ಆಂಧ್ರದಲ್ಲಿ ಬಿಜೆಪಿಯ ನೀಲಿಕಂಗಳ ಹುಡುಗನಾಗಿ ಪವರ್ ಸ್ಟಾರ್!
ಅಮರಾವತಿ, ಜನವರಿ 15: ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಹಾಗೂ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆಪಿ ನಡ್ಡಾ ಭೇಟಿ ನಂತರ ಆಂಧ್ರ ರಾಜಕೀಯದಲ್ಲಿ ಸಂಚಲನ ಮೂಡಿದೆ. ತೆಲುಗು ಚಿತ್ರರಂಗದ ಪವರ್ ಸ್ಟಾರ್, ಜನಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್ ಅವರ ಚುನಾವಣಾ ರಾಜಕೀಯದ ಆರಂಭದ ಹೆಜ್ಜೆಯಲ್ಲೇ ಮುಗ್ಗರಿಸಿದ್ದರೂ ಅವರ ಕೈ ಹಿಡಿಯಲು ಕಮಲ ಪಕ್ಷ ಹಾತೊರೆಯುತ್ತಿದೆ.
ಪವನ್ ಕಲ್ಯಾಣ್ ಹೋದಲ್ಲಿ ಬಂದಲ್ಲಿ ಎಲ್ಲೇ ನೋಡಿದ್ರು ಜನವೋ ಜನ ಕಾಣ ಸಿಗುತ್ತಾರೆ. ಇದೆಲ್ಲ ನೋಡಿದ ಬಿಜೆಪಿ ಈ ಹಿಂದೆಯೂ ಪವನ್ ಸಖ್ಯ ಬಯಸಿತ್ತು. ಆದರೆ, ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಜನಾಸೇನಾ ಪಕ್ಷ ಏನೋ ಮಾಡುತ್ತೆ. ಪವನ್ ಕಲ್ಯಾಣ್ ಇತಿಹಾಸ ನಿರ್ಮಿಸುತ್ತಾರೆ ಎಂಬ ಕುತೂಹಲದಿಂದ ನಿರಾಶೆಯೊಂದಿಗೆ ಕೊನೆಯಾಗಿತ್ತು.
ತೆಲುಗಿನ 'ಪವರ್ ಸ್ಟಾರ್' 'ಜನಸೇನಾ'ದ ಪವನ್ ಆಸ್ತಿ ವಿವರ
ಜನಾಸೇನಾ ಪಕ್ಷದ ಇತರೆ ಅಭ್ಯರ್ಥಿಗಳ ಸೋಲನ್ನು ಸಹಿಸಿಕೊಳ್ಳಬಹುದು. ಆದರೆ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ ಅವರ ಸೋಲನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭೀಮಾವರಂ ಮತ್ತು ಗಾಜುವಾಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದ ಪವರ್ ಸ್ಟಾರ್ ಗೆ ಎರಡೂ ಕ್ಷೇತ್ರದಲ್ಲೂ ಗೆಲುವು ಸಿಗಲಿಲ್ಲ. ಈಗ ಬಿಜೆಪಿ ಜೊತೆ ಸಖ್ಯ ಬೆಳೆಸಿದರೆ, ಬಿಎಸ್ಪಿ ಸೇರಿದಂತೆ ಇತರೆ ಮಿತ್ರಪಕ್ಷಗಳಿಂದ ದೂರಾಗಬೇಕಾಗುತ್ತದೆ. ಆರೆಸ್ಸೆಸ್, ಬಿಜೆಪಿ ಮುಖಂಡರ ಜೊತೆ ಪವನ್ ಭೇಟಿ ಮಾಡಿದ್ದೇಕೆ? ರಾಜಕೀಯದಲ್ಲಿ ಏನೇನು ಸಾಧ್ಯತೆಯಿದೆ?
ಒಂದೇ ಒಂದು ಸೀಟು ಗೆದ್ದಿದ್ದ ಜನಸೇನಾ ಪಕ್ಷ
175 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಪವನ್ ಕಲ್ಯಾಣ್ ಸಾರಥ್ಯದ ಜನಾಸೇನಾ ಪಕ್ಷದ ಅಭ್ಯರ್ಥಿಗಳು, 140 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ಉಳಿದ 35 ಕ್ಷೇತ್ರಗಳನ್ನ ತಮ್ಮ ಮೈತ್ರಿ ಪಕ್ಷ ಬಿಎಸ್ ಪಿ ಪಕ್ಷಕ್ಕೆ ಬಿಟ್ಟುಕೊಟ್ಟಿದ್ದರು. ದುರಂತ ಅಂದ್ರೆ ಕೇವಲ ಒಂದು ಸೀಟು ಮಾತ್ರ ಜನಾಸೇನಾ ಪಕ್ಷದ ಪಾಲಾಗಿದೆ. ಇದು ಪವನ್ ಕಲ್ಯಾಣ್ ಗೆ ಭಾರಿ ಮುಖಭಂಗ ಉಂಟಾಗಿತ್ತು.
ಚಿರಂಜೀವಿ ಹಾದಿಯಲ್ಲಿ ಪವನ್ ಕಲ್ಯಾಣ್
2009ರಲ್ಲಿ ಆಂಧ್ರಪ್ರದೇಶದ (ತೆಲಂಗಾಣ ಆಗಿರಲಿಲ್ಲ) ಒಟ್ಟು 295 ಕ್ಷೇತ್ರಗಳಿಗೆ ವಿಧಾನಸಭೆ ಚುನಾವಣೆ ನಡೆದಿತ್ತು. ಈ ಎಲೆಕ್ಷನ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಸ್ಥಾಪಿಸಿದ್ದ ಪ್ರಜಾರಾಜ್ಯಂ ಪಕ್ಷ ಸ್ಪರ್ಧೆ ಮಾಡಿತ್ತು. ಭಾರಿ ಭರವಸೆಗಳೊಂದಿಗೆ ಅಖಾಡಕ್ಕೆ ಧುಮುಕಿದ್ದ ಚಿರಂಜೀವಿ ಬಹುಮತ ಪಡೆದು ಮುಖ್ಯಮಂತ್ರಿ ಆಗ್ತಾರೆ ಎಂದೇ ಹೇಳಲಾಗುತ್ತಿತ್ತು. ಆದ್ರೆ, ಅಂತಿಮವಾಗಿ 18 ಸೀಟು ಗೆಲ್ಲುವಲ್ಲಿ ಮಾತ್ರ ಚಿರಂಜೀವಿ ಯಶಸ್ವಿಯಾಗಿದ್ದರು.
ಜನಸೇನಾ ಪ್ರಣಾಳಿಕೆ: ವಾರ್ಷಿಕ 10 ಲಕ್ಷ ಉದ್ಯೋಗ ಪವನ್ ಭರವಸೆ
ಚಿರಂಜೀವಿ 30 ತಿಂಗಳು ನಂತರ ಕಾಂಗ್ರೆಸ್ ಪಕ್ಷದ ಜೊತೆ ತಮ್ಮ ಪಕ್ಷವನ್ನ ವಿಲೀನ ಮಾಡಿಕೊಂಡಿದ್ದರು. ನಂತರ ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯ ಸಭೆ ಸದಸ್ಯನಾಗಿ ಆಯ್ಕೆಯಾಗಿ ಕೇಂದ್ರ ಸಚಿವರು ಆಗಿದ್ದರು.
ಅಧಿಕಾರ ಇದ್ದರಷ್ಟೇ ಎಲ್ಲವೂ ಸಾಧ್ಯ
ಅಧಿಕಾರ ಇದ್ದರಷ್ಟೇ ಎಲ್ಲವೂ ಸಾಧ್ಯ ಎಂಬುದು ಪವನ್ ಕಲ್ಯಾಣ್ ಗೆ ತಡವಾಗಿ ಅರ್ಥವಾಗಿದೆ, ರಾಜಕೀಯ ಎಂದರೆ ಸಮಸ್ಯೆಗಳ ಬಗ್ಗೆ ಮಾತನಾಡುವುದಲ್ಲ, ಸಮಸ್ಯೆ ಬಗೆಹರಿಸಲು ಮುಂದಾಗುವುದು ಎಂದು ಪಕ್ಷವನ್ನು ಇತ್ತೀಚೆಗೆ ತೊರೆದ ಹಿರಿಯ ರಾಜಕೀಯರೊಬ್ಬರು ಹೇಳಿದ್ದಾರೆ. ಬಿಜೆಪಿ ಕೂಡಾ 13 ಜಿಲ್ಲೆಗಳಲ್ಲಿ ಪವನ್ ಗೆ ಇರುವ ಜನಪ್ರಿಯತೆಯನ್ನು ಗಮನಿಸಿ, ಜನಸೇನಾ ಪಕ್ಷವನ್ನು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಪವನ್ ಗೆ ಚಿರಂಜೀವಿಯಂತೆ ರಾಜ್ಯಸಭಾ ಸದಸ್ಯ ಸ್ಥಾನ ದೊರಕಿ, ಕೇಂದ್ರದಲ್ಲಿ ಸಚಿವರಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಜಾತಿ ರಾಜಕೀಯದ ತಂತ್ರಗಾರಿಕೆ
ಜಾತಿಗೊಬ್ಬರಂತೆ ಐವರು ಡಿಸಿಎಂಗಳನ್ನುನೇಮಿಸುವ ಮೂಲಕ ಆಂಧ್ರ ಸಿಎಂ ಜಗನ್ ಜಾತಿ ರಾಜಕೀಯ ತಂತ್ರಗಾರಿಕೆ, ಸಮಾನತೆಯ ನಿಪುಣತೆ ಮೆರೆದಿದ್ದಾರೆ. ಇದನ್ನು ಗಮನಿಸಿರುವ ಬಿಜೆಪಿ , ಒಬಿಸಿ, ಕ್ಷತ್ರಿಯ, ರೆಡ್ಡಿ ಜನಾಂಗ ಎಲ್ಲವನ್ನು ಮುನ್ನಡೆಸಬಲ್ಲ ಕಾಪು ನಾಯಕನಾಗಿ ಪವನ್ ರನ್ನು ಬಿಜೆಪಿ ಕಾಣುತ್ತಿದೆ. ಟಿಡಿಪಿ ದಿನದಿಂದ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ. ಹೋರಾಟದ ಮೂಲಕ ಅಧಿಕಾರಕ್ಕೇರಿದ ಜಗನ್ ಇತ್ತೀಚೆಗೆ ತೆಗೆದುಕೊಳ್ಳುತ್ತಿರುವ ಕೆಲ ನಿರ್ಣಯಗಳು ಜನಪ್ರಿಯತೆಯನ್ನು ಕುಗ್ಗಿಸತೊಡಗಿದೆ. ಹೀಗಾಗಿ, ಪವನ್ ಸೆಳೆಯರು ಇದೇ ಸಕಾಲ ಎಂದು ಬಿಜೆಪಿ ನಿರ್ಧರಿಸಿದೆ.