ನಾಯ್ಡುಗೆ ಭಾರೀ ಆಘಾತ ನೀಡಿದ ಜಗನ್, ನಿವಾಸದ ಒಂದು ಭಾಗ ಕೆಡವಲು ಆದೇಶ
ಅಮರಾವತಿ, ಜೂನ್ 24: ಆಂಧ್ರಪ್ರದೇಶದಲ್ಲಿ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ಜಗನ್ ಮೋಹನ್ ರೆಡ್ಡಿ, ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪ್ರಜಾ ವೇದಿಕೆ ಮೇಲೆ ಕಣ್ಣಿಟ್ಟಿದ್ದರು. ಇದೀಗ ಆ ಕಟ್ಟಡವನ್ನು ನೆಲಸಮ ಮಾಡಲು ಆದೇಶಿಸಿದ್ದಾರೆ. ಈ ಮೂಲಕ ತಮ್ಮ ರಾಜಕೀಯ ವೈರಿಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ನದಿತಟದಲ್ಲಿರುವ ಸುಸಜ್ಜಿತ ಬಂಗಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಚಂದ್ರಬಾಬು ನಾಯ್ಡು ವಾಸವಿದ್ದಾರೆ. ಹೈದರಾಬಾದಿನಿಂದ ವಿಜಯವಾಡಕ್ಕೆ ರಾಜ್ಯ ಆಡಳಿತ ಕೇಂದ್ರ ಬದಲಾದ ಲಾಗಾಯ್ತೂ ಅವರು ಉಂಡವಳ್ಳಿ ಎಂಬಲ್ಲಿ ಸುಸಜ್ಜಿತ ಕಟ್ಟಡದಲ್ಲಿ ವಾಸವಿದ್ದಾರೆ. ಈ ಮನೆ ಓರ್ವ ಖಾಸಗಿ ವ್ಯಕ್ತಿಯದ್ದಾಗಿದ್ದು, ಹಿಂದಿನ ಸರ್ಕಾರ ಇದನ್ನು ಲೀಸಿಗೆ ತೆಗೆದುಕೊಂಡಿತ್ತು. ಇದನ್ನೇ ಚಂದ್ರಬಾಭು ನಾಯ್ಡು ಅವರ ಗೃಹಕಚೇರಿಯನ್ನಾಗಿ ಮಾಡಲಾಗಿತ್ತು. 'ಪ್ರಜಾ ವೇದಿಕಾ' ಎಂಬ ಮೀಟೀಂಗ್ ಹಾಲ್ ಅನ್ನೂ ಚಂದ್ರಬಾಬು ನಾಯ್ಡು ಇಲ್ಲಿ ಕಟ್ಟಿಕೊಂಡಿದ್ದರು. ಈ ಕಟ್ಟಡವನ್ನು ಅಕ್ರಮವಾಗಿ ಕಟ್ಟಲಾಗಿರುವ ಕಾರಣ ಚಂದ್ರಬಾಬು ನಾಯ್ಡು ವಾಸವಿದ್ದ ನಿವಾಸದ ಪ್ರಜಾ ವೇದಿಕೆ ಸಭಾಂಗಣದ ಭಾಗವನ್ನು ಮಾತ್ರ ನೆಲಸಮ ಮಾಡುವಂತೆ ಸರ್ಕಾರ ಆದೇಶಿಸಿದೆ.
ಅಧಿಕಾರ ಹೋಯ್ತು, ಮನೆಯನ್ನೂ ಕಳೆದುಕೊಳ್ಳಲಿದ್ದಾರೆ ಚಂದ್ರಬಾಬು ನಾಯ್ಡು!
ಆಂಧ್ರ ಪ್ರದೇಶ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಲ್ಲಾ ರಾಮಕೃಷ್ಣ ರೆಡ್ಡಿ ಚಂದ್ರಬಾಬು ನಾಯ್ಡು ಅವರು ಮನೆ ಖಾಲಿ ಮಾಡಬೇಕಾಗುತ್ತದೆ ಎಂದು ಸಾರ್ವಜನಿಕವಾಗಿಯೇ ಘೋಷಿಸಿದ್ದರು. ಕಟ್ಟಡವನ್ನು ವಿರೋಧದ ಹೊರತಾಗಿಯೂ ನೆಲಸಮ ಮಾಡಲು ಬಂದರೆ ಕೋರ್ಟ್ ಮೆಟ್ಟಿಲೇರುವುದಾಗಿ ನಾಯ್ಡು ಬಣ ಆಕ್ರೋಶ ವ್ಯಕ್ತಪಡಿಸಿತ್ತು.
ಜಗನ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಟ್ಟಡದ ಈ ಭಾಗವನ್ನು ನೆಲಸಮ ಮಾಡಿಸಬಹುದು ಎಂಬ ಸೂಚನೆ ನಾಯ್ಡು ಅವರಿಗೆ ದೊರಕಿತ್ತು. ಆದ್ದರಿಂದಲೇ ಅವರು ಈ ನಿವಾಸವನ್ನು ಕೆಲ ದಿನಗಳ ಕಾಲ ಕಚೇರಿ ಕೆಲಸಕ್ಕೆ ಬಳಸಿಕೊಳ್ಳಲು ಅನಿಮತಿ ನೀಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರದ ಕಡೆಯಿಮದ ಇದಕ್ಕೆ ಯಾವುದೇ ಪ್ರತಿಕ್ರಿಯೆ ದೊರಕಿರಲಿಲ್ಲ.