ಅಮರಾವತಿ ಭೂ ಹಗರಣ: ಡಿಸಿ ಕೆ ಮಾಧುರಿ ಬಂಧನ
ಅಮರಾವತಿ, ಜೂನ್ 4: ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಸಂಚಲನ ಮೂಡಿಸಿರುವ ಭೂ ಹಗರಣ ಪ್ರಕರಣದಲ್ಲಿ ಹಿರಿಯ ಅಧಿಕಾರಿಯೊಬ್ಬರ ಬಂಧನವಾಗಿದೆ. ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ(CRDA)ದ ನೆಕ್ಕಲ್ಲು ಪ್ರದೇಶದ ಡೆಪ್ಯುಟಿ ಕಲೆಕ್ಟರ್ ಕನಿಕೆಲ್ಲ ಮಾಧುರಿ ಎಂಬುವವರನ್ನು ಬಂಧಿಸಲಾಗಿದೆ.
Recommended Video
ಆಂಧ್ರಪ್ರದೇಶದ ವಿಶೇಷ ತನಿಖಾ ತಂಡ(ಎಸ್ಐಟಿ)ದ ಅಧಿಕಾರಿಗಳು ಬುಧವಾರದಂದು ಮಾಧುರಿ ಅವರನ್ನು ವಿಜಯವಾಡದ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ಮಂಗಳಗಿರಿ ಜ್ಯೂನಿಯರ್ ಹೆಚ್ಚುವರಿ ಸಿವಿಎಲ್ ಜಡ್ಜ್ ವಿವಿಎಸ್ಎಸ್ ಲಕ್ಷ್ಮಿ ಅವರ ಮುಂದೆ ಹಾಜರು ಪಡಿಸಲಾಗಿದ್ದು, 14 ದಿನಗಳ ಪೊಲೀಸ್ ಕಸ್ಟಡಿಗೆ ಮಾಧುರಿಯನ್ನು ನೀಡಲಾಗಿದೆ.
ತೆಲುಗು ದೇಶಂ ಪಾರ್ಟಿಯ ನಾಯಕ ರೆವೆಲಾ ಗೋಪಾಲಕೃಷ್ಣ ಅವರ ಆಣತಿಯಂತೆ ಮಾಧುರಿ ಕಾರ್ಯ ನಿರ್ವಹಿಸುತಿದ್ದರು ಎಂದು ತಿಳಿದು ಬಂದಿದೆ. ಗೋಪಾಲಕೃಷ್ಣ ಅವರ ತೋಟದ ಮನೆಯ ಭೋಗ್ಯಕ್ಕಾಗಿ 5.26 ಲಕ್ಷ ರುಗಳನ್ನು ಮಾಧುರಿ ನೀಡಿದ್ದಾರೆ. 3,880 ಚದರ ಯಾರ್ಡ್ ವಿಸ್ತೀರ್ಣದ 10 ಪ್ಲಾಟ್ ಗಳನ್ನು ಗೋಪಾಲಕೃಷ್ಣಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ.
ಈ ಭೂ ಹಗರಣದಲ್ಲಿ ನಕಲಿ ದಾಖಲೆ ಸೃಷ್ಟಿಸಿರುವುದು, ಅಧಿಕಾರ ದುರುಪಯೋಗವಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಸೂಕ್ತ ಸಾಕ್ಷಿಗಳನ್ನು ಕಲೆ ಹಾಕಿದ ಬಳಿಕ ಮಾಧುರಿ ಅವರನ್ನು ವಿಶೇಷ ತನಿಖಾ ತಂಡವು ಬಂಧಿಸಿದೆ.
ಅಮರಾವತಿ ರಾಜಧಾನಿ ಸ್ಥಾಪನೆ ಸಲುವಾಗಿ ಎನ್ ಚಂದ್ರಬಾಬು ನಾಯ್ಡು ರಿಯಲ್ ಎಸ್ಟೇಟ್ ನಿಯಮಗಳನ್ನು ಸಡಿಲಗೊಳಿಸಿದ್ದರು. ತೆನಾಲಿ ಕ್ಷೇತ್ರದ ಮಾಜಿ ಶಾಸಕ ಶ್ರವಣ್ ಕುಮಾರ್ ಹಿಂಬಾಲಕ ರವೇಲ ಗೋಪಾಲಕೃಷ್ಣ ಅವರು ಲ್ಯಾಂಡ್ ಪೂಲಿಂಗ್ ಮೂಲಕ 3.11 ಎಕತೆ ಭೂಮಿಯಲ್ಲಿ ತಲ್ಲೂರ್ ಪ್ರದೇಶದಲ್ಲಿ ನೀಡಿದ್ದರು ಎಂದು ತಿಳಿದು ಬಂದಿದೆ.
ಇದಕ್ಕೆ ಬದಲಾಗಿ, ಗೋಪಾಲಕೃಷ್ಣಗೆ 3,110 ಚದರ ಯಾರ್ಡ್, ಎರಡು ವಾಣಿಜ್ಯ ಪ್ಲಾಟ್ (770 ಚದರ ಯಾರ್ಡ್) ಗಳನ್ನು ಸಿ ಆರ್ ಡಿಎ ಮೂಲಕ ಅನಾಯಾಸವಾಗಿ ಪಡೆದುಕೊಂಡಿದ್ದರು. ನಾಗಾರ್ಜುನ ಸಾಗರ ಕಾಲುವೆ ಪ್ರದೇಶದ ಈ ಜಾಗವನ್ನು ಅಕ್ರಮವಾಗಿ ಪರಭಾರೆ ಮಾಡಲಾಗಿದೆ. ನಕಲಿ ದಾಖಲೆ ಹೊಂದಿದ್ದ ಕಾರಣ ಟಿಡಿಪಿ ಮುಖಂಡ ಗೋಪಾಲಕೃಷ್ಣರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಡಿಸಿ ಮಾಧುರಿ ಬಗ್ಗೆ ತಿಳಿದು ಬಂದಿದ್ದು, ಮಾಧುರಿಯನ್ನು ಈಗ ವಶಕ್ಕೆ ಪಡೆದುಕೊಳ್ಳಲಾಗಿದೆ.