ವಿಶಾಖಪಟ್ಟಣಂನ ತೈಲ ಸಂಸ್ಕರಣ ಘಟಕದಲ್ಲಿ ಅಗ್ನಿ ಅವಘಡ
ಅಮರಾವತಿ, ಮೇ 25: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಿಂದುಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಟ್ನ ತೈಲ ಸಂಸ್ಕರಣ ಘಟಕದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಅಗ್ನಿಶಾಮಕದಳದ ವಾಹನಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
"ಹೆಚ್ಪಿಸಿಎಲ್ನ ಮೂರನೇ ಘಟಕದ ಪ್ಲಾಂಟ್ನಲ್ಲಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಐದು ಅಗ್ನಿಶಾಮಕದಳದ ವಾಹನಗಳು ಆಗಮಿಸಿದ್ದು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ. ಮತ್ತಷ್ಟು ಅಗ್ನಿಶಾಮಕವಾಹನಗಳು ಸ್ಥಳಕ್ಕೆ ದೌಡಾಯಿಸುತ್ತಿದೆ" ಎಂದು ವಿಭಾಗೀಯ ಪೋಲೀಸ್ ಆಯುಕ್ತೆ ಐಶ್ವರ್ಯಾ ರಸ್ತೋಗಿ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಹಿತಿ ನೀಡಿದ್ದರು.
ಇನ್ನು ಬಳಿಕ ಕಂಪನಿ ಈ ಬಗ್ಗೆ ಟ್ವಿಟ್ಟರ್ನಲ್ಲಿ ಮಾಹಿತಿಯನ್ನು ನೀಡಿದ್ದು ಬೆಂಕಿಯನ್ನು ನಂದಿಸಲಾಗಿದೆ ಎಂದು ತಿಳಿಸಿದೆ. ಎಲ್ಲರೂ ಸುರಕ್ಷಿತವಾಗಿದ್ದು ಈ ದುರ್ಘಟನೆಯನ್ನು ಯಾವುದೇ ಸಾವು ನೋವು ಸಂಭವಿಸಿಲ್ಲ. ಸಾರ್ವಜನಿಕರಿಗೂ ಇದರಿಂದ ಯಾವುದೇ ಅಪಾಯಗಳು ಉಂಟಾಗಿಲ್ಲ ಎಂದು ಮಾಹಿತಿ ನೀಡಿದೆ.
"ಯಾವುದೇ ಸಾವುನೋವುಗಳು ಆಗಿಲ್ಲ ಎಂಬುದು ಖಚಿತಪಡಿಸಲಾಗಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ಪ್ರತಿಯೊಬ್ಬರು ಕೂಡ ಸುರಕ್ಷಿವಾಗಿದ್ದಾರೆ. ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ಬೆಂಕಿ ಸಂಭವಿಸಿದ ನಿರ್ದಿಷ್ಟ ಘಟಕವನ್ನು ಹೊರತುಪಡಿಸಿ ಸಂಸ್ಕರಣಾ ಘಟಕದ ಇತರ ಎಲ್ಲಾ ಘಟಕಗಳು ಸಾಮಾನ್ಯದಂತೆಯೇ ಕಾರ್ಯನಿರ್ವಹಿಸುತ್ತಿವೆ" ಎಂದು ಟ್ವಿಟ್ಟರ್ನಲ್ಲಿ ಕಂಪನಿ ಹೇಳಿದೆ.
It is to confirm that there is no casualty. All people are accounted and are safe. Fire is extinguished completely. Except the particular unit where fire occurred, all other process units of Visakh Refinery are operating normally.@ANI @PTI_News @PetroleumMin @dpradhanbjp https://t.co/1icZz1kgLZ
— Hindustan Petroleum Corporation Limited (@HPCL) May 25, 2021
ಇನ್ನು ದುರಂತಕ್ಕೆ ನಿರ್ದಿಷ್ಟ ಕಾರಣ ಏನೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಬೆಂಕಿ ಆವರಿಸಿಕೊಳ್ಳುತ್ತಿದ್ದಂತೆಯೇ ಎಚ್ಚರಿಕೆ ಗಂಟೆ ಬಾರಿಸುವ ಮೂಲಕ ಸ್ಥಳದಿಂದ ಕಾರ್ಮಿಕರನ್ನು ಸ್ಥಳಾಂತರಿಸಲಾಗಿತ್ತು. ಹೀಗಾಗಿ ಯಾವುದೇ ಅಪಾಯಗಳು ಸಂಭವಿಸಲಿಲ್ಲ ಎಂದು ಮೂಲಗಳು ಮಾಹಿತಿ ನೀಡಿದೆ.