ಆನಂದಯ್ಯರ ಔಷಧಿ ಬಳಕೆಗೆ ಆಂಧ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದೇಕೆ?
ಅಮರಾವತಿ, ಮೇ 31: ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆಯುರ್ವೇದ ವೈದ್ಯ ಬಿ ಆನಂದಯ್ಯ ಸಿದ್ಧಪಡಿಸಿರುವ ಸಾಂಪ್ರದಾಯಿಕ ಔಷಧಿಯನ್ನು ಕೋವಿಡ್ಗೆ ಬಳಸಲು ಆಂಧ್ರಪ್ರದೇಶ ಸರ್ಕಾರ ಸೋಮವಾರ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸಲು ಉಪಯುಕ್ತ ಎಂದು ಹೇಳಲಾದ ಕಣ್ಣಿನ ಹನಿಗಳನ್ನು ಉಪಯೋಗಿಸಲು ಆನಂದಯ್ಯರಿಗೆ ಸರ್ಕಾರ ಅನುಮತಿ ನೀಡಿಲ್ಲ.
ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ -19 ರ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಪಿ, ಎಲ್ ಮತ್ತು ಎಫ್ ಎಂದು ಹೆಸರಿಸಲಾದ ಮೂರು ಸಾಂಪ್ರದಾಯಿಕ ಔಷಧಿಗಳಿಗೆ ಅನುಮತಿ ನೀಡಲು ಸರ್ಕಾರ ನಿರ್ಧರಿಸಿತು.
ಆಂಧ್ರಪ್ರದೇಶದ ಅನಂತಪುರ ಸರ್ಕಾರಿ ಅಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಕನ್ನಡಿಗರಿಗೆ ಚಿಕಿತ್ಸೆ
ಆನಂದಯ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್ಗೆ ಸರ್ಕಾರ, ಈ ನಿರ್ಧಾರವನ್ನು ತಿಳಿಸಿದ್ದು, ಆನಂದಯ್ಯರು ತಯಾರಿಸಿದ ಔಷಧದ ಸಂಯೋಜನೆಯು ವಿಶಿಷ್ಟವಾಗಿದೆ. ಅದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಸಾಬೀತಾಗಿದೆ ಎಂದು ಹೇಳಿದೆ.
ಆನಂದಯ್ಯ ಈ ಔಷಧಿಗಳನ್ನು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಸೆಕ್ಷನ್ 3(ಹೆಚ್) ಅಡಿಯಲ್ಲಿ ಪೆಟೆಂಟ್ ಅಥವಾ ಸ್ವಾಮ್ಯದ ಔಷಧವಾಗಿ ವರ್ಗೀಕರಿಸಬೇಕೆಂದು ಹೈಕೋರ್ಟ್ಗೆ ಮನವಿ ಮಾಡಿದ್ದರು. ಹಲವು ವರ್ಷಗಳಿಂದ ನಾನು ಆಯುರ್ವೇದ ವೈದ್ಯರಾಗಿರುವುದರಿಂದ, ತನ್ನ ಔಷಧಿಗೆ ಯಾವುದೇ ಪರವಾನಗಿ ಅಗತ್ಯವಿಲ್ಲ ಎಂದು ಕೂಡಾ ಆನಂದಯ್ಯ ವಾದಿಸಿದರು.
ಇನ್ನು ನಾನು ಯಾವುದೇ ಮಾರಾಟದ ಉದ್ದೇಶದಿಂದ ಈ ಔಷಧಿ ಅಭಿವೃದ್ಧಿಪಡಿಸಿಲ್ಲ, ಸಾರ್ವಜನಿಕರಿಗೆ ಮಾತ್ರ ಉಚಿತವಾಗಿ ವಿತರಿಸುತ್ತೇನೆ ಎಂದು ಕೂಡಾ ಆನಂದಯ್ಯ ಹೇಳಿದ್ದರು.
ಹೈಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ನಡುವೆಯೇ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿರುವುದು ಈ ಸಂದರ್ಭದಲ್ಲಿ ಮಹತ್ವವನ್ನು ಪಡೆದಿದೆ.
ಆಯುರ್ವೇದ ವಿಜ್ಞಾನದ ಕೇಂದ್ರೀಯ ಸಂಶೋಧನಾ ಮಂಡಳಿಯ ವರದಿಯ ಆಧಾರದ ಮೇಲೆ "ಕೃಷ್ಣಪಟ್ಟಣಂ ಮೆಡಿಸಿನ್" ಎಂದು ಜನಪ್ರಿಯವಾಗಿರುವ ಈ ಔಷಧಿ ಬಳಕೆಗೆ ಸರ್ಕಾರ ಅನುಮತಿ ನೀಡುವ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ. ಆದಾಗ್ಯೂ, ಕೃಷ್ಣಪಟ್ಟಣಂ ಮೆಡಿಸಿನ್ ಕೋವಿಡ್ -19 ಅನ್ನು ಗುಣಪಡಿಸಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಆಯುರ್ವೇದ ವಿಜ್ಞಾನದ ಕೇಂದ್ರೀಯ ಸಂಶೋಧನಾ ಮಂಡಳಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಶಾಖಪಟ್ಟಣಂ ಸೆಂಟ್ರಲ್ ಜೈಲ್ನ 57 ಕೈದಿಗಳಲ್ಲಿ ಕೊರೊನಾ ಸೋಂಕು ಪತ್ತೆ
"ರೋಗಿಗಳು ಕೃಷ್ಣಪಟ್ಟಣಂ ಮೆಡಿಸಿನ್ ಜೊತೆಗೆ ವೈದ್ಯರು ಶಿಫಾರಸು ಮಾಡಿದ ನಿಯಮಿತ ಔಷಧಿಗಳನ್ನು ತೆಗೆದುಕೊಳ್ಳಬೇಕು. ಇದು ವೈಯಕ್ತಿಕ ಆಯ್ಕೆಯಾಗಿದೆ" ಎಂದು ಸರ್ಕಾರ ಹೇಳಿದೆ.
ಹಾಗೆಯೇ ಕಣ್ಣಿನ ಹನಿಗಳ ಪರಿಣಾಮಕಾರಿತ್ವದ ಬಗ್ಗೆ ಪೂರ್ಣ ವರದಿ ಬರಲು 2-3 ವಾರಗಳು ಬೇಕಾಗುವುದರಿಂದ, ಸರ್ಕಾರವು ತಕ್ಷಣವೇ ಅದರ ಬಳಕೆಗೆ ಅನುಮತಿಸಲಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಔಷಧಿ ಪಡೆಯಲು ಕೋವಿಡ್ ಸೋಂಕಿತರು ಬರಬಾರದು. ಬದಲಾಗಿ ಸೋಂಕಿತರ ಸಂಬಂಧಿಕರು ಬಂದು ಪಡೆಯಬಹುದು. ಔಷಧಿ ತೆಗೆದುಕೊಳ್ಳಲು ಗ್ರಾಮಕ್ಕೆ ಬರುವವರು ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಹೇಳಿದೆ. (ಒನ್ಇಂಡಿಯಾ ಸುದ್ದಿ)