ನಾಯ್ಡು ಮುಖಕ್ಕೆ ಮಂಗಳಾರತಿ ಮಾಡಿದರೇ ಮಮತಾ, ಮಾಯಾವತಿ?!
Recommended Video
ಅಮರಾವತಿ, ನವೆಂಬರ್ 21: "ಕಾಂಗ್ರೆಸ್ ಜೊತೆ ಏಗೋದು ಕಷ್ಟವಿಲ್ಲ... ಆದರೆ ಎರಡು ಜಡೆಯನ್ನು ನಿಯಂತ್ರಿಸೋದು ಮಾತ್ರ ತನ್ನಿಂದ ಸಾಧ್ಯವೇ ಇಲ್ಲ" ಅನ್ನೋ ನಿರ್ಧಾರಕ್ಕೆ ಟಿಡಿಪಿ ಮುಖಂಡ ಚಂದ್ರಬಾಬು ನಾಯ್ಡು ಬಂದಂತಿದೆ!
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರನ್ನು ಮಹಾಮೈತ್ರಿಗೆ ಒಪ್ಪಿಸುವ ಚಂದ್ರಬಾಬು ನಾಯ್ಡು ಅವರ ಪ್ರಯತ್ನಕ್ಕೆ ಮಹಾಮಂಗಳಾರತಿಯ ಪ್ರತಿಕ್ರಿಯೆ ಸಿಕ್ಕಂತಾಗಿದೆ!
ಮೋದಿ ವಿರೋಧಿಗಳನ್ನೆಲ್ಲ ಒಗ್ಗೂಡಿಸುತ್ತಿರುವ ನಾಯ್ಡು ಈಗ ಪ್ರಧಾನಿ ಹುದ್ದೆಗೆ ಹತ್ತಿರವೆ?
ಇತ್ತೀಚೆಗಷ್ಟೇ ಚಂದ್ರಬಾಬು ನಾಯ್ಡು ಅವರು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ, "ನನ್ನನ್ನು ಟೇಕನ್ ಫಾರ್ ಗ್ರಾಂಟೆಂಡ್ ಎಂಬಂತೆ ನೋಡಬೇಡಿ" ಎಂದು ಮಮತಾ ಬ್ಯಾನರ್ಜಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಮೂಲಕ ಹೋದ ದಾರಿಗೆ ಸುಂಕವಿಲ್ಲ ಎಂದು ನಾಯ್ಡು ವಾಪಸ್ಸಾಗಿದ್ದಾರೆ! ಅಷ್ಟೇ ಅಲ್ಲ, ಕಾಂಗ್ರೆಸ್ ಬಗ್ಗೆ ಮುನಿಸಿಕೊಂಡಿರುವ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರನ್ನೂ ಮಹಾಮೈತ್ರಿಗೆ ಒಪ್ಪಿಸುವುದು ಸುಲಭವಿಲ್ಲ. ಒಟ್ಟಿನಲ್ಲಿ ಕೇಂದ್ರದಲ್ಲಿ ಮೋದಿ ಸರ್ಕಾರವನ್ನು ಕಿತ್ತೆಸೆಯುವ ನಾಯ್ಡು ಯೋಚನೆಗೆ ಮಾಯಾ ಮತ್ತು ಮಮತಾ ಅವರೇ ತಣ್ಣೀರೆರೆಚುವ ಲಕ್ಷಣಗಳು ಕಂಡುಬರುತ್ತಿವೆ.
ಕಾಂಗ್ರೆಸ್ಸೇ ಸಮಸ್ಯೆ!
ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಇಬ್ಬರಿಗೂ ಮಹಾಮೈತ್ರಿಯ ಬಗ್ಗೆ ತಕರಾರಿಲ್ಲ. ಆದರೆ ಆ ಮಹಾಮೈತ್ರಿಯಲ್ಲಿ ಕಾಂಗ್ರೆಸ್ ಸಹ ಭಾಗವಾಗುತ್ತದಲ್ಲ, ಅದೇ ಸಮಸ್ಯೆ! ಟಿಡಿಪಿಗೆ ಕಾಂಗ್ರೆಸ್ ಜೊತೆ ಕೇಂದ್ರದಲ್ಲೂ ಮೈತ್ರಿ ಮಾಡಿಕೊಳ್ಳುವುದಕ್ಕೆ ಸಮಸ್ಯೆಯಿಲ್ಲ. ಆದರೆ ಅದಕ್ಕೆ ಈ ಇಬ್ಬರು ಮಹಿಳಾ ಮುಖಂಡರು ಒಪ್ಪುತ್ತಿಲ್ಲ. ಇದೇ ನವೆಂಬರ್-ಡಿಸೆಂಬರ್ ನಲ್ಲಿ ನಡೆಯಲಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ರಾಜ್ಯಗಳಲ್ಲಿ ಬಿಎಸ್ಪಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕೆ ಸುತಾರಾಂ ಒಲ್ಲೆ ಎಂದಿತ್ತು.
ಚಂದ್ರಬಾಬು ನಾಯ್ಡು-ಮಮತಾ ಸಭೆ: ಮೊದಲ ಸಂದೇಶ ಬಿಜೆಪಿಗಲ್ಲ, ರಾಹುಲ್ಗೆ!
ಬಿಜೆಪಿ ವಿರೋಧಿ ಗಳ ಒಕ್ಕೂಟ!
ಒಂದಾನೊಂದು ಕಾಲದಲ್ಲಿ ಕೇಂದ್ರದ ಎನ್ ಡಿಎ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಚಂದ್ರಬಾಬು ನಾಯ್ಡು ಅವರು, ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ, ಅದಕ್ಕೆ ಕೇಂದ್ರ ಸೊಪ್ಪುಹಾಕಲಿಲ್ಲ ಎಂಬ ನೆಪದೊಂದಿಗೆ ಮೈತ್ರಿಯಿಂದ ಹೊರಬಂದರು. ಆ ನಂತರ ಬಿಜೆಪಿ ವಿರೋಧಿಗಳದ್ದೇ ಒಂದು ಬಣ ಆರಂಭಿಸಲು ರಾಜ್ಯ ರಾಜ್ಯ ಸುತ್ತುತ್ತಿದ್ದಾರೆ. ಆದರೆ ಅವರ ಈ ಕಾರ್ಯಕ್ಕೆ ಬಿಜೆಪಿ ಬದ್ಧ ವಿರೋಧಿಗಳೇ ಆಗಿರುವ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಸಹ ಕ್ಯಾರೇ ಎನ್ನದಿರುವುದು ನಾಯ್ಡು ಮುಖಕ್ಕೆ ಮಂಗಳಾರತಿ ಮಾಡಿದಂತಾಗಿದೆ.
ಬಿಜೆಪಿ ವಿರೋಧಿ ಪಕ್ಷಗಳ ಸಭೆ ಕರೆದ ಚಂದ್ರಬಾಬು ನಾಯ್ಡು
ಮಮತಾ-ಮಾಯಾವತಿ ವಾದವೇನು?
ಮಮತಾ ಮತ್ತು ಮಾಯಾವತಿ ಅವರಿಗೆ ಚಂದ್ರಬಾಬು ನಾಯ್ಡು ಅವರ ಮೇಲೇನೂ ಮುನಿಸಿಲ್ಲ. ಆದರೆ ಸಮಸ್ಯೆ ಕಾಂಗ್ರೆಸ್! ಕಾಂಗ್ರೆಸ್ ಜೊತೆ ಮೈತ್ರಿ ಎಂದರೆ ಅದಕ್ಕೆ ಟಿಎಂಸಿ ಮತ್ತು ಬಿಎಸ್ಪಿ ಎರಡೂ ಪಕ್ಷಗಳೂ ಸಿದ್ಧವಿಲ್ಲ. ಅದರಲ್ಲೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನೇತೃತ್ವದ ಮೈತ್ರಿಕೂಟದಲ್ಲಿ ಗುರುತಿಸಿಕೊಳ್ಳಲು ಅವರು ಸಿದ್ಧರಿಲ್ಲ. ರಾಹುಲ್ ಗಾಂಧಿ ಅವರನ್ನು ಕಾಂಗ್ರೆಸ್ ಬಾಯಿಮಾತಿಗೆ ಪ್ರಧಾನಿ ಅಭ್ಯರ್ಥಿಯಲ್ಲ ಎಂದರೂ, ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂಬಂತೆಬಿಂಬಿಸುತ್ತಿರುವುದು ಈ ಮಹಿಳಾಮಣಿಯರಿಗೆ ಇಷ್ಟವಿಲ್ಲ. ಈಗಾಗಲೇ ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಈ ಇಬ್ಬರು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೆ ತಮ್ಮ ಕನಸಿಗೆ ನೀರೆರೆಚಿದಂತೇ ಎಂಬುದು ಅವರ ಅಭಿಪ್ರಾಯ.
ಬಿಜೆಪಿಗೆ ಸೆಡ್ಡು ಹೊಡೆಯಲು ಶತಾಯಗತಾಯ ಪ್ರಯತ್ನ
ಬಿಜೆಪಿಗೆ ಸೆಡ್ಡು ಹೊಡೆಯಲು ನಾಯ್ಡು ಅವರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿಗೆ ಭೇಟಿ ನೀಡಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರನ್ನೂ ಭೇಟಿಯಾಗಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಮುಖಂಡ ಸ್ಟಾಲಿನ್ ರನ್ನು ಭೇಟಿಯಾಗಿದ್ದಾರೆ. ಎಎಪಿ ಮುಖಂಡ ಅರವಿಂದ್ ಕೇಜ್ರಿವಾಲ್, ಎನ್ ಸಿಪಿ ಮುಖಂಡ ಶರದ್ ಪವಾರ್, ನ್ಯಾಶನಲ್ ಕಾನ್ಫಿರೆನ್ಸ್ ಮುಖಂಡ ಫಾರೂಖ್ ಅಬ್ದುಲ್ಲಾ ಅವರನ್ನೂ ನಾಯ್ಡು ಭೇಟಿಯಾಗಿದ್ದಾರೆ. ಒಟ್ಟಿನಲ್ಲಿ ಎನ್ ಡಿಎ ಯನ್ನು ಅಧಿಕಾರದಿಂದ ದೂರವಿರಿಸಲು ಏನೆಲ್ಲಾ ಪ್ರಯತ್ನಮಾಡಬೇಕೋ, ಅದನ್ನೆಲ್ಲ ನಾಯ್ಡು ಮಾಡುತ್ತಿದ್ದಾರೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದನ್ನು 2019 ರ ಏಪ್ರಿಲ್-ಮೇ ತಿಂಗಳಿನಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ನಂತರ ನೋಡಬೇಕು!