ಸುಲಿಗೆ ಪ್ರಕರಣ: ಆಂಧ್ರ ಪ್ರದೇಶ ಸಿಎಂ ಜಗನ್ ಸಂಬಂಧಿ ಬಂಧನ
ಅಮರಾವತಿ, ಮೇ 11: ಸುಲಿಗೆ ಪ್ರಕರಣವೊಂದರಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಸಂಬಂಧಿಯೊಬ್ಬರು ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ ಬಂಧಿತರಾಗಿದ್ದಾರೆ. ಕಟ್ಟಡ ನಿರ್ಮಾಣ ಕಂಪನಿಯೊಂದರ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೊಂಡಾ ರೆಡ್ಡಿಯನ್ನು ಬಂಧಿಸಲಾಗಿದೆ.
ಎಸ್ಆರ್ಕೆ ಕನ್ಸ್ಟ್ರಕ್ಷನ್ ಎಂಬ ಕಂಪನಿ ನೀಡಿದ ದೂರಿನ ಆಧಾರದ ಮೇಲೆ ಚಕರಾಯಪೇಟಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವೈ. ಎಸ್. ಕೊಂಡಾ ರೆಡ್ಡಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಕ್ಯಾನ್ಸರ್ ಆಸ್ಪತ್ರೆ ಕಟ್ಟಿಸಿದ್ದು ನಾವು: ಟಿಡಿಪಿ, ವೈಎಸ್ಆರ್ ಕಿತ್ತಾಟ- ವಾಸ್ತವ ಬೇರೆಯಾ?
"ಯಾರೋ ವ್ಯಕ್ತಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಎಸ್ಆರ್ಕೆ ಕಂಪನಿಯಿಂದ ದೂರು ಬಂದಿತ್ತು. ತಾನು ಕೇಳಿದಷ್ಟು ಹಣ ಕೊಡದಿದ್ದರೆ ಕೆಲಸ ನಿಲ್ಲುವಂತೆ ಮಾಡುತ್ತೇನೆ ಎಂದು ಹೆದರಿಸುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು" ಎಂದು ಕಡಪ ಪೊಲೀಸ್ ಅಧೀಕ್ಷಕ ಕೆ. ಕೆ. ಎನ್. ಅಣಬುರಾಜನ್ ತಿಳಿಸಿದ್ದಾರೆ.
"ಎಸ್ಆರ್ಕೆ ಕಂಪನಿ ನೀಡಿದ ದೂರಿನ ಮೇರೆಗೆ ಪ್ರಾಥಮಿಕ ವಿಚಾರಣೆ ನಡೆಸಿದಾಗ, ಕರೆ ಮಾಡಿದ್ದು ಕೊಂಡಾ ರೆಡ್ಡಿ ಎಂಬ ವಿಚಾರ ತಿಳಿಯಿತು. ಇನ್ನಷ್ಟು ತನಿಖೆ ನಡೆಸಿ ಖಚಿತಪಡಿಸಿಕೊಂಡ ಬಳಿಕ ಬಂಧಿಸಿದೆವು" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಂಧ್ರ ಸಿಎಂ ಜಗನ್ ಕನಸಿನ ಯೋಜನೆಗೆ ಯುಎನ್ಒ ಪ್ರಶಸ್ತಿ
ವೈ. ಎಸ್. ಕೊಂಡಾ ರೆಡ್ಡಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಎಂದು ಕೆ. ಕೆ. ಎನ್. ಅಣ್ಬುರಾಜನ್ ಹೇಳಿದ್ದಾರೆ. ಭ್ರಷ್ಟಾಚಾರ ಯಾರೇ ಮಾಡಲಿ ಸರಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಪುಲಿವೆಂದುಲದ ಚಕರಾಯಪೇಟ ಮಂಡಲದಲ್ಲಿ ರಸ್ತೆ ಕಾಮಗಾರಿ ಮಾಡುವ ವೇಳೆ ಗುತ್ತಿಗೆದಾರನಿಂದ ಹಣ ವಸೂಲಿಗೆ ಕೊಂಡಾ ರೆಡ್ಡಿ ಬೆದರಿಕೆ ಹಾಕಿದ್ದಾರೆ ಎಂಬುದು ಆರೋಪ.
ಕರ್ನಾಟಕದ ಬಿಜೆಪಿ ನಾಯಕನ ಹೆಸರು: ಬಂಧಿತರಾಗಿರುವ ಕೊಂಡಾ ರೆಡ್ಡಿ ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ. ಕಡಪ ಜಿಲ್ಲೆಯ ಪಕ್ಷದ ಅಧ್ಯಕ್ಷ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯ ಹತ್ತಿರದ ಸಂಬಂಧಿ.
ಅತ್ತ ಎಸ್ಆರ್ಕೆ ಕನ್ಸ್ಟ್ರಕ್ಷನ್ ಕಂಪನಿಯು ಕರ್ನಾಟಕದ ಬಿಜೆಪಿ ನಾಯಕನೊಬ್ಬನಿಗೆ ಸೇರಿದ್ದು ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಮೂಲಕ ಪ್ರಕರಣಕ್ಕೆ ರಾಜಕೀಯ ಬಣ್ಣವೂ ಮೆತ್ತಿಕೊಂಡಂತಿದೆ. ಇದೇ ವೇಳೆ, ಕೊಂಡಾ ರೆಡ್ಡಿ ಬಂಧನ ಕಡಪ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
(ಒನ್ಇಂಡಿಯಾ ಸುದ್ದಿ)