ಅವರನ್ನು 'ತೆಲಂಗಾಣ ವಿರೋಧಿ' ಎಂದು ಬಿಂಬಿಸುವಲ್ಲಿ ಯಶಸ್ವಿಯಾದ ತೆಲಂಗಾಣ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ ಚಂದ್ರಶೇಖರ್ ರಾವ್ ಅವರ ಹಾದಿಯನ್ನೇ ಪ್ರಧಾನಿ ನರೇಂದ್ರ ಮೋದಿಯವರೂ ತುಳಿದಿದ್ದಾರೆ!
ಮೋದಿಯ ಸ್ವಭಾವದಿಂದಲೇ ದೇಶದ ಅರ್ಥಿಕತೆ ಹಾಳು: ಚಂದ್ರಬಾಬು ನಾಯ್ಡು
ಆಂಧ್ರ ಪ್ರದೇಶದ ಬಿಜೆಪಿ ಕಾರ್ಯಕರ್ತರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ನರೇಂದ್ರ ಮೋದಿ ಅವರು, 'ಕಾಂಗ್ರೆಸ್ ನೊಂದಿಗೆ ಕೈಜೋಡಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ಎನ್ ಟಿ ಆರ್ ಅವರಿಗೆ ಮೋಸ ಮಾಡುತ್ತಿದ್ದಾರೆ' ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
'ಸೋನಿಯಾ ಗೋಡ್ಸೆ' ಎಂದಿದ್ದ ನಾಯ್ಡು!
2014 ರ ಲೋಕಸಭಾ ಚುನಾವಣೆಯ ನಂತರ ಬಿಜೆಪಿ ಜೊತೆ ಕೈಜೋಡಿಸಿದ್ದ ನಾಯ್ಡು, ಸಿಕ್ಕಾಗಲೆಲ್ಲ ಕಾಂಗ್ರೆಸ್ ಅನ್ನು ಹಳಿಯಲು ಮರೆತವರಲ್ಲ. ಸೋನಿಯಾ ಗಾಂಧಿ ಅವರನ್ನು 'ಸೋನಿಯಾ ಗೋಡ್ಸೆ' ಎಂದು ಕರೆದಿದ್ದವರು ನಾಯ್ಡು. ಕಾಂಗ್ರೆಸ್ ಅನ್ನು ಹೂಳಬೇಕು ಎಂದಿದ್ದರು. ಈ ದೇಶದ ರೈತರು ಕತ್ತಿ ಹಿಡಿದು ಬಂದು ಕಾಂಗ್ರೆಸ್ ಪಕ್ಷವನ್ನು ಮುಗಿಸಿ, ಕಾಂಗ್ರೆಸ್ ಪಕ್ಷ ಈ ದೇಶದ ಶನಿ ಎಂದು ನಾಯ್ಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆದರೆ ಇಂದು ಅದೇ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದಾರೆ' ಎಂದು ಮೋದಿ ನಾಯ್ಡು ಅವರ ಹಳೆಯ ದಿನಗಳನ್ನು ಕೆದಕಿದರು.
ತೆಲಂಗಾಣ ಸೆಂಟಿಮೆಂಟ್
ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಎನ್ ಟಿ ರಾಮರಾವ್ ಅವರಿಗೆ ಆಂಧ್ರಪ್ರದೇಶದ ಜನರೊಂದಿಗಿದ್ದ ಭಾವನಾತ್ಮಕ ಬಂಧವನ್ನು ನೆನಪಿಸಿದ ಮೋದಿ, "ಕಾಂಗ್ರೆಸ್ ನಿಂದ ಹೊರಬಂದು, ಅದರಿಂದ ದೂರವುಳಿದಿದ್ದ ಎನ್ ಟಿಆರ್ ಅವರ ಪಕ್ಷದವರೇ ಆದ ನಾಯ್ಡು, ಇದೀಗ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದು, ಎನ್ ಟಿಆರ್ ಅವರಿಗೆ ಮಾಡಿದ ವಂಚನೆ" ಎಂದರು.
ನಾಯ್ಡು ಪ್ರತಿಕ್ರಿಯೆ ಏನು?
ಮೋದಿಯವರ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ನಾಯ್ಡು, ಕಾಂಗ್ರೆಸ್-ಟಿಡಿಪಿ ಒಟ್ಟಾಗಿರುವುದನ್ನು ಸಹಿಸದೆ ಮೋದಿಯವರು ಇಂಥ ಆರೋಪ ಮಾಡುತ್ತಿದ್ದಾರೆ. ಯಾರೇನೇ ಅಂದರೂ ಸರಿ, ನಾವು ಲೋಕಸಭಾ ಚುನಾವಣೆಯನ್ನೂ ಕಾಂಗ್ರೆಸ್ ಜೊತೆಗೇ ಸ್ಪರ್ಧಿಸುತ್ತೇವೆ ಎಂದು ಖಡಕ್ಕಾಗಿ ಉತ್ತರಿಸಿದ್ದಾರೆ.
ತೆಲಂಗಾಣದಲ್ಲಿ ಮುಖಭಂಗ
ಇತ್ತೀಚೆಗೆ ತೆಲಂಗಾಣದಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ತೆಲುಗುದೇಶಂ ಪಕ್ಷ ಮೈತ್ರಿ ಮಾಡಿಕೊಂಡಿತ್ತು. ಆದರೆ ತೆಲಂಗಾಣ ರಾಷ್ಟ್ರ ಸಮಿತಿಯ ಅಲೆಯ ಮುಂದೆ ಈ ಮಹಾಕೂಟಮಿ ಪೇಲವವಾಗಿ ಸೋತು ಸುಣ್ಣವಾಗಿತ್ತು. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು, ಕೆಸಿಆರ್ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿ, ಟಿಆರ್ ಎಸ್ ಪಾರುಪತ್ಯಕ್ಕೆ ಮಂಗಳ ಹಾಡುವ ಯೋಚನೆಗೆ ತೀವ್ರ ಮುಖಭಂಗವಾಗಿತ್ತು.