ವಿವಾದಿತ ದೇವಮಾನವ 'ಕಲ್ಕಿ ಭಗವಾನ್' ಆಶ್ರಮದ ಮೇಲೆ ಐಟಿ ದಾಳಿ
ಅಮರಾವತಿ (ಆಂಧ್ರಪ್ರದೇಶ), ಅಕ್ಟೋಬರ್ 16: ವಿವಾದಿತ ದೇವಮಾನವ 'ಕಲ್ಕಿ ಭಗವಾನ್'ಗೆ ಸೇರಿದ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇರುವ ಆಶ್ರಮದ ಮೇಲೆ ಬುಧವಾರ ಅದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿದೆ. ಅಷ್ಟೇ ಅಲ್ಲ, ಕಲ್ಕಿ ಭಗವಾನ್ ರ ಮಗನ ವ್ಯಾಪಾರ- ವ್ಯವಹಾರಕ್ಕೆ ಸಂಬಂಧಿಸಿದವರ ಚೆನ್ನೈನ ಸ್ಥಳಗಳ ಮೇಲೆ ಕೂಡ ದಾಳಿ ನಡೆದಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ನಲವತ್ತು ಸ್ಥಳಗಳ ಮೇಲೆ ದಾಳಿ ನಡೆದಿದೆ. ಅವುಗಳ ಪೈಕಿ ಅರ್ಧದಷ್ಟು ಚೆನ್ನೈನಲ್ಲೇ ಇವೆ. ತಮಿಳುನಾಡಿನ ಗಡಿಗೆ ಹೊಂದಿಕೊಂಡಂತೆ ಇರುವ ಕಲ್ಕಿ ಭಗವಾನ್ ಅಶ್ರಮದ ಮುಖ್ಯ ಕೇಂದ್ರದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.
ಪರಮೇಶ್ವರ್ ಮೇಲೆ ಐಟಿ ದಾಳಿ ಅಂತ್ಯ: ಭಾರಿ ಅಕ್ರಮ ಆಸ್ತಿ ಪತ್ತೆ?
ಆಧ್ಯಾತ್ಮಿಕ ಗುರುಗಳ ಮಗ, ಕೃಷ್ಣ ಎಂಬಾತ ತನ್ನ ಸಹವರ್ತಿಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಹಣಕಾಸು ಹೂಡಿಕೆ ಮಾಡಿದ್ದು, ಅದರಲ್ಲಿ ಭಾರೀ ಅವ್ಯವಹಾರದ ಗುಮಾನಿ ಇದೆ. ಗುಪ್ತಚರ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆದಿದೆ ಎಂದು ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಧ್ಯಾತ್ಮ ಗುರುಗಳ ಮೂಲ ಹೆಸರು ವಿಜಯ್ ಕುಮಾರ್ ನಾಯ್ಡು. ಎಲ್ ಐಸಿಯಲ್ಲಿ ಗುಮಾಸ್ತೆ ಆಗಿದ್ದ ಅವರು ಕೆಲಸ ಬಿಟ್ಟು, ರಾಜುಪೇಟದಲ್ಲಿ ಪರ್ಯಾಯ ಶಿಕ್ಷಣ ನೀಡಲು ಆರಂಭಿಸಿದ್ದರು. 1989ರಲ್ಲಿ ವ್ಯಾಪಾರದಲ್ಲಿ ನಷ್ಟವಾದ ಮೇಲೆ ಭೂಗತರಾದ ಅವರು, ಮಹಾವಿಷ್ಣುವಿನ ಹತ್ತನೇ ಅವತಾರ ಕಲ್ಕಿ ತಾನು ಎಂದು ಚಿತ್ತೂರಿನಲ್ಲಿ ಕಾಣಿಸಿಕೊಂಡರು. ತನ್ನ ಪತ್ನಿ ದೇವರ ಸಂಗಾತಿಯ ಪುನರ್ಜನ್ಮ ಎಂದಿದ್ದರು.
ತಮಿಳುನಾಡು, ಆಂಧ್ರಪ್ರದೇಶದಲ್ಲಿ ಕಲ್ಕಿ ಭಗವಾನ್ ಆಶ್ರಮಗಳಿವೆ. ಭಾರತೀಯರು, ವಿದೇಶೀಯರು ಅನುಯಾಯಿಗಳಾಗಿದ್ದಾರೆ. ಕಲ್ಕಿ ಭಗವಾನ್ ಹಲವು ಪವಾಡಗಳನ್ನು ಮಾಡಿದ್ದಾರೆ ಎಂದು ಅನುಯಾಯಿಗಳು ಹೇಳಿಕೊಂಡರೆ, ಟೀಕಾಕಾರರು ಹಲವು ಪ್ರಶ್ನೆಗಳನ್ನು ಮಾಡುತ್ತಾರೆ. ಚಿತ್ತೂರು ಆಶ್ರಮದಲ್ಲಿ ಹನ್ನೊಂದು ವರ್ಷದ ಹಿಂದೆ ಕಾಲ್ತುಳಿತವಾಗಿ, ಐವರು ಮೃತಪಟ್ಟಿದ್ದರು. ಹಲವರಿಗ್ಗೆ ಗಾಯಗಳಾಗಿದ್ದವು.
ಈ ದಂಪತಿಯನ್ನು ಆಶ್ರಮದಲ್ಲಿ ದರ್ಶನ ಮಾಡಬೇಕು ಅಂದರೆ, ಸಾಮಾನ್ಯ ದರ್ಶನಕ್ಕೆ ಐದು ಸಾವಿರ ಹಾಗೂ ವಿಶೇಷ ದರ್ಶನಕ್ಕೆ ಇಪ್ಪತ್ತೈದು ಸಾವಿರ ವಿಧಿಸಲಾಗುತ್ತದೆ. ಇನ್ನು ಈ ದೇವಮಾನವನ ವಿರುದ್ಧ ಭೂ ಒತ್ತುವರಿಯಂಥ ಆರೋಪಗಳಿವೆ. ಸದ್ಯಕ್ಕೆ ಆದಾಯ ಇಲಾಖೆ ಅಧಿಕಾರಿಗಳ ದಾಳಿ ಬಗ್ಗೆ ಆಶ್ರಮದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.