ತಪ್ಪಿದ ಕ್ಯಾಬಿನೆಟ್ ಸ್ಥಾನ, ನಟಿ ರೋಜಾಗೆ 'ಚೇರ್ಮನ್' ಸ್ಥಾನದ ಆಫರ್!
ಅಮರಾವತಿ, ಜೂನ್ 10: ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ನಗರಿ ವಿಧಾನಸಭಾ ಕ್ಷೇತ್ರದಿಂದ ಕಡಿಮೆ ಅಂತರದಿಂದ ಗೆದ್ದಿರುವ ನಟಿ, ವೈಎಸ್ಸಾರ್ ಸಿಪಿ ನಾಯಕಿ ರೋಜಾ ಅವರು ಜಗನ್ ಮೋಹನ್ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದಿರುವುದು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಮರು ಆಯ್ಕೆಯಾದ ಬಳಿಕ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಚಿವ ಸಂಪುಟ ಸೇರುವ ಇಂಗಿತ ವ್ಯಕ್ತಪಡಿಸಿದ್ದ ರೋಜಾಗೆ ಸಚಿವ ಸ್ಥಾನ ಕೈ ತಪ್ಪಿದರೂ ಕ್ಯಾಬಿನೆಟ್ ದರ್ಜೆ ಸ್ಥಾನಮಾನದ ಹುದ್ದೆ ನೀಡುವಂತೆ ಆರ್ ಕೆ ರೋಜಾ ಅವರ ಹಿಂಬಾಲಕರು ಹೈಕಮಾಂಡನ್ನು ಆಗ್ರಹಿಸಿದ್ದಾರೆ.
ಜಗನ್ಮೋಹನ್ ರೆಡ್ಡಿಯವರ ವೈ.ಎಸ್.ಆರ್.ಕಾಂಗ್ರೆಸ್ ಪಕ್ಷದಿಂದ ನಗರಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ರೋಜಾ ಅವರು ರೋಚಕ ಗೆಲುವು ಸಾಧಿಸಿದ ಬಳಿಕ ಮಾತನಾಡಿ, ನಾನು ಪಕ್ಷಕ್ಕೆ 'ಐರನ್ ಲೆಗ್' ದುರಾದೃಷ್ಟವಂತೆ ಎಂದು ಜರೆಯಲಾಗಿತ್ತು. ಆದರೆ, ನಾನು 'ಗೋಲ್ಡನ್ ಲೆಗ್' ಅದೃಷ್ಟವಂತೆ ಎಂದು ಸಾಬೀತು ಮಾಡಿದ್ದೇನೆ ಎಂದಿದ್ದರು.
ಜಗನ್ ಕ್ಯಾಬಿನೆಟ್ ನಲ್ಲಿ ಸಿಗದ ಸ್ಥಾನ, ಬೇಸತ್ತ ನಟಿ ರೋಜಾ ಮಾಡಿದ್ದೇನು
ಆದರೆ, ಪಕ್ಷದ ಪಾಲಿಗೆ ಅದೃಷ್ಟ ತಂದೆ ಎಂದು ಹೇಳಿಕೊಂಡರೂ ಅವರ ಪಾಲಿಗೆ ಅದೃಷ್ಟ ಇನ್ನು ಕೂಡಿ ಬಂದಿಲ್ಲ. ಸದ್ಯ ಮಾಹಿತಿಯಂತೆ, ರೋಜಾ ಅವರಿಗೆ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮ(ಎಪಿ ಎಸ್ ಆರ್ ಟಿಸಿ) ದ ಅಧ್ಯಕ್ಷೆ ಪಟ್ಟ ಸಿಗಲಿದೆ ಎಂಬ ಸುದ್ದಿ ಹಬ್ಬಿದೆ.
ಟಿಡಿಪಿ ತೊರೆದು ವೈಎಸ್ಸಾರ್ ಸಿಪಿ ಸೇರಿದ್ದ ರೋಜಾ
2009ರಲ್ಲಿ ತೆಲುಗುದೇಶಂ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷರಾಗಿದ್ದ ರೋಜಾ ಅವರು ಆ ವರ್ಷ ಸೋಲು ಕಂಡಿದ್ದರಿಂದ 'ಐರನ್ ಲೆಗ್ ' ಎಂದು ಎಲ್ಲರೂ ಜರೆದಿದ್ದರು. ನಂತರ ತೆಲುಗುದೇಶಂ ಪಕ್ಷವನ್ನು ಆಗಸ್ಟ್ 2009ರಲ್ಲಿ ತೊರೆದು ತಕ್ಷಣವೇ ವೈಎಸ್ಸಾರ್ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು.
ರೋಜಾ ಕಡಿಮೆ ಅಂತರದಲ್ಲಿ ರೋಚಕ ಗೆಲುವು ಕಂಡಿದ್ದಾರೆ. ಟಿಡಿಪಿ ಅಭ್ಯರ್ಥಿಯಾಗಿ ನಿಂತಿದ್ದ ಗಾಲಿ ಭಾನು ಪ್ರಕಾಶ್ ವಿರುದ್ಧ ರೋಜಾ ಬರೀ 2,630 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ. 2014 ರಲ್ಲಿ ಟಿಡಿಪಿ ಅಭ್ಯರ್ಥಿ ಗಾಲಿ ಮುದ್ದುಕೃಷ್ಣಂ ನಾಯ್ಡು ವಿರುದ್ಧ ಕೇವಲ 858 ಮತಗಳ ಅಂತರದಲ್ಲಿ ರೋಜಾ ಗೆದ್ದಿದ್ದರು. ಈ ಬಾರಿ ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಅವರ ಆಡಳಿತ ವಿರೋಧಿ ಅಲೆ, ಜಗನ್ ಮೋಹನ್ ರೆಡ್ಡಿ ಆಶ್ವಾಸನೆ ಎಲ್ಲವೂ ವರ್ಕ್ ಔಟ್ ಆಗಿತ್ತು.
ಜಾತಿ ಲೆಕ್ಕಾಚಾರದಲ್ಲಿ ಸೋತ ರೋಜಾ
ರೆಡ್ಡಿ ಸಮುದಾಯಕ್ಕೆ ಸೇರಿರುವ ರೋಜಾ ಅವರಿಗೆ ಸ್ಥಾನ ಸಿಗದೆ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ ಅವರಿಗೆ ಸ್ಥಾನ ಸಿಕ್ಕಿದೆ. ಚಿತ್ತೂರು ಕ್ಷೇತ್ರಕ್ಕೆ ಪ್ರಾತಿನಿಧ್ಯ ನೀಡುವ ದೃಷ್ಟಿಯಿಂದ ರೋಜಾ ಬದಲಿಗೆ ರಾಮಚಂದ್ರ ರೆಡ್ಡಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಅದೇ ಜಿಲ್ಲೆಯವರಾದ ರೋಜಾರನ್ನು ಕಡೆಗಣಿಸಲಾಗಿದೆ. ಇದರಿಂದ ರೋಜಾ ಅಭಿಮಾನಿಗಳು, ಪಕ್ಷದಲ್ಲಿನ ಹಿಂಬಾಲಕರು ಕೂಡಾ ಬೇಸರಗೊಂಡಿದ್ದು, ಯಾರೂ ಕೂಡಾ ಹಿರಿಯ ನಾಯಕರ ಸಂಪರ್ಕಕ್ಕೆ ಸಿಗುತ್ತಿಲ್ಲ. ಗಾಯದ ಮೇಲೆ ಬರೆ ಎಳೆದಂತೆ, ಗೃಹ ಸಚಿವ ಸ್ಥಾನವನ್ನು ಸಬಿತಾ ಇಂದ್ರ ರೆಡ್ಡಿ ಅವರಿಗೆ ನೀಡಲಾಗಿದೆ. ಇದರಿಂದ ರೋಜಾ ಸಹಜವಾಗಿ ಬೇಜಾರು ಮಾಡಿಕೊಂಡಿದ್ದಾರೆ.
ಹಿರಿಯ ನಾಯಕರ ವಿರುದ್ಧ ಕಿಡಿ
ನಗರಿ, ನಿಂದ್ರಾ, ವಿಜಯಪುರಂ ಹಾಗೂ ವದಮಲಪೇಟ ಜಿಲ್ಲೆಗಳಲ್ಲಿ ರೋಜಾ ಅವರ ಪ್ರಾಬಲ್ಯ ಹೆಚ್ಚಾಗದಂತೆ ತಡೆಯಲು ಹಿರಿಯ ನಾಯಕರು ಮುಂದಾಗಿದ್ದು, ಹೀಗಾಗಿ, ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದಂತೆ ಮಾಡಿದ್ದಾರೆ ಎಂದು ರೋಜಾ ಅಭಿಮಾನಿಗಳು ಆರೋಪಿಸಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ವಂಚಿತರಾಗಿರಬಹುದು ಆದರೆ, ಕ್ಷೇತ್ರದ ಜನತೆಯನ್ನು ಬಿಟ್ಟು ಎಲ್ಲೂ ಹೋಗುವುದಿಲ್ಲ. ಶೀಘ್ರದಲ್ಲೇ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ನಂಬಿಕೆಯಿದೆ. ಜಗನ್ ಸಂಪುಟ ಮತ್ತೊಮ್ಮೆ ಎರಡೂವರೆ ವರ್ಷದಲ್ಲಿ ಬದಲಾವಣೆಯಾಗುವ ಸೂಚನೆ ಸಿಕ್ಕಿದೆ. ಆದರೆ, ಅಲ್ಲಿ ತನಕ ರೋಜಾ ಸುಮ್ಮನಿರುತ್ತಾರೋ ಅಥವಾ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾರೋ ಕಾದು ನೋಡಬೇಕಿದೆ.
ಜಗನ್ ಗೆ ಬೆನ್ನೆಲುಬಾಗಿ ನಿಂತ್ತಿದ್ದ ರೋಜಾ
ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ರೋಜಾ ಅವರಿಗೆ ಎಂ ಎಲ್ಸಿಯಾಗಲು ಆಫರ್ ನೀಡಿದ್ದರು. 2004 ಹಾಗೂ 2009ರಲ್ಲಿ ಎರಡು ಬಾರಿ ಆಫರ್ ಬಂದರೂ ನಿರಾಕರಿಸಿದ್ದರು. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ನಾಮಾಂಕಿತ ಶಾಸಕಿಯಾಗುವುದಕ್ಕಿಂತ ಜನಾದೇಶ ಪಡೆದು ಶಾಸಕಿಯಾಗುತ್ತೇನೆ ಎಂಬ ಮಾತು ಉಳಿಸಿಕೊಂಡರು. ನಾಯ್ಡು ವಿರುದ್ಧ ಪ್ರತಿ ಹಂತದಲ್ಲೂ ಹೋರಾಟ ಮಾಡಿ ಜಗನ್ ಗೆ ಬೆನ್ನೆಲುಬಾಗಿ ನಿಂತರೂ ರೋಜಾಗೆ ಸೂಕ್ತ ಸ್ಥಾನ ಮಾನ ಸಿಕ್ಕಿಲ್ಲ ಎಂದು ರೋಜಾ ಅವರ ಆಪ್ತವಲಯ ಬೇಸರ ವ್ಯಕ್ತಪಡಿಸಿದೆ.