ಮೋದಿ ಸಖ್ಯ ತೊರೆದಿದ್ದಕ್ಕೆ ಪಶ್ಚಾತಾಪದ ಮಾತನಾಡಿದ ಚಂದ್ರಬಾಬು ನಾಯ್ಡ
ಅಮರಾವತಿ, ಅ13: ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನಿಂದ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪಶ್ಚಾತ್ತಾಪದ ಮಾತನಾಡಿದ್ದಾರೆ.
"ಎನ್ಡಿಎ ಮೈತ್ರಿಕೂಟದಿಂದ ಹೊರಬಂದು ತಪ್ಪು ಮಾಡಿದೆ" ಎಂದು ನಾಯ್ಡು ವಿಷಾದದ ಹೇಳಿಕೆಯನ್ನು ನೀಡಿದ್ದಾರೆ. ನಾಯ್ಡು ಹೇಳಿಕೆಗೆ ಬಿಜೆಪಿಯಿಂದ ಅಧಿಕೃತ ಹೇಳಿಕೆ ಇನ್ನೂ ಹೊರಬಿದ್ದಿಲ್ಲ.
ಜಗನ್ ಒಬ್ಬ ಸೈಕೋ: ಹರಿಹಾಯ್ದ ಚಂದ್ರಬಾಬು ನಾಯ್ಡು
ಒಂದು ಕಾಲದಲ್ಲಿ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಜೊತೆ ಉತ್ತಮ ಸಂಬಂಧವನ್ನು ನಾಯ್ಡು ಹೊಂದಿದ್ದರು. ಆಂಧ್ರಕ್ಕೆ ವಿಶೇಷ ಪ್ಯಾಕೇಜ್ ನೀಡುವ ವಿಚಾರದಲ್ಲಿ, ನಾಯ್ಡು, ಬಿಜೆಪಿ ಮೈತ್ರಿಕೂಟದಿಂದ ಹೊರಬಂದಿದ್ದರು.
ಜಗನ್ ದ್ವೇಷ ರಾಜಕಾರಣಕ್ಕೆ ಬಲಿಯಾಗಲಿದೆ ನಾಯ್ಡು ಮನೆ
ಇದಾದ ನಂತರ, ಬಿಜೆಪಿ ಮೇಲೆ ಇವರ ಸಿಟ್ಟು ಯಾವಮಟ್ಟಿಗೆ ಇತ್ತೆಂದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಜೊತೆ ಸೇರಿ, ದೇಶಾದ್ಯಂತ ಪ್ರವಾಸ ಮಾಡಿ, ಬಿಜೆಪಿ ವಿರುದ್ದ ಮೈತ್ರಿಕೂಟ ವೇದಿಕೆ ನಿರ್ಮಿಸಲು ಶತಪ್ರಯತ್ನ ಮಾಡಿದ್ದರು.
ಕಾಂಗ್ರೆಸ್ ಜೊತೆ ಮೈತ್ರಿ ಆಗಲಿಲ್ಲ
ಬಿಜೆಪಿ ವಿರುದ್ದದ ಹೋರಾಟಕ್ಕೆ ಇವರಿಗೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ. ಇನ್ನು, ಆಂಧ್ರ ಅಸೆಂಬ್ಲಿ ಚುನಾವಣೆಯಲ್ಲಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ನಾಯ್ಡು, ರಾಹುಲ್ ಜೊತೆ ಮಾತುಕತೆ ನಡೆಸಿದ್ದರು. ಕೊನೇ ಕ್ಷಣದಲ್ಲಿ ಅದೂ ವರ್ಕೌಟ್ ಆಗದೇ, ತೆಲುಗುದೇಶಂ ಏಕಾಂಗಿಯಾಗಿ ಸ್ಪರ್ಧಿಸಿತ್ತು.
ಬಿಜೆಪಿ ತೊರೆದ ಬಗ್ಗೆ ವಿಷಾದದ ಮಾತು
ಶನಿವಾರ (ಅ 12) ವಿಶಾಖಪಟ್ಟಣಂನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ನಾಯ್ಡು, ಬಿಜೆಪಿ ತೊರೆದ ಬಗ್ಗೆ ವಿಷಾದದ ಮಾತನ್ನಾಡಿದ್ದಾರೆ. "ಬಿಜೆಪಿ ಜೊತೆಗೆ ಮೈತ್ರಿ ಅಂತ್ಯಗೊಳಿಸಿದ್ದು, ನನ್ನ ರಾಜಕೀಯ ಬದುಕಿನಲ್ಲಿ ನಾನು ಮಾಡಿದ ತಪ್ಪು ನಿರ್ಧಾರ" ಎಂದು ಹೇಳಿದ್ದಾರೆ.
ಪಕ್ಷಕ್ಕೆ ಚುನಾವಣೆಯ ವೇಳೆ ತೀವ್ರ ಹಿನ್ನಡೆಯನ್ನು ತಂದೊಡ್ಡಿತು
"ಅಸೆಂಬ್ಲಿ ಮತ್ತು ಸಾರ್ವತ್ರಿಕ ಚುನಾವಣೆಗೆ ಮುನ್ನ ಎನ್ಡಿಎ ಮೈತ್ರಿಕೂಟದಿಂದ ತೆಲುಗುದೇಶಂ ಹೊರಬಂದಿದ್ದು ತಪ್ಪು ನಿರ್ಧಾರ. ಇದು ಪಕ್ಷಕ್ಕೆ ಚುನಾವಣೆಯ ವೇಳೆ ತೀವ್ರ ಹಿನ್ನಡೆಯನ್ನು ತಂದೊಡ್ಡಿತು" ಎಂದು ನಾಯ್ಡು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.
ರಾಜ್ಯಕ್ಕೆ ವಿಶೇಷ ಸ್ಥಾನಮಾನ
"ರಾಜ್ಯಕ್ಕೆ ವಿಶೇಷ ಸ್ಥಾನಮಾನ, ಅಮರಾವತಿ ಮುಂತಾದ ವಿಚಾರಗಳಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ಬಿಜೆಪಿ ಮೈತ್ರಿಕೂಟದಿಂದ ಹೊರಬಂದೆವು. ನಮ್ಮ ಕೆಲವು ನಾಯಕರು ರಾಜೀನಾಮೆ ನೀಡಿದರು. ಈ ವಿಚಾರವೆಲ್ಲಾ ನಮಗೆ ಹಿನ್ನಡೆಯನ್ನು ತಂದಿತು" ಎಂದು ನಾಯ್ಡು ಹೇಳಿದ್ದಾರೆ.
ಜಗನ್ ಎದುರು ಹೀನಾಯ ಸೋಲು
ಕಳೆದ ಆಂಧ್ರ ಅಸೆಂಬ್ಲಿ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ 151 , ತೆಲುಗುದೇಶಂ 23ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಒಟ್ಟು ಸ್ಥಾನಗಳು 175. ಇನ್ನು ಲೋಕಸಭಾ ಚುನಾವಣೆಯಲ್ಲಿ ವೈಎಸ್ಆರ್ ಕಾಂಗ್ರೆಸ್ 22, ಟಿಡಿಪಿ 3 ಸ್ಥಾನದಲ್ಲಿ ಗೆದ್ದಿತ್ತು. ಒಟ್ಟು 25 ಲೋಕಸಭಾ ಕ್ಷೇತ್ರವನ್ನು ಆಂಧ್ರ ಹೊಂದಿದೆ.