ಎನ್ ಟಿಆರ್ ಗೇ ದ್ರೋಹ ಬಗೆದ ನಾಯ್ಡು ಜನಕ್ಕೆ ಏನು ಒಳ್ಳೇದು ಮಾಡ್ತಾರೆ: ಮೋದಿ
ಅಮರಾವತಿ, ಜನವರಿ 6: ಆಂಧ್ರಪ್ರದೇಶದ ಮುಖ್ಯಮಂತ್ರಿ ತಮ್ಮ ಸ್ವಂತ ಮಗನ ಅಭ್ಯುದಯಕ್ಕಾಗಿ ರಾಜ್ಯದಲ್ಲಿ ಅಭಿವೃದ್ಧಿಯ ಸೂರ್ಯ ಮುಳುಗಲು ಕಾರಣರಾಗಿದ್ದಾರೆ. ಅವರ ನೀತಿಗಳು ಹಾಗೂ ಭ್ರಷ್ಟಾಚಾರ ರಾಜ್ಯದಲ್ಲಿ ಎಂಥ ಅನಾಹುತ ಮಾಡುತ್ತಿದೆ ಎಂದು ತಿಳಿಯುತ್ತಿಲ್ಲ. ಮಗನ ಅನುಕೂಲಕ್ಕಾಗಿ ರಾಜ್ಯವನ್ನು ಕತ್ತಲೆಗೆ ದೂಡುತ್ತಿದ್ದಾರೆ. ಅವರ ಆದ್ಯತೆ ಮಗ ಮಾತ್ರ. ಆಂಧ್ರಪ್ರದೇಶದಲ್ಲಿ ಇತರರ ಮಕ್ಕಳ ಬಗ್ಗೆ ಮರೆತು ಹೋಗಿದ್ದಾರೆ.
-ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಹೀಗೆ ಚಂದ್ರಬಾಬು ನಾಯ್ಡು ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಆಂಧ್ರಪ್ರದೇಶದ ಬೂತ್ ಮಟ್ಟದ ಬಿಜೆಪಿ ಕಾರ್ಯಕರ್ತರ ಜತೆಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾತನಾಡಿದ ವೇಳೆ ಆರೋಪ ಮಾಡಿದ್ದಾರೆ.
ತೆಲಂಗಾಣ ಸೆಂಟಿಮೆಂಟ್ : ನಾಯ್ಡು ಜುಟ್ಟು ನರೇಂದ್ರ ಮೋದಿ ಕೈಯಲ್ಲಿ!
ಎನ್.ಟಿ.ರಾಮ ರಾವ್ ಅವರು ತೆಲುಗರ ಗೌರವದ ನಿಜವಾದ ಪ್ರತೀಕ. ಈಗ ಅಧಿಕಾರದಲ್ಲಿರುವವರು ಜನರನ್ನು ವಂಚಿಸುತ್ತಿರುವುದು ಇದೇ ಮೊದಲಲ್ಲ. ಎನ್ ಟಿಆರ್ ರನ್ನು ಎರಡು ಸಲ ವಂಚಿಸಿದರು. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಎನ್ ಟಿಆರ್ ಅಳಿಯ ಆದ ಚಂದ್ರಬಾಬು ನಾಯ್ಡು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತೆಲುಗರ ಹಿತಾಸಕ್ತಿಗೆ ದ್ರೋಹ
ಆಂಧ್ರದಲ್ಲಿ ಇಂದು ಅಧಿಕಾರದಲ್ಲಿರುವವರು ತಮ್ಮ ಅಧಿಕಾರಕ್ಕಾಗಿ ತೆಲುಗು ಹಿತಾಸಕ್ತಿಗೆ ದ್ರೋಹ ಬಗೆದಿದ್ದಾರೆ ಹಾಗೂ ಈ ಬಾರಿಯೂ ಎರಡನೇ ಸಲಕ್ಕೆ ಎನ್ ಟಿಆರ್ ಗೆ ಹಿಂದಿನಿಂದ ಚೂರಿ ಹಾಕಿದ್ದಾರೆ. ತೆಲುಗರ ಪ್ರತಿಷ್ಠೆಗೆ ಧಕ್ಕೆ ಮಾಡಿದ ಹಾಗೂ ತೆಲುಗರ ಹಿತಾಸಕ್ತಿಗೆ ದ್ರೋಹ ಮಾಡಿದ ಕಾಂಗ್ರೆಸ್ ಅನ್ನು ಕ್ಷಮಿಸಲು ಸಾಧ್ಯವೇ ಇರಲಿಲ್ಲ ಎಂದು ಮೋದಿ ಅಭಿಪ್ರಾಯ ಪಟ್ಟಿದ್ದಾರೆ.
ಎನ್ ಟಿಆರ್ ರ ಮೌಲ್ಯದ ಪರವಾಗಿ ನಿಲ್ಲಿ
ಎನ್ ಟಿಆರ್ ಗೆ ನಿಜವಾದ ಗೌರವ ಸಲ್ಲಿಸಿ. ಎನ್ ಟಿಆರ್ ಯಾವ ಮೌಲ್ಯಕ್ಕಾಗಿ ನಿಂತರೋ ಅವರಿಗೆ ದ್ರೋಹ ಬಗೆದವರ ವಿರುದ್ಧ ಮತ ಚಲಾಯಿಸಿ. ಎನ್ ಟಿಆರ್ ನೆನಪಿಗೆ ಗೌರವ ಸಲ್ಲಿಸಿ ಹಾಗೂ ಅವರ ಪರಂಪರೆಯ ಪರವಾಗಿ ನಿಲ್ಲಿ ಎಂದು ಸಲಹೆ ಮಾಡಿದ್ದಾರೆ ಪ್ರಧಾನಿ ಮೋದಿ.
ಮೋದಿ ಎದುರು ನಾನೇ ಬಗ್ಗಿದ್ದೇನೆ... ನನ್ನ ರಾಜ್ಯಕ್ಕಾಗಿ: ನಾಯ್ಡು ಹೊಸ ವರಸೆ!
ತೆಲುಗರ ಪ್ರತಿಷ್ಠೆ ಪುನರ್ ಸ್ಥಾಪಿಸಿ
ಎನ್ ಟಿಆರ್ ಅವರಂತೆ ಕಾರ್ಯ ನಿರ್ವಹಿಸಿದವರನ್ನು ಗೌರವಿಸುವ ಮೂಲಕ ತೆಲುಗರ ಪ್ರತಿಷ್ಠೆಯನ್ನು ಪುನರ್ ಸ್ಥಾಪಿಸಬಹುದು. ಎಲ್ಲ ಹಿಂದುಳಿದ ವರ್ಗದವರು, ದಲಿತರು ಹಾಗೂ ಬುಡಕಟ್ಟು ಜನಾಂಗದವರ ಜತೆಗೆ ಮಾತನಾಡಿದಾಗ ಮತ್ತೆ ತೆಲುಗರ ಪ್ರತಿಷ್ಠೆ ಪುನರ್ ಸ್ಥಾಪನೆ ಮಾಡಬಹುದು ಎಂದು ಹೇಳಿದ್ದಾರೆ.
ಮೋದಿಯ ಸ್ವಭಾವದಿಂದಲೇ ದೇಶದ ಅರ್ಥಿಕತೆ ಹಾಳು: ಚಂದ್ರಬಾಬು ನಾಯ್ಡು
ಸ್ವರ್ಣ ಆಂಧ್ರಪ್ರದೇಶದ ಕನಸು ಕಂಡಿದ್ದರು
ಎನ್ ಟಿಆರ್ ಸ್ವರ್ಣ ಆಂಧ್ರಪ್ರದೇಶ ಕನಸು ನನಸಾಗುವುದಕ್ಕೆ ಆಂಧ್ರಪ್ರದೇಶದ ಪ್ರತಿಯೊಬ್ಬ ಪ್ರಜೆಯು ಅಭಿವೃದ್ಧಿಯ ಫಲ ಪಡೆಯುವಂತಾಗಬೇಕು. ಯಾವುದೋ ಒಂದು ಕುಟುಂಬದ ಅಭಿವೃದ್ಧಿಯಿಂದ ಆ ಕನಸು ನನಸಾಗಲ್ಲ. ಯುವಶಕ್ತಿ ಹಾಗೂ ಎಲ್ಲ ತೆಲುಗರಿಂದ ಮಾತ್ರ ಸ್ವರ್ಣ ಆಂಧ್ರಪ್ರದೇಶ ಕನಸು ಸಾಕಾರಗೊಳ್ಳುತ್ತದೆ ಎಂದು ಮೋದಿ ಹೇಳಿದ್ದಾರೆ.