ಆಂಧ್ರಪ್ರದೇಶದಲ್ಲಿನ ವಿಚಿತ್ರ ಕಾಯಿಲೆಗೆ ಕಾರಣ ಇದು
ಅಮರಾವತಿ, ಡಿಸೆಂಬರ್ 8: ಆಂಧ್ರಪ್ರದೇಶದ ಎಲೂರು ನಗರದಲ್ಲಿ ಶನಿವಾರ ರಾತ್ರಿಯಿಂದ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದ್ದು, ನೂರಾರು ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಆಸ್ಪತ್ರೆಗಳಿಗೆ ತೆರಳಿ ಅಸ್ವಸ್ಥರ ಯೋಗಕ್ಷೇಮ ವಿಚಾರಿಸಿದ್ದಾರೆ.
ಈ ಘಟನೆಯಲ್ಲಿ ಇದುವರೆಗೂ ಒಬ್ಬರು ಮೃತಪಟ್ಟಿದ್ದಾರೆ. ಅನಾರೋಗ್ಯಪೀಡಿತ ಜನರಲ್ಲಿ ಕಂಡುಬಂದಿರುವ ಸೋಂಕಿನಲ್ಲಿ ಪ್ರಬಲ ರಾಸಾಯನಿಕ ಅಂಶಗಳು ಇರುವುದು ಪ್ರಾಥಮಿಕ ವಿಶ್ಲೇಷಣೆಗಳಿಂದ ಕಂಡುಬಂದಿದೆ.
ಆಂಧ್ರದಲ್ಲಿ ವಿಚಿತ್ರ ಕಾಯಿಲೆ ಪತ್ತೆ; ಆಸ್ಪತ್ರೆ ಸೇರಿದ 200 ಜನ!
ಎಲೂರು ನಗರದಲ್ಲಿ ಉಂಟಾಗಿರುವ ವಿಚಿತ್ರ ಕಾಯಿಲೆಯ ನಿಖರ ಕಾರಣವನ್ನು ಪತ್ತೆಹಚ್ಚಲು ದೇಶದ ಉನ್ನತ ವೈಜ್ಞಾನಿಕ ಕೇಂದ್ರಗಳ ಪರಿಣತರನ್ನು ಒಳಗೊಂಡ ಹಲವು ತಂಡಗಳನ್ನು ನಿಯೋಜಿಸಲಾಗಿದೆ. ಅವರು ಈ ಸೋಂಕಿನಲ್ಲಿ ಆರ್ಗನೋಕ್ಲೋರಿನ್ ಪಾತ್ರವನ್ನು ತಜ್ಞರು ಅಧ್ಯಯನ ಮಾಡುತ್ತಿದ್ದಾರೆ.
ಎಲೂರಿನಲ್ಲಿ ವಿಚಿತ್ರ ಕಾಯಿಲೆ; ಸಿಎಂ ಜಗನ್ ಭೇಟಿ
ಆರ್ಗನೋಕ್ಲೋರಿನ್ ಕ್ರಿಮಿನಾಶಕಗಳು ಕ್ಲೋರಿನ್ಯುಕ್ತ ಹೈಡ್ರೋಕಾರ್ಬನ್ಗಳಾಗಿದ್ದು, ಕೃಷಿ ಮತ್ತು ಸೊಳ್ಳೆ ನಿಯಂತ್ರಣಕ್ಕೆ ಬಳಸಲಾಗುತ್ತದೆ. ಇದರಲ್ಲಿ ಸೊಳ್ಳೆ ನಿಯಂತ್ರಣದ ಹೊಗೆಯಲ್ಲಿ ವ್ಯಾಪಕವಾಗಿ ಬಳಸಲಾಗುವ ಡಿಡಿಟಿ ಸೇರಿದಂತೆ ಅನೇಕ ವಿಷಕಾರಿ ಪದಾರ್ಥಗಳು ಇರುತ್ತದೆ. ಮುಂದೆ ಓದಿ.
ವರದಿಗೆ ಕಾಯಲಾಗುತ್ತಿದೆ
ಆರ್ಗನೋಕ್ಲೋರಿನ್ ಪ್ರಮುಖವಾಗಿ ಗಂಭೀರ ಪ್ರಮಾಣದಲ್ಲಿಕಾಯಿಲೆಗಳನ್ನು ಹರಡುತ್ತವೆ. ಬಹುಶಃ ಆಂಧ್ರಪ್ರದೇಶದಲ್ಲಿ ಕಾಣಿಸಿಕೊಂಡಿರುವ ಈ ವಿಚಿತ್ರ ಕಾಯಿಲೆಗೂ ಇದೇ ಕಾರಣವಿರಬಹುದು. ಇದನ್ನು ಖಚಿತಪಡಿಸಿಕೊಳ್ಳಲು ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಸಾಯನಿಕಗಳ ಅಧ್ಯಯನ
ಕಾಯಿಲೆ ಹರಡಿರುವ ಸ್ವರೂಪವನ್ನು ಪರಿಶೀಲಿಸಿರುವ ತಜ್ಞರು, ಕಲುಷಿತ ನೀರು ಸೇವನೆಯ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಹಾಗೆಯೇ ಇತರೆ ಪರೀಕ್ಷೆಗಳಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಹೀಗಾಗಿ ತೀವ್ರ ಚಿಂತೆಗೀಡುಮಾಡಿರುವ ಈ ಘಟನೆಗೆ ಕಾರಣವಾಗಿರಬಹುದಾದ ಇತರೆ ರಾಸಾಯನಿಕ ಅಂಶಗಳ ಬಗ್ಗೆ ವೈದ್ಯಕೀಯ ತಂಡಗಳು ಗಮನ ಹರಿಸಿವೆ.
ನೀರು ಮತ್ತು ಹಾಲಿನ ಮಾದರಿ ಪರಿಶೀಲನೆ
ಎಲೂರು ನಗರದಲ್ಲಿ ಬಳಸಲಾಗುವ ನೀರು ಮತ್ತು ಹಾಲಿನ ಮಾದರಿಗಳನ್ನು ಹೆಚ್ಚಿನ ಲೋಹದ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಲು ಹೈದರಾಬಾದ್ನಲ್ಲಿರುವ ಸೆಲ್ಯುಲರ್ ಮತ್ತು ಮಾಲೆಕ್ಯುಲರ್ ಕೇಂದ್ರಕ್ಕೆ ರವಾನಿಸಲಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಕೇಂದ್ರದಿಂದ ಮೂವರ ತಂಡ
ಆಂಧ್ರಪ್ರದೇಶದ ಎಲೂರಿಗೆ ಕೇಂದ್ರ ಸರ್ಕಾರವು ಮೂವರು ತಜ್ಞರ ತಂಡವನ್ನು ಕಳುಹಿಸಿದೆ. ಏಮ್ಸ್ನ ತುರ್ತು ಔಷಧ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಜಮ್ಷೆಡ್ ನಾಯರ್, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ತಜ್ಞ ಡಾ. ಅವಿನಾಶ್ ದಿಯೋಷ್ಟವರ್ ಮತ್ತು ದೆಹಲಿಯ ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರದ ಉಪ ನಿರ್ದೇಶಕ ಡಾ. ಸಂಕೇತ್ ಕುಲಕರ್ಣಿ ಅವರು ಎಲೂರಿಗೆ ತೆರಳಿದ್ದಾರೆ.
263 ಮಂದಿ ಬಿಡುಗಡೆ
ಎಲೂರಿನ ಸರ್ಕಾರಿ ಜನರಲ್ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ್ದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಅಸ್ವಸ್ಥ ಜನರೊಂದಿಗೆ ಮಾತನಾಡಿದ್ದರು. 400ಕ್ಕೂ ಅಧಿಕ ಮಂದಿ ಈ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಅವರಲ್ಲಿ ಇದುವರೆಗೂ 263 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 171 ರೋಗಿಗಳು ಒಳರೋಗಿಗಳಾಗಿ ದಾಖಲಾಗಿದ್ದಾರೆ. 17 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯವಾಡ, ಗುಂಟೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.