ಜಗನ್ ರೆಡ್ಡಿಯಿಂದ ಐತಿಹಾಸಿಕ ನಿರ್ಣಯ, ಆಂಧ್ರಕ್ಕೆ 5 ಡಿಸಿಎಂಗಳು
ಅಮರಾವತಿ, ಜೂನ್ 07: ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದ್ದಾರೆ. ಆಂಧ್ರಪ್ರದೇಶ ಸರ್ಕಾರ 5 ಉಪ ಮುಖ್ಯಮಂತ್ರಿಗಳನ್ನು ಹೊಂದಲಿದೆ ಎಂದು ಶುಕ್ರವಾರದಂದು ಘೋಷಿಸಿದ್ದಾರೆ.
ಅಮರಾವತಿಯ ತಡೆಪಲ್ಲಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಶುಕ್ರವಾರದಂದು ನಡೆದ ಸಭೆ ನಡೆಯುತ್ತಿದೆ. ಸಿಎಂ ಜಗನ್ ರೆಡ್ಡಿ ಈ ರೀತಿ ನಿರ್ಣಯ ಘೋಷಿಸುತ್ತಿದ್ದಂತೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಶಾಸಕರು ಒಂದು ಕ್ಷಣ ಅಚ್ಚರಿಗೆ ದೂಡಲ್ಪಟ್ಟರು.
ಕ್ಯಾನ್ಸರ್ ಪೀಡಿತನ ಬದುಕಿಗೆ ಭರವಸೆ ಬೆಳಕಾದ ಜಗನ್ ಮೋಹನ್ ರೆಡ್ಡಿ
ಶನಿವಾರ(ಜೂನ್ 08)ದಂದು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಸಚಿವ ಸಂಪುಟ ವಿಸ್ತರಣೆಗೊಳ್ಳಲಿದೆ. 25 ಮಂದಿ ಶಾಸಕರನ್ನು ಸಚಿವ ಸಂಪುಟಕ್ಕೆ ಜಗನ್ ಸೇರಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಐವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
5 ವರ್ಷ ಜಗನ್ ಕುರ್ಚಿ ಮೇಲೆ ಕೂರಲು ಗ್ರಹಗತಿ ತೊಡಕು ; ಆಂಧ್ರದಲ್ಲಿ ರೆಸಾರ್ಟ್ ರಾಜಕೀಯ!
ಐವರು ಉಪ ಮುಖ್ಯಮಂತ್ರಿಗಳನ್ನು ಜಾತಿವಾರು ಲೆಕ್ಕಾಚಾರದಂತೆ ಸಮಾನವಾಗಿ ಜಗನ್ ಹಂಚಿಕೆ ಮಾಡಲು ನಿರ್ಧರಿಸಿದ್ದಾರೆ. ಎಸ್ ಸಿ, ಎಸ್ ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ಕಾಪು ಸಮುದಾಯದಿಂದ ತಲಾ ಒಬ್ಬೊಬ್ಬರು ಡಿಸಿಎಂ ಆಗುವ ಅವಕಾಶ ಪಡೆಯಲಿದ್ದಾರೆ.
ಐದು ಜಾತಿ, ಪಂಗಡಕ್ಕೆ ಐದು ಡಿಸಿಎಂ ಹುದ್ದೆ
ಉಮ್ಮಾರೆಡ್ಡಿ ವೆಂಕಟೇಶ್ವರಲು ಅಥವಾ ಅಲ್ಲಾ ನಾನಿ(ಕಾಪು), ರಂಜನಾ ದೋರಾ(ಎಸ್ಟಿ), ಕೆ ಪಾರ್ಥಸಾರಥಿ(ಯಾದವ ಹಿಂದುಳಿದ ವರ್ಗ), ಎಂ ಸುಚರಿತಾ( ಎಸ್ ಸಿ) ಹಾಗೂ ಅಹ್ಜಾದ್ ಬಾಷಾ(ಅಲ್ಪಸಂಖ್ಯಾತ), ಸಚಿವ ಸಂಪುಟ ಸದಸ್ಯರ ಅವಧಿ ಎರಡೂವರೆ ವರ್ಷ ಆನಂತರ ಶೇ 90ರಷ್ಟು ಸಚಿವರಿಗೆ ಗೇಟ್ ಪಾಸ್ ನೀಡಿ ಹೊಸಬರಿಗೆ ಅವಕಾಶ ನೀಡುವ ಯೋಜನೆ ಜಗನ್ ಹಾಕಿಕೊಂಡಿದ್ದಾರೆ.
ಇಬ್ಬರು ಡಿಸಿಎಂ ಕಂಡಿದ್ದ ಆಂಧ್ರಪ್ರದೇಶ
2014ರಿಂದ 2019ರ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ, ತೆಲುಗು ದೇಶಂ ಪಾರ್ಟಿ ಅಧ್ಯಕ್ಷ ಎನ್ ಚಂದ್ರಬಾಬು ನಾಯ್ಡು ಅವರು ಇಬ್ಬರು ಡಿಸಿಎಂಗಳನ್ನು ನೇಮಿಸಿದ್ದರು. ನಿಮ್ಮಕಾಯಲ ಚಿನ್ನ ರಾಜಪ್ಪ ಹಾಗೂ ಕೆಇ ಕೃಷ್ಣಮೂರ್ತಿ ಅವರು ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು.
ಕೆಸಿಆರ್ ಕೂಡಾ 2 ಡಿಸಿಎಂ ಹೊಂದಿದ್ದರು
ಪಕ್ಕದ ರಾಜ್ಯ ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಕೂಡಾ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ತಮ್ಮ ಸಂಪುಟದಲ್ಲಿ ಹೊಂದಿದ್ದರು.ಮೊಹಮ್ಮದ್ ಮಹಮೂದ್ ಅಲಿ ಹಾಗೂ ಕಡಿಯಂ ಶ್ರೀಹರಿ ಅವರು ತೆಲಂಗಾಣ ಡಿಸಿಎಂ ಆಗಿದ್ದರು. ಆದರೆ, ಈಗ ಹೊಸ ಸರ್ಕಾರದಲ್ಲಿ ಕೆಸಿಆರ್ ಅವರು ಡಿಸಿಎಂ ನೇಮಿಸಿಲ್ಲ.
ಐತಿಹಾಸಿಕ ನಿರ್ಣಯದ ಅಗತ್ಯವೇನು?
ಆಂಧ್ರಪ್ರದೇಶದ ವೈವಿಧ್ಯಮಯ ಜಾತಿ ಲೆಕ್ಕಾಚಾರಕ್ಕೆ ತಕ್ಕಂತೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆ ನೀಡುವ ದೃಷ್ಟಿಯಿಂದ ಎಲ್ಲಾ ಪ್ರಮುಖ ಜಾತಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅಧಿಕಾರ ವಿಕೇಂದ್ರಿಕರಣವೂ ಇದರಿಂದ ಸಾಧ್ಯ ಎಂದು ವೈಎಸ್ಸಾರ್ ಕಾಂಗ್ರೆಸ್ ಮೂಲಗಳು ಹೇಳಿವೆ. ಆದರೆ, ಡಿಸಿಎಂಗಳಿಗೆ ಎಷ್ಟು ಪವರ್ ನೀಡಲಾಗುತ್ತದೆ ಎಂಬುದರ ಮೇಲೆ ಈ ನಿರ್ಣಯದ ಫಲಾಫಲ ತಿಳಿಯಲಿದೆ.