ತಿರುಪತಿ ದೇವಾಲಯ: ವೈಎಸ್ ಜಗನ್ ಸರಕಾರದ ಮಹತ್ವದ ನಿರ್ಧಾರ
ಅಮರಾವತಿ, ಆಗಸ್ಟ್ 29: ತಿರುಮಲದಲ್ಲಿ ಸಂಚರಿಸುವ ಆಂಧ್ರಪ್ರದೇಶ ಸರ್ಕಾರದ ಸಾರಿಗೆ ಬಸ್ ಗಳ ಟಿಕೆಟ್ ನಲ್ಲಿ ಕ್ರೈಸ್ತ ಮತ ಪ್ರಚಾರ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಆಂಧ್ರಪ್ರದೇಶ ಸರಕಾರ, ಹೊಸ ಬದಲಾವಣೆ ತರಲು ಮುಂದಾಗಿದೆ.
ಟಿಟಿಡಿ ಅಧಿಕಾರಿಗಳನ್ನು ಭೇಟಿಯಾದ ನಂತರ, " ದೇವಾಲಯದಲ್ಲಿ ಕಾರ್ಯ ನಿರ್ವಹಿಸುವ ಹಿಂದೂಯೇತರ ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುವುದು" ಎಂದು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಎಲ್.ವಿ.ಸುಬ್ರಹ್ಮಣ್ಯಂ ಹೇಳಿದ್ದಾರೆ.
ತಿರುಮಲ ಬಸ್ ಟಿಕೆಟ್ ನಲ್ಲಿ ಕ್ರೈಸ್ತ ಮತ ಪ್ರಚಾರ, ಬಿಜೆಪಿ ಆಕ್ರೋಶ
" ಸಾರ್ವಜನಿಕರು ತಮ್ಮ ಧರ್ಮಗಳನ್ನು ಬದಲಾಯಿಸಲು ಸ್ವತಂತ್ರರು, ಯಾರೂ ಅದನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಹಿಂದೂಯೇತರರು ಇಲ್ಲಿ ಕೆಲಸವನ್ನು ಮಾಡುತ್ತಿದ್ದರೆ, ಅಂತವರನ್ನು ಇಲ್ಲಿ ಮುಂದುವರಿಸಲು ಸಾಧ್ಯವಿಲ್ಲ. ಏಕೆಂದರೆ ಅದು ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುತ್ತದೆ " ಎಂದು ದೇವಾಲಯದ ಆಡಳಿತ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ಈ ಬಗ್ಗೆ ಇನ್ನೂ ಸ್ಪಷ್ಟನೆಯನ್ನು ನೀಡಿರುವ ಸಿಂಘಾಲ್ , " ಟಿಟಿಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಗಳು ನಿಜವಾದ ಹಿಂದೂಗಳೇ ಎಂದು ಪರಿಶೀಲಿಸಲು ಅವರ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುವುದು" ಎಂದು ಹೇಳಿದ್ದಾರೆ.
ತಿರುಮಲ ಬಸ್ ನಿಲ್ದಾಣದಲ್ಲಿರುವ ಕೌಂಟರ್ನಲ್ಲಿ ನೀಡಲಾದ ಟಿಕೆಟ್ಗಳ ಹಿಂಭಾಗದಲ್ಲಿ ಹಜ್ ಮತ್ತು ಜೆರುಸಲೆಮ್ ತೀರ್ಥಯಾತ್ರೆಯ ಪ್ರಕಟಣೆಯನ್ನು ಮುದ್ರಿಸಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ತಿರುಪತಿ: ವಿಐಪಿ ದರ್ಶನ ರದ್ದು ನಿರ್ಧಾರಕ್ಕೆ ಹೈಕೋರ್ಟ್ ತಡೆ
ನಮ್ಮ ಟಿಕೆಟ್ ನಲ್ಲಿ ಯಾವುದೇ ಜಾಹೀರಾತು ಇರುವುದಿಲ್ಲ, ಇದು ಬೇರೆ ಡಿಪೋದ ಬಸ್ ಟಿಕೆಟ್ ಆಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆರ್ಟಿಸಿ ಡಿಪೋ ವ್ಯವಸ್ಥಾಪಕರು ಸಮಜಾಯಿಷಿ ನೀಡಿದ್ದರು.