ಆಂಧ್ರಕ್ಕೆ ಮೊಟ್ಟ ಮೊದಲ ಲೋಕಾಯುಕ್ತ ನೇಮಕ, ಜಗನ್ ನಡೆ ಹಿಂದಿನ ರಹಸ್ಯವೇನು?
ವಿಜಯವಾಡ, ಸೆ. 17: ಆಂಧ್ರಪ್ರದೇಶದಲ್ಲಿ ಜಾತಿ ಸಮೀಕರಣವನ್ನು ಚೆನ್ನಾಗಿ ಉಪಯೋಗಿಸುತ್ತಿರುವ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತೊಬ್ಬ ರೆಡ್ಡಿ ಸಮುದಾಯದವರಿಗೆ ಉನ್ನತ ನೀಡಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟಿನ ನಿವೃತ್ತ ನ್ಯಾ. ಪಿ ಲಕ್ಷ್ಮಣ ರೆಡ್ಡಿ ಅವರನ್ನು ಆಂಧ್ರದ ಮೊಟ್ಟಮೊದಲ ಲೋಕಾಯುಕ್ತರನ್ನಾಗಿ ಆಯ್ಕೆಮಾಡಲಾಗಿದ್ದು, ಇತ್ತೀಚೆಗೆ ಲೋಕಾಯುಕ್ತರಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ. ಲಕ್ಷ್ಮಣ್ ರೆಡ್ಡಿ ಅವರು ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿರುವುದು ವಿಶೇಷ.
ರಾಜ್ಯಪಾಲ ಬಿಸ್ವಭೂಷಣ್ ಹರಿಚಂದ್ರನ್ ಅವರ ಉಪಸ್ಥಿತಿಯಲ್ಲಿ ವಿಜಯವಾಡದಲ್ಲಿ ನೂತನ ಲೋಕಾಯುಕ್ತರ ಕಾರ್ಯಾರಂಭವಾಗಿದೆ. ಮುಂದಿನ 5 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ರಾಜ್ಯವನ್ನಾಗಿಸುವ ಜಗನ್ ಕನಸಿನ ಯೋಜನೆಯಲ್ಲಿ ಲೋಕಾಯುಕ್ತ ನೇಮಕ ಪ್ರಮುಖ ಹೆಜ್ಜೆಯಾಗಿದೆ.
ಜಗನ್ ಸರ್ಕಾರದಿಂದ ದೇಗುಲಗಳಲ್ಲಿ ಮೀಸಲಾತಿ ಜಾರಿ, ಮಹತ್ವದ ಆದೇಶ
2014ರಲ್ಲಿ ರಾಜ್ಯ ವಿಭಜನೆಯಾದ ಬಳಿಕ ಲೋಕಾಯುಕ್ತರ ನೇಮಕವಾಗಿರಲಿಲ್ಲ. ಆದರೆ, ಇತ್ತೀಚೆಗೆ ಬಜೆಟ್ ಅಧಿವೇಶನದಲ್ಲಿ ಜಗನ್ ಈ ಬಗ್ಗೆ ಪ್ರಸ್ತಾಪಿಸಿ, ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ನಮ್ಮ ಸರ್ಕಾರ ಗುರಿ ಎಂದು ಘೋಷಿಸಿದರು.
ಆಂಧ್ರಪ್ರದೇಶ ಲೋಕಾಯುಕ್ತ(ತಿದ್ದುಪಡಿ) ಮಸೂದೆ 2019 ಜಾರಿಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲಗೊಳಿಸಲಾಗಿದೆ. ಹೈಕೋರ್ಟ್ ಮಧ್ಯಂತರ ಮುಖ್ಯ ಜಸ್ಟೀಸ್(ಎಸಿಜೆ) ಛಾಗತಿ ಪ್ರವೀಣ್ ಕುಮಾರ್ ಅವರು ಲೋಕಾಯುಕ್ತ ನೇಮಕದಲ್ಲಿ ಮಹತ್ವದ ಪಾತ್ರ ವಹಿಸಿ, ನ್ಯಾಲಕ್ಷ್ಮಣ್ ರೆಡ್ಡಿ ಆಯ್ಕೆಯನ್ನು ಅಂತಿಮಗೊಳಿಸಿದರು.
ಲೋಕಾಯುಕ್ತ ಸಂಸ್ಥೆ ಯಾರನ್ನು ವಿಚಾರಣೆಗೊಳಪಡಿಸಬಹುದು
ಉಪ ಮುಖ್ಯಮಂತ್ರಿ, ಸಚಿವ, ಸಂಸದರು ಸೇರಿ ಜನಪ್ರತಿನಿಧಿಗಳ ವಿರುದ್ಧ ದೂರು ಸ್ವೀಕರಿಸಬಹುದು. ಎಂಎಲ್ಎ, ಎಂಎಲ್ ಸಿ, ಸರ್ಕಾರದಿಂದ ನೇಮಕವಾದ ಅಧಿಕಾರಿಗಳು, ಜಿಲ್ಲಾ ಪಂಚಾಯಿತಿ, ಪರಿಷತ್ ಮುಖ್ಯಸ್ಥರು, ಮೇಯರ್, ಉಪ ಮೇಯರ್, ಕಾರ್ಪೊರೇಟರ್, ಮುನ್ಸಿಪಾಲಿಟಿ ಚೇರ್ಮನ್ ಗಳ ವಿರುದ್ಧ ದೂರು ಸ್ವೀಕರಿಸಿ ವಿಚಾರಣೆಗೊಳಪಡಿಸಬಹುದು.
ಲೋಕಾಯುಕ್ತ ವ್ಯಾಪ್ತಿಯಿಂದ ಯಾರನ್ನು ಹೊರಗಿಡಲಾಗಿದೆ
ಜಡ್ಜ್, ನ್ಯಾಯಾಂಗ ಸೇವೆ ಸಲ್ಲಿಸುವ ಅಧಿಕಾರಿಗಳು ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಇದಲ್ಲದೆ, ಆಂಧ್ರದ ಅಕೌಂಟ್ ಜನರಲ್, ಎಪಿಪಿಎಸ್ ಪಿ ಚೇರ್ಮನ್, ಚುನಾವಣಾಧಿಕಾರಿ, ಅಸೆಂಬ್ಲಿ ಸ್ಪೀಕರ್, ಉಪ ಸಭಾಪತಿ, ಬೋರ್ಡ್ ಚೇರ್ಮನ್, ಎಪಿಎಟಿ ಚೇರ್ಮನ್ ಗಳನ್ನು ಕೂಡಾ ಲೋಕಾಯುಕ್ತ ವ್ಯಾಪ್ತಿಯಿಂದ ಹೊರಗಿಡಲಾಗಿದೆ.
ಆಂಧ್ರದಲ್ಲಿ ಭಾರೀ ಸಂಚಲನ: ವೈಎಸ್ ಜಗನ್ ಐತಿಹಾಸಿಕ ನಿರ್ಧಾರ?
ಕೃಷಿ ಕುಟುಂಬದ ನ್ಯಾ. ಲಕ್ಷ್ಮಣ ರೆಡ್ಡಿ
ಏಪ್ರಿಲ್ 18, 1945ರಂದು ಕಡಪ ಜಿಲ್ಲೆ ಸಿಂಹಾದ್ರಿಪುರಂನ ಪೈಡಿಪಾಲೆಂನ ಕೃಷಿ ಕುಟುಂಬದಲ್ಲಿ ಲಕ್ಷ್ಮಣ ರೆಡ್ಡಿ ಜನಿಸಿದರು. ಕಡಪ ಹಾಗೂ ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಜಡ್ಜ್ ಆಗಿ ವೃತ್ತಿ ಆರಂಭಿಸಿ, 2005ರಲ್ಲಿ ಹೈಕೋರ್ಟ್ ಜಡ್ಜ್ ಹುದ್ದೆಗೇರಿದರು. ಏಪ್ರಿಲ್ 2007ರಿಂದ 2010ರ ತನಕ ಹೈದರಾಬಾದ್ ಆಡಳಿತ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದರು. ಭ್ರಷ್ಟ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ವಜಾಗೊಳಿಸಿದ್ದರು.
ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳ ವಿರುದ್ಧ ಹೋರಾಡುವವರ ಬೆಂಬಲಕ್ಕಾಗಿ ಜನ ಚೈತನ್ಯ ವೇದಿಕೆ ನಡೆಸುತ್ತಿದ್ದಾರೆ. 2019ರಲ್ಲಿ ರಾಜಕೀಯ ಸ್ಥಿತ್ಯಂತರವಾದಾಗ ಈ ಹಿಂದಿನ ಟಿಡಿಪಿ ಸರ್ಕಾರ ಟೀಕಿಸಿ ಜಗನ್ ಹೊಗಳಿದ್ದರು.
ಜಗನ್ ನೇಮಕಾತಿಯಲ್ಲಿ ಜಾತಿ ಲೆಕ್ಕಾಚಾರ
ರೆಡ್ಡಿ ಜನಾಂಗಕ್ಕೆ ಸೇರಿದ ಲಕ್ಷ್ಮಣ್ ರೆಡ್ಡಿ ಅವರನ್ನು ಲೋಕಾಯುಕ್ತ ಸ್ಥಾನಕ್ಕೇರಿಸಿದ ಬಳಿಕ ಮತ್ತೊಮ್ಮೆ ಜಗನ್ ನೇಮಕಾತಿಯಲ್ಲಿನ ಜಾತಿ ಲೆಕ್ಕಾಚಾರ ಚರ್ಚೆಗೆ ಬಂದಿದೆ. ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಎಸ್ ಸಿ, ಎಸ್ಟಿ, ಹಿಂದುಳಿದ ವರ್ಗ, ಕಾಪು ಹಾಗೂ ಮುಸ್ಲಿಂ ಸಮುದಾಯದವರಿಗೆ ನೀಡಿದ್ದಾರೆ. ಐವರು ಡಿಸಿಎಂಗಳಿದ್ದರೂ ಜಗನ್ ಅನುಪಸ್ಥಿತಿಯಲ್ಲಿ ಯಾರಿಗು ಸುಪ್ರೀಂ ಪವರ್ ನೀಡಿಲ್ಲ. ನಿಗಮ ಮಂಡಳಿ ಸ್ಥಾನಗಳು ರೆಡ್ಡಿ ಜನಾಂಗಕ್ಕೆ ಲಭಿಸಿವೆ.
ಎಪಿಐಐಸಿ ಚೇರ್ಮನ್ ಆಗಿ ನಟಿ, ಶಾಸಕಿ ರೋಜಾ ರೆಡ್ಡಿ ಸಿ ಆರ್ ಡಿಎ ಚೇರ್ಮನ್ ಆಗಿ ಅಲ್ಲಾ ರಾಮಕೃಷ್ಣ ರೆಡ್ಡಿ(ಶಾಸಕ), ಟಿಯುಡಿಎ ಚೇರ್ಮನ್ ಆಗಿ ಚೇವಿರೆಡ್ಡಿ ಭಾಸ್ಕರ್ ರೆಡ್ಡಿ(ಟಿಟಿಡಿ ಸದಸ್ಯ, ಶಾಸಕ), ಸರ್ಕಾರ ಪ್ರಧಾನ ಸಲಹೆಗಾರರಾಗಿ ಅಜಯಂ ಕಲ್ಲಂ ರೆಡ್ಡಿ, ಎಪಿ ಕೃಷಿ ಮಿಷನ್ ಮುಖ್ಯಸ್ಥರಾಗಿ ಎಂವಿಎಸ್ ನಾಗಿ ರೆಡ್ಡಿ, ಎಪಿ ಸಾರ್ವಜನಿಕ ವ್ಯವಹಾರ ಇಲಾಖೆ ಸಲಹೆಗಾರರಾಗಿ ಸಜ್ಜಲ ರಾಮಕೃಷ್ಣ ರೆಡ್ಡಿ ಹೀಗೆ.. ಜಗನ್ ರೆಡ್ಡಿಯ ರೆಡ್ಡಿ ಸಮುದಾಯ ಪ್ರೇಮ ಮುಂದುವರೆದಿದೆ.