ಕೊರೊನಾ ಪಾಸಿಟೀವ್ ಭಕ್ತ ತಂದಿಟ್ಟ ಆವಾಂತರ: ತಿರುಪತಿ ತಿಮ್ಮಪ್ಪನಿಗೂ ಸಂಕಟ!
ಅಮರಾವತಿ, ಜೂನ್ 16: ತಿರುಪತಿ ಜಿಲ್ಲಾಡಳಿತ ಮತ್ತು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿಗೆ ವ್ಯಕ್ತಿಯೊಬ್ಬ ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾನೆ.
Recommended Video
32ವರ್ಷದ ಸ್ಥಳೀಯ ಬಾಲಾಜಿ ನಗರದ ನಿವಾಸಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,ಈತ ನಾಪತ್ತೆಯಾಗಿದ್ದಾನೆ. ಆರು ದಿನಗಳ ಕೆಳಗೆ, ಮುನ್ನೂರು ಭಕ್ತರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಟಿಟಿಡಿ ಅವಕಾಶ ನೀಡಿತ್ತು. ಅದರಲ್ಲಿ ಈತ ಕೂಡಾ ಒಬ್ಬನಾಗಿದ್ದಾನೆ.
ಸ್ಥಳೀಯ ನಾಗರೀಕರಿಗೆ, ದೇವಾಲಯದ ಉದ್ಯೋಗಿಗಳು ಮತ್ತು ಅವರ ಕುಟುಂಬದವರಿಗೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಾಪತ್ತೆಯಾಗಿರುವ ವ್ಯಕ್ತಿ ಚೆನ್ನೈ ನಗರದಲ್ಲಿ ಖಾಸಗಿ ಟಿವಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಅಲಿಪಿರಿ ಚೆಕ್ ಪೋಸ್ಟ್ ನಲ್ಲಿ ಅಧಿಕಾರಿಗಳು ಈತನ ಗಂಟಲ ದ್ರವವನ್ನು ಸಂಗ್ರಹಿಸಿದ್ದರು. ಕೊರೊನಾ ಪಾಸಿಟೀವ್ ವರದಿ ಬಂದಿದೆ ಎಂದು ಅಧಿಕಾರಿಗಳು ಈತನ ಮೊಬೈಲ್ ಗೆ ಸಂದೇಶವನ್ನು ಕಳುಹಿಸಿದ್ದರು.
ಈ ಮಾಹಿತಿ ಬಂದ ಕೂಡಲೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಅಧಿಕಾರಿಗಳು, ಆತನ ಮನೆಗೆ ಧಾವಿಸಿದ್ದಾರೆ. ಆದರೆ ನಿವಾಸದಲ್ಲಿ ಆತ ಇರಲಿಲ್ಲ, ಮೊಬೈಲ್ ಕೂಡಾ ಸ್ವಿಚ್ ಆಫ್ ಆಗಿದೆ.
ಜೂನ್ ಹತ್ತು ಮತ್ತು ಅದಾದ ಮೇಲೂ ಇನ್ನೊಂದು ದಿನ ಈತ, ದೇವರ ದರ್ಶನ ಪಡೆದಿದ್ದ ಎಂದು ಟಿಟಿಡಿ ಅಧಿಕಾರಿಗಳು ಖಚಿತ ಪಡಿಸಿದ್ದು, ರಾಜ್ಯ ಸರಕಾರದಿಂದ ಯಾವ ಆದೇಶ ಬರುತ್ತದೋ ಎಂದು ಕಾದು ನೋಡಬೇಕಿದೆ.