'ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದೇ ದೇಶಪ್ರೇಮವೇ?'
ಅಮರಾವತಿ(ಆಂಧ್ರಪ್ರದೇಶ), ಮಾರ್ಚ್ 11: ನಟ ಕಮ್ ರಾಜಕಾರಣಿ, ಜನ ಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆ ಮೊಳಗಿಸುವುದು, ಪ್ರೇಕ್ಷಕರು ಎದ್ದು ನಿಲ್ಲುವುದು ಈ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, 'ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ದೇಶಪ್ರೇಮವೇ?', ಸಿನಿಮಾ ಥಿಯೇಟರ್ಗಳಲ್ಲಿ ನಮ್ಮ ಕುಟುಂಬದೊಂದಿಗೆ ಸಿನಿಮಾ ವೀಕ್ಷಿಸುತ್ತೇವೆ. ನನ್ನ ದೇಶಭಕ್ತಿ ಪರೀಕ್ಷೆ ಮಾಡಿಕೊಳ್ಳಲು ಅದು ಸ್ಥಳವಲ್ಲ. ಗಡಿಯಲ್ಲಿ ಯುದ್ಧ ಸನ್ನಿವೇಶವಿದೆ. ಅಲ್ಲಿ ತೋರಬೇಕು ನಮ್ಮ ದೇಶಪ್ರೇಮ ಎಂದಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಮತ್ತೆ ಪ್ರತ್ಯೇಕ ರಾಜ್ಯ ಕೂಗು: ಪವನ್ ಕಲ್ಯಾಣ್ ಬೆಂಬಲ
ರಾಜಕೀಯ ಪಕ್ಷಗಳು ತಮ್ಮ ಸಭೆ ನಡೆಯುವ ಮೊದಲು ರಾಷ್ಟ್ರಗೀತೆ ಹಾಡಬಹುದಲ್ಲ. ಸಿನಿಮಾ ಮಂದಿರಗಳಲ್ಲಿ ಮಾತ್ರವೇಕೆ? ದೇಶದ ಅತ್ಯುನ್ನತ ಕಚೇರಿಗಳಲ್ಲೂ ರಾಷ್ಟ್ರಗೀತೆ ಹಾಡಬೇಕು ಎಂದಿದ್ದಾರೆ. ಸಮಾಜದಲ್ಲಿ ಇನ್ನೂ ರೌಡಿಯಿಸಂ, ಭ್ರಷ್ಟಾಚಾರಗಳು ಅಸ್ತಿತ್ವದಲ್ಲಿ ಇವೆ. ಅವುಗಳನ್ನು ನಿರ್ಮೂಲನ ಮಾಡಬೇಕು. ಆ ಮೂಲಕ ನಮ್ಮ ದೇಶಭಕ್ತಿ ತೋರಿಸಬೇಕು ಎಂದು ಹೇಳಿದ್ದಾರೆ.
ಸಿನಿಮಾ ಥಿಯೇಟರ್ಗಳಲ್ಲಿ ರಾಷ್ಟ್ರಗೀತೆ ಹಾಕಿದಾಗ ಪ್ರತಿಯೊಬ್ಬರೂ ಎದ್ದುನಿಲ್ಲಬೇಕು ಎಂದು 2016ರಲ್ಲಿ ಸುಪ್ರೀಂಕೋರ್ಟ್ ಸೂಚನೆ ನೀಡಿದ್ದಾಗಿನಿಂದಲೂ ಅದನ್ನು ವಿರೋಧಿಸುತ್ತ ಬಂದಿದ್ದ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ ಮತ್ತೆ ಅದೇ ವಿಚಾರ ಮಾತನಾಡಿದ್ದು, ಥಿಯೇಟರ್ಗಳಲ್ಲಿ ರಾಷ್ಟ್ರಗೀತೆ ಹಾಡುವಾಗ ನನಗೆ ಎದ್ದುನಿಲ್ಲಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಸಿನಿಮಾ, ಥಿಯೇಟರ್ ಗಳಲ್ಲಿ ಪ್ರದರ್ಶನಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡುವುದು ಹಾಗೂ ಆ ಸಂದರ್ಭದಲ್ಲಿ ಅಲ್ಲಿ ನೆರೆದಿರುವವರು ಗೌರವ ಸಲ್ಲಿಸುವುದನ್ನು ಕಡ್ಡಾಯಗೊಳಿಸಿ 2016ರ ನವೆಂಬರ್ 30ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಪವನ್ ಕಲ್ಯಾಣ್ ಈ ಆದೇಶವನ್ನು ಪ್ರಶ್ನಿಸಿದ್ದರು. ಪವನ್ ಕಲ್ಯಾಣ್ವಿರುದ್ಧ 2016ರ ಡಿಸೆಂಬರ್ನಲ್ಲಿ ಹೈದರಾಬಾದ್ಮೂಲದ ವಕೀಲರೊಬ್ಬರು ದೂರು ದಾಖಲಿಸಿ, ರಾಷ್ಟ್ರಗೀತೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
'ಸಿನಿಮಾ ಮಾಡೋಕೆ ಟೈಂ ಇಲ್ಲ, ಪ್ರಜಾಸೇವೆಯೇ ನನಗೆಲ್ಲ'
2017ರ ಅಕ್ಟೋಬರ್ನಲ್ಲಿ ತೀರ್ಪಿನ ಮರುಪರಿಶೀಲನೆ ಮಾಡಿದ್ದ ಸುಪ್ರೀಂಕೋರ್ಟ್ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಹಾಕಿದಾಗ ಎದ್ದುನಿಲ್ಲುವುದು ಕಡ್ಡಾಯವಲ್ಲ ಎಂದಿತ್ತು. 2018ರ ಜನವರಿ 09ರಂದು ಸಿನಿಮಾ ಹಾಲ್ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠವು ಆದೇಶ ನೀಡಿ, ಇದು ಆಯಾ ಸಿನಿಮಾ ಹಾಲ್ ಮಾಲೀಕರ ಅವಗಾಹನೆಗೆ ಬಿಟ್ಟಿದ್ದು, ರಾಷ್ಟ್ರಗೀತೆ ಪ್ರಸಾರ ಮಾಡಬೇಕೇ? ಬೇಡವೇ? ಎಂಬುದನ್ನು ಅವರು ನಿರ್ಧರಿಸಬಹುದು ಎಂದಿತ್ತು.