ಮೋದಿ ಮೋಹ! ಜಗನ್, ಕೆಸಿಆರ್ ರನ್ನು ತರಾಟೆಗೆ ತೆಗೆದುಕೊಂಡ ನಾಯ್ಡು
ವಿಜಯವಾಡ, ಫೆಬ್ರವರಿ 07: 'ಅನಿಷ್ಟಕ್ಕೆಲ್ಲ ಶನಿಶ್ವರನೇ ಕಾರಣ' ಅನ್ನೋ ಹಾಗೆ ಈ ದೇಶದಲ್ಲಿ ಏನೇ ಆದರೂ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂಬುದು ತೆಲುಗು ದೇಶಂ ಪಕ್ಷದ ನಾಯಕ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರ ಅಭಿಪ್ರಾಯ.
ಪಶ್ಚಿಮ ಬಂಗಾಳದಲ್ಲಿ ಎದ್ದ ಸಿಬಿಐ ಮತ್ತು ಮಮತಾ ಬ್ಯಾನರ್ಜಿ ನಡುವಿನ ವಿವಾದದ ಸಂದರ್ಭದಲ್ಲಿ ತಟಸ್ಥವಾಗುಳಿದ ವೈಎಸ್ ಆರ್ ಕಾಂಗ್ರೆಸ್ ನ ಜಗನ್ ಮೋಹನ ರೆಡ್ಡಿ ಮತ್ತು ತೆಲಂಗಾಣ ಮುಖ್ಯಮಂತ್ರಿ, ಟಿಆರ್ ಎಸ್ ನಾಯಕ ಕೆ ಚಂದ್ರಶೇಖರ್ ರಾವ್ ಅವರು ಮೋದಿ ಮಾರ್ಗದರ್ಶನದಂತೆಯೇ ನಡೆಯುತ್ತಿದ್ದಾರೆ ಎಂದು ನಾಯ್ಡು ಆರೋಪಿಸಿದ್ದಾರೆ.
ಮಮತಾ ವಿರುದ್ಧ ಬಿಜೆಪಿ ಸೇಡು ತೀರಿಸಿಕೊಳ್ಳುತ್ತಿದೆ: ನಾಯ್ಡು
ಪ್ರಧಾನಿ ನರೇಂದ್ರ ಮೋದಿ ಅವರ ಮೋಹದಲ್ಲಿ ಬಿದ್ದಿರುವ ಕೆಸಿಆರ್ ಮತ್ತು ಜಗನ್ ಮೋಹನ್ ರೆಡ್ಡಿ ಅವರು ಹೇಳಿದಂತೆಯೇ ನಡೆಯುತ್ತಾರೆ, ಅವರ ಎಲ್ಲಾ ನಡೆಗೂ ಮೋದಿಯೇ ನಿರ್ದೇಶಕರು ಎಂದು ನಾಯ್ಡು ಕಿಚಾಯಿಸಿದ್ದಾರೆ.
ಬಹುಕೋಟಿ ಶಾರದಾ ಸಮೂಹ ಸಂಸ್ಥೆ ಚಿಟ್ ಫಂಡ್ ಹಗರಣ ಹಾಗೂ ರೋಸ್ ವ್ಯಾಲಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಬಂಧಿಸಲು ಸಿಬಿಐ ಮುಂದಾಗಿತ್ತು. ಆದರೆ ಸಿಬಿಐ ಅಧಿಕಾರಿಗಳನ್ನೇ ಬಂಗಾಳದ ಪೊಲೀಸರು ವಶಕ್ಕೆ ಪಡೆದಿದ್ದರು.
ಪಟ್ಟು ಬಿಡದ ದೀದಿ: ಸುಪ್ರೀಂ ಕೋರ್ಟ್ ಮೊರೆಹೋದ ಸಿಬಿಐ
ತನಿಖೆಗೆ ಬಂದ ಸಿಬಿಐ ಕ್ರಮವನ್ನು ಖಂಡಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, 'ಸಂವಿಧಾನ ಉಳಿಸಿ' ಎಂದು ಕೋಲ್ಕತ್ತದ ಮೆಟ್ರೋ ಚಾನೆಲ್ ಬಳಿ ಧರಣಿ ನಡೆಸಿದ್ದರು. ಆ ಸಂದರ್ಭದಲ್ಲಿ ವಿಪಕ್ಷಗಳೆಲ್ಲವೂ ದೀದಿ ಅವರ ಬೆಂಬಲಕ್ಕೆ ನಿಂತಿದ್ದವು. ಆದರೆ ಕೆಸಿಆರ್ ಮತ್ತು ಜಗನ್ ಮೋಹನ್ ರೆಡ್ಡಿ ಇಬ್ಬರೂ ಈ ಬೆಳವಣಿಗೆಗೆ ಯಾವುದೇ ಪ್ರತಿಕ್ರಿಯೆ ನೀಡದೆ ತಟಸ್ಥವಾಗಿ ಉಳಿದಿದ್ದರು.