ತಿರುಪತಿ ದೇವಾಲಯದ ಸುತ್ತಮುತ್ತ ಜಗನ್ ಆಡಳಿತದ 'ಕಲರವ'
ಅಮರಾವತಿ, ಸೆ 3: ಏಳು ಕುಂಡಲವಾಡ ವೆಂಕಟರಮಣ, ಗೋವಿಂದಾ ಎಂದು ಭಕ್ತರು ದೇವರನ್ನು ಸ್ಮರಿಸುತ್ತಾ, ಮೈಲುದ್ದ ಸರತಿ ಸಾಲಿನ ಮೂಲಕ, ಗರ್ಭಗುಡಿ ಎದುರು ಬರುತ್ತಿದ್ದಂತೇ, ದೇವಾಲಯದ ಸಿಬ್ಬಂದಿಗಳು, ಜರಗಂಡಿ.. ಜರಗಂಡಿ ಎಂದು ಭಕ್ತರನ್ನು ಎಳೆದು ಎಳೆದು ಹಾಕುತ್ತಿರುತ್ತಾರೆ.
ಆದರೆ, ಸಿಬ್ಬಂದಿಗಳನ್ನು 'ಏನೋ ನೋಡಿಕೊಂಡರೆ' ದೇವರನ್ನು ಒಂದಷ್ಟು ಸೆಕೆಂಡ್ ನೋಡಲು ಅವಕಾಶ ಸಿಗುತ್ತದೆ. ಅದು ತಿಮ್ಮನಿಗೂ ಗೊತ್ತಿರುವ ವಿಚಾರ. ಅದೇನೇ ಇರಲಿ, ಕೊಡುವುದು ತೆಗೆದುಕೊಳ್ಳುವುದು, ಭಕ್ತರು-ಸಿಬ್ಬಂದಿಗಳು-ದೇವರಿಗೆ ಬಿಟ್ಟ ವಿಚಾರ.
ತಿರುಪತಿ ದೇವಾಲಯ: ವೈಎಸ್ ಜಗನ್ ಸರಕಾರದ ಮಹತ್ವದ ನಿರ್ಧಾರ
ಹಲವು ವರ್ಷಗಳ ಪರಿಶ್ರಮದ ನಂತರ ಅಧಿಕಾರಕ್ಕೆ ಬಂದಿರುವ ವೈ ಎಸ್ ಜಗನ್ಮೋಹನ್ ರೆಡ್ಡಿ, ಪ್ರಣಾಳಿಕೆಯಲ್ಲಿ ಹೇಳಿದಂತೆ, ಹಲವು ಜನಪರ ಕೆಲಸಗಳನ್ನು ಮಾಡುತ್ತಿದ್ದರೆ. ಅದರಲ್ಲಿ, ತಿರುಪತಿ ದೇವಾಲಯದ ಆಡಳಿತ ಶೈಲಿಯೂ ಒಂದು.
ತಿರುಪತಿ ತಿಮ್ಮಪ್ಪ ದೇವಾಲಯದ ವಿಐಪಿ ದರ್ಶನ ರದ್ದು: ಹೊಸ ರೂಲ್ಸ್
ಕಳೆದ ವಾರ, ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗಳು, "ಹಿಂದೂಯೇತರರಿಗೆ, ತಿರುಮಲ ತಿರುಪತಿ ದೇವಾಲಯದಲ್ಲಿ ಕೆಲಸವಿಲ್ಲ" ಎಂದು ಹೇಳಿದ್ದರು. ಜೊತೆಗೆ, ಆಡಳಿತಾತ್ಮಕವಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಆಂಧ್ರ ಸರಕಾರ ಜಾರಿಗೊಳಿಸಿತ್ತು. ಮುಡಿ ಕೊಡುವ ಜಾಗದಲ್ಲಿ ಫುಲ್ ಸ್ಟ್ರಿಕ್ಟ್..
ದೇವರಿಗೆ ಮುಡಿಕೊಡುವ ವಿಚಾರ
ಅದರಂತೇ, ದೇವರಿಗೆ ಮುಡಿಕೊಡುವ ವಿಚಾರದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ ಎಂದು 'ಒನ್ ಇಂಡಿಯಾ ಕನ್ನಡ'ದ ಓದುಗರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಹಿಂದೆಯೂ, ಮುಡಿ ಕೊಡುವುದಕ್ಕೆ ಕೌಂಟರ್ ನಿಂದ ರಸೀದಿ ಪಡೆಯಬೇಕಾಗಿತ್ತು, ಈಗಲೂ ಅದೇ ಪದ್ದತಿ. ಇದಕ್ಕೆ ದುಡ್ಡು ಪಾವತಿಸಬೇಕಾಗಿಲ್ಲ.
ಐವತ್ತೋ, ನೂರೋ ಕದ್ದುಮುಚ್ಚಿ ತೆಗೆದುಕೊಳ್ಳುವುದು ಕಮ್ಮಿಯಾಗಿಲ್ಲ
ಆದರೆ, ರಸೀದಿ ಪಡೆದುಕೊಂಡು, ಕ್ಷೌರಿಕರ ಬಳಿ ಮುಡಿಕೊಟ್ಟ ನಂತರ, ಈಗಲೂ ಅವರು ಐವತ್ತೋ, ನೂರೋ ಕದ್ದುಮುಚ್ಚಿ ತೆಗೆದುಕೊಳ್ಳುವುದು ಕಮ್ಮಿಯಾಗಿಲ್ಲ. ಅದರಲ್ಲೂ, ಮೊದಲ ಬಾರಿ ಮುಡಿಕೊಡುವವರಿಂದ ಇನ್ನೂರೋ, ಮುನ್ನುರೋ ತೆಗೆದುಕೊಳ್ಳುತ್ತಿರುತ್ತಾರೆ.
ಪ್ರತೀ ಕ್ಷೌರಿಕರ ತಪಾಸಣೆ
ಇದನ್ನರಿತ, ದೇವಾಲಯದ ಆಡಳಿತ ಮಂಡಳಿ, ಪ್ರತೀ ಎರಡು ಗಂಟೆಗೊಮ್ಮೆ, ಮುಡಿಕೊಡುವ ಸ್ಥಳಕ್ಕೆ ಬಂದು, ಪ್ರತೀ ಕ್ಷೌರಿಕರನ್ನು ತಪಾಸಣೆಗೊಳಿಸಿ, ಅವರ ಬಳಿ ದುಡ್ಡಿದ್ದರೆ, ಅದನ್ನು ದೇವಾಲಯದ ಆಡಳಿತ ಮಂಡಳಿಗೆ ಒಪ್ಪಿಸುತ್ತಿದ್ದಾರೆ. ಇದರಿಂದ, ಈ ಸಮಸ್ಯೆ ತಕ್ಕ ಮಟ್ಟಿಗೆ ಕಮ್ಮಿಯಾಗಿದೆ.
ನೀ ಚಾಪೆ ಕೆಳಗೆ ತೂರಿದರೆ, ನಾ ರಂಗೋಲಿ ಕೆಳಗೆ ತೂರುತ್ತೇನೆ
ಆದರೂ, ನೀ ಚಾಪೆ ಕೆಳಗೆ ತೂರಿದರೆ, ನಾ ರಂಗೋಲಿ ಕೆಳಗೆ ತೂರುತ್ತೇನೆ ಎನ್ನುವ ಹಾಗೇ, ಕ್ಷೌರಿಕರು, ಪ್ರತೀ ಗಂಟೆಗೊಮ್ಮೆ, ತಮ್ಮವರೊಬ್ಬರನ್ನು ಕರೆಸಿಕೊಂಡು, ಸಂಪಾದನೆಯಾದ, ದುಡ್ಡನ್ನು ಅವರ ಬಳಿ ಕೊಟ್ಟು ಕಳುಹಿಸುವ ಕೆಲಸವೂ ಅಲ್ಲಿ ನಡೆಯುತ್ತಿದೆ. ಆದರೂ, ಒಂದು ಹಂತಕ್ಕೆ ಇದನ್ನು ತಡೆಯುವಲ್ಲಿ ಟಿಟಿಡಿ ಮತ್ತು ಸರಕಾರ ಯಶಸ್ವಿಯಾಗುತ್ತಾ ಸಾಗುತ್ತಿದೆ.
ತಿರುಪತಿ ಅಂದರೆ ದುಡ್ಡು
ಎಷ್ಟಾದರೂ, ತಿರುಪತಿ ಅಂದರೆ ದುಡ್ಡು, ದೇಶದ ಶ್ರೀಮಂತ ದೇವಾಲಾಯ ಬೇರೆ. ಆದರೂ, ಆಂಧ್ರ ಪ್ರದೇಶ ಸರಕಾರದ ಹಲವು ಸುಧಾರಣಾ ಕ್ರಮವನ್ನು ಈಗ ಕಾಣಬಹುದಾಗಿದೆ. ಇತ್ತೀಚೆಗೆ ವಿಐಪಿ ದರ್ಶನ ರದ್ದು ಮಾಡಿ, ಶ್ರೀವಾಣಿ ಟ್ರಸ್ಟಿಗೆ ದೇಣಿಗೆ ನೀಡಿದವರಿಗೆ ಈ ಸೌಲಭ್ಯ ಕಲ್ಪಿಸುವ ನಿರ್ಧಾರಕ್ಕೆ ಟಿಟಿಡಿ ಆಡಳಿತ ಮಂಡಳಿ ಬಂದಿತ್ತು.