ಆಂಧ್ರದಲ್ಲಿ ಜಗನ್-ನಾಯ್ಡು ಜಟಾಪಟಿ, ಗೃಹಬಂಧನ ಮುಂದುವರಿಕೆ
ಅಮರಾವತಿ, ಸೆಪ್ಟೆಂಬರ್ 12: ಆಂಧ್ರಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ಆರಂಭವಾಗಿದ್ದು, ಟಿಡಿಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತವರ ಪುತ್ರ ನಾರಾ ಲೋಕೇಶ್ ಅವರ ಗೃಹಬಂಧನವನ್ನು ಮುಂದುವರಿಸಲಾಗಿದೆ.
ಗೃಹಬಂಧನಕ್ಕೂ ಮುನ್ನ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ನಾಯ್ಡು, "ಆಂಧ್ರಪ್ರದೇಶದಲ್ಲಿ ಮಾನವ ಹಕ್ಕುಗಳ ಮತ್ತು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ, ಪೊಲೀಸರಿಗೂ ಎಚ್ಚರಿಕೆ ನೀಡುತ್ತೇನೆ. ನೀವು ಇಂಥ ರಾಜಕೀಯ ಮಾಡುವಂತಿಲ್ಲ. ನಮ್ಮನ್ನು ಬಂಧಿಸಿ ನಿಯಂತ್ರಿಸುವುದಕ್ಕೆ ಸಾಧ್ಯವಿಲ್ಲ. ನನ್ನನ್ನು ಬಿಟ್ಟ ಕೂಡಲೆ ನಾನು ಮತ್ತೆ ಚಲೋ ಆತ್ಮಕುರ್" ಆರಂಭಿಸುತ್ತೇನೆ ಎಂದು ಗುಡುಗಿದರು.
ಆಂಧ್ರದಲ್ಲಿ ರಾಜಕೀಯ ಹೈಡ್ರಾಮಾ: ಚಂದ್ರಬಾಬು ನಾಯ್ಡು ಗೃಹಬಂಧನ
ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ನೂರು ದಿನಗಳು ಕಳೆದಿದ್ದು, ಅದರ ಸಂಭ್ರಮಾಚರಣೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರ ವೈಎಸ್ ಆರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಬುಧವಾರ ಚಂದ್ರಬಾಬು ನಾಯ್ಡು ಮತ್ತು ಕೆಲವು ಮುಖಂಡರು 12 ಗಂಟೆಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಲು ಮುಂದಾಗಿದ್ದರು. ಜೊತೆಗೆ ಚಲೋ ಆತ್ಮಾಕುರ್ ಎಂಬ ಜಾಥಾ ನಡೆಸಲು ಮುಂದಾಗಿದ್ದರು.
ನಿಮ್ಮ 'ನಾಯಿ'ಯನ್ನು ಹದ್ದುಬಸ್ತಿನಲ್ಲಿಡಿ: ನಾಯ್ಡುಗೆ ಟಿಡಿಪಿ ಸಂಸದನ ವಾರ್ನಿಂಗ್
ಈ ಪ್ರತಿಭಟನೆಯಿಂದ ಕಾನೂನು, ಸುವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ಆರೋಪಿಸಿ, ಪ್ರತಿಭಟನೆ ಆರಂಭವಾಗುವ ಮೊದಲೇ ನಾಯ್ಡು ಸೇರಿದಂತೆ ಟಿಡಿಪಿಯ ಪ್ರಮುಖ ಮುಖಂಡರನ್ನು ಗೃಹಬಂಧನದಲ್ಲಿರಿಸಲಾಯಿತು. ಅವರಿದ್ದ ಕಟ್ಟಡದ ಮುಂದಿನ ಗೇಟನ್ನು ಲಾಕ್ ಮಾಡಲಾಗಿದ್ದು, ಇಂದಿಗೂ ಗೃಹಬಂಧನ ಮುಂದುವರಿದಿದೆ.