ಕಳೆದ ಎಪ್ಪತ್ತು ವರ್ಷಗಳಲ್ಲೇ ಅತ್ಯಂತ ಭ್ರಷ್ಟ ಸರಕಾರ ಮೋದಿಯದು: ಕೇಜ್ರಿವಾಲ್
ಅಮರಾವತಿ (ಆಂಧ್ರಪ್ರದೇಶ), ಮಾರ್ಚ್ 31: ಈ ಬಾರಿಯ ಚುನಾವಣೆ ಆಂಧ್ರ ಹಾಗೂ ದೇಶ ಎರಡಕ್ಕೂ ಬಹಳ ಮುಖ್ಯವಾದದ್ದು. ಚಂದ್ರಬಾಬು ನಾಯ್ಡು ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯ ಪಟ್ಟಿದ್ದಾರೆ. ಟಿಡಿಪಿ ಪರ ಪ್ರಚಾರ ಸಭೆಯಲ್ಲಿ ಭಾನುವಾರ ಅವರು ಭಾಗವಹಿಸಿದ್ದರು.
ಆಂಧ್ರಪ್ರದೇಶ ವಿಭಜನೆ ನಂತರ ಬಹಳ ದೊಡ್ಡ ಸವಾಲಿತ್ತು. ನಾಯ್ಡು ಅವರು ಆ ಸವಾಲನ್ನು ಸಮರ್ಥವಾಗಿ ಎದುರಿಸಿದರು. ಇನ್ನು ಭಾರತದಲ್ಲಿ ತುರ್ತು ಪರಿಸ್ಥಿತಿಯಂಥ ಸನ್ನಿವೇಶ ಎದುರಿಸುತ್ತಿದೆ. ನರೇಂದ್ರ ಮೋದಿ- ಅಮಿತ್ ಶಾ ಜೋಡಿ ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನೇ ನಾಶ ಮಾಡಿದೆ. ಕಳೆದ ಎಪ್ಪತ್ತು ವರ್ಷಗಳಲ್ಲೇ ಮೋದಿ ಸರಕಾರ ಅತ್ಯಂತ ಭ್ರಷ್ಟ ಸರಕಾರ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಆರ್ ಜಿವಿ ಲಕ್ಷ್ಮೀಸ್ ಎನ್ಟಿಆರ್ ಚಿತ್ರಕ್ಕೆ ಆಂಧ್ರಪ್ರದೇಶದಲ್ಲಿ ನಿಷೇಧ!
ಮೋದಿ ಯಾರ ಮಾತು ಕೇಳಿಸಿಕೊಳ್ಳಲ್ಲ. ಅಧಿಕಾರಿಗಳ ಮಾತು ಕೇಳಿಸಿಕೊಳ್ಳಲ್ಲ. ಹಾಗೆ ಕೇಳಿಸಿಕೊಳ್ಳುವ ಏಕೈಕ ವ್ಯಕ್ತಿ ಅಮಿತ್ ಶಾ. ಯಾರ ಜತೆಗೂ ಚರ್ಚಿಸದೆ ಅಪನಗದೀಕರಣ ಜಾರಿಗೆ ತಂದರು. ಅದು ಅತಿ ದೊಡ್ಡ ಹಗರಣ. ಪ್ರತಿ ವ್ಯಾಪಾರಿ, ಮಧ್ಯಮ ವರ್ಗ, ಬಡವರು ಅದರಿಂದ ಅನುಭವಿಸಿದರು. ಧರ್ಮ, ಜಾತಿ, ಜನಾಂಗದ ಹೆಸರಲ್ಲಿ ಮೋದಿಯು ಜನರನ್ನು ವಿಭಜಿಸಿದರು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಈ ಬಾರಿ ಮೋದಿ-ಶಾ ಜಯಿಸಿಬಿಟ್ಟರೆ ಜರ್ಮನಿಯಲ್ಲಿ ಹಿಟ್ಲರ್ ಮಾಡಿದಂತೆ ಇವರು ದೇಶದ ಸಂವಿಧಾನವನ್ನೇ ಬದಲಿಸುತ್ತಾರೆ. ಹಿಂದೂ ದೇಶವಾಗಿ ಬದಲಿಸುತ್ತಾರೆ. ಇದೇ ದೇಶದಲ್ಲಿ ಕೊನೆ ಚುನಾವಣೆ ಎಂದು ಬಿಜೆಪಿ ಸಂಸದರಾದ ಸಾಕ್ಷಿ ಮಹಾರಾಜ್ ಹೇಳಿದ್ದಾರೆ. ಮುಂದೆ 2050ರ ತನಕ ಚುನಾವಣೆ ಇರುವುದಿಲ್ಲ ಎಂದಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.