ಆಂಧ್ರ ಸಿಎಂ ಜಗನ್ ದ್ವೇಷದ ನಡೆಗೆ ಚಂದ್ರಬಾಬು ನಾಯ್ಡು ಹೈರಾಣ
ಆಂಧ್ರಪ್ರದೇಶಕ್ಕೆ ಅಮರಾವತಿ ಹೊರತಾಗಿ ಇನ್ನೂ ಎರಡು ನಗರಗಳನ್ನು ರಾಜಧಾನಿಯಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಘೋಷಿಸಿದ್ದಾರೆ. ಅದಕ್ಕೆ, ವಿಧಾನಸಭೆಯಲ್ಲಿ ಅನುಮೋದನೆಯೂ ಸಿಕ್ಕಿದೆ. ಆದರೆ, ಸಂಖ್ಯಾಬಲದ ಕೊರತೆಯಿಂದ ವಿಧಾನಪರಿಷತ್ತಿನಲ್ಲಿ ಇದು ಅನುಮೋದನೆಗೊಳ್ಳುವುದು ಕಷ್ಟ.
ಶಾಸಕಾಂಗ ರಾಜಧಾನಿಯಾಗಿ ಅಮರಾವತಿ, ಕಾರ್ಯಾಂಗ ರಾಜಧಾನಿಯಾಗಿ ವಿಶಾಖಪಟ್ಟಣಂ ಮತ್ತು ನ್ಯಾಯಾಂಗ ರಾಜಧಾನಿಯಾಗಿ ಕರ್ನೂಲು ಎಂದು ಜಗನ್ ಪ್ರಕಟಿಸಿದ್ದಾರೆ. ಜಗನ್ ಸರಕಾರದ ಮಹತ್ವದ ಈ ನಿರ್ಧಾರದ ಹಿಂದೆ, ಇರುವ ಕಾರಣವಾದರೂ ಏನು?
ಅಖಂಡ ಆಂಧ್ರ ವಿಭಜನೆಗೊಂಡ ನಂತರ, ಹೈದರಾಬಾದ್ ಅವಳಿ ನಗರಗಳು ತೆಲಂಗಾಣದ ಪಾಲಾದವು. ಹಾಗಾಗಿ, ಆಂಧ್ರಕ್ಕೆ ಹೊಸ ರಾಜಧಾನಿಯ ವಿಚಾರದಲ್ಲಿ ಕಾರ್ಯೋನ್ಮುಖಗೊಳ್ಲಲೇಬೇಕಿತ್ತು. ಆ ವೇಳೆ, ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡುಗೆ ಕಣ್ಣಿಗೆ ಬಿದ್ದದ್ದು ಅಮರಾವತಿ.
ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿ, ಜಗನ್ ಮಹತ್ವ ಘೋಷಣೆ
ಅಮರಾವತಿ ಹೊರತಾಗಿ ಬೇರೆ ನಗರಗಳು ಆಂಧ್ರದಲ್ಲಿ ಇರಲಿಲ್ಲವೇ? ಖಂಡಿತ ಇದ್ದವು. ಅಮರಾವತಿ ಪಕ್ಕದಲ್ಲೇ ಇದ್ದ ವಿಜಯವಾಡ ನಗರ, ಬಂದರು ನಗರ ವಿಶಾಖಪಟ್ಟಣಂ ಆಗಲೇ ಸಾಕಷ್ಟು ಅಭಿವೃದ್ದಿಗೊಂಡಿತ್ತು. ಆದರೂ, ನಾಯ್ಡು ಯಾಕೆ ಅಮರಾವತಿಯನ್ನೇ ಆಯ್ಕೆಮಾಡಿದರು ಎಂದರೆ, ಅದಕ್ಕೆ ಸ್ವಹಿತಾಶಕ್ತಿ ಎನ್ನುವ ಉತ್ತರ ಸಿಗುತ್ತದೆ.
ಕಮ್ಮ ಜನಾಂಗದ ಪ್ರಾಬಲ್ಯ ಜಾಸ್ತಿ. ನಾಯ್ಡು ಇದೇ ಸಮುದಾಯದವರು
ಅಮರಾವತಿಯ ಸುತ್ತಮುತ್ತ ಕಮ್ಮ ಜನಾಂಗದವರು ಪ್ರಾಬಲ್ಯ ಜಾಸ್ತಿ. ಚಂದ್ರಬಾಬು ನಾಯ್ಡು ಇದೇ ಸಮುದಾಯದವರು. ಹಾಗಾಗಿ, ರಾಜಧಾನಿಯಲ್ಲಿ ಹಿಡಿತವನ್ನು ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ನಾಯ್ಡು ಈ ನಗರವನ್ನು ಆಯ್ಕೆಮಾಡಿಕೊಂಡರು. ಅದಕ್ಕಿಂತ ಹೆಚ್ಚಾಗಿ, ಇಲ್ಲಿನ ರಿಯಲ್ ಎಸ್ಟೇಟ್ ದಂಧೆ.
ಅಮರಾವತಿ ಸುತ್ತಮುತ್ತ
ಅಮರಾವತಿ ಸುತ್ತಮುತ್ತ ಹೆಚ್ಚಿನ ಜಾಗವನ್ನು ಚಂದ್ರಬಾಬು ನಾಯ್ಡು ಕುಟುಂಬ ಮತ್ತು ತೆಲುಗುದೇಶಂ ನಾಯಕರು ಈಗಾಗಲೇ ಆವರಿಸಿಕೊಂಡು ಬಿಟ್ಟಿದ್ದಾರೆ. ರಿಯಲ್ ಎಸ್ಟೇಟ್ ಈಗಾಗಲೇ ಇಲ್ಲಿ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ಆಂಧ್ರಕ್ಕೆ ಅಮರಾವತಿ ಹೊರತಾಗಿ ಬೇರೆ ಯಾವುದೂ ರಾಜಧಾನಿಯಾಗಬಾರದು ಎನ್ನುವ ನಾಯ್ಡು ಅವರ ಹೋರಾಟದ ಹಿಂದಿರುವ ಅಸಲಿಯತ್ತು ಇದೇ ಎಂದು ಹೇಳಲಾಗುತ್ತಿದೆ.
ಪಕ್ಕಾ ರಾಜಕೀಯ ದ್ವೇಷದ ಹೊರತಾಗಿ ಬೇರೇನೂ ಇಲ್ಲ
ಇದೇ ಕಾರಣಕ್ಕಾಗಿ ಸಿಎಂ ಜಗನ್ ಕೂಡಾ ಮೂರು ರಾಜಧಾನಿ ಮಾಡಲು ಹೊರಟಿರುವುದು. ಈ ನಡೆಯ ಹಿಂದೆ, ಪಕ್ಕಾ ರಾಜಕೀಯ ದ್ವೇಷದ ಹೊರತಾಗಿ ಬೇರೇನೂ ಇಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೂ, ಈಗಾಗಲೇ ಅಮರಾವತಿಯಲ್ಲಿ ಅಪಾರ ಪ್ರಮಾಣದ ಹೂಡಿಕೆಯಾಗಿರುವುದರಿಂದ, ಇದನ್ನು ಒಂದು ರಾಜಧಾನಿಯಾಗಿ ಜಗನ್ ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ.
ಚಂದ್ರಬಾಬು ನಾಯ್ಡು ಹೈರಾಣವಾಗಿ ಹೋಗಿರುವುದಂತೂ ನಿಜ
ಎಷ್ಟರ ಮಟ್ಟಿಗೆ ಚಂದ್ರಬಾಬು ನಾಯ್ಡು ಮತ್ತು ಜಗನ್ ನಡುವೆ ರಾಜಕೀಯ ಮೇಲಾಟ ನಡೆಯುತ್ತಿದೆ ಎಂದರೆ, ಮೇಲ್ಮನೆಯಲ್ಲಿ ಸಂಖ್ಯಾಬಲದ ಕೊರತೆ ಇರುವುದನ್ನು ಅರಿತಿರುವ ಜಗನ್ ವಿಧಾನಪರಿಷತ್ತನ್ನೇ ಅಮಾನತು ಮಾಡಲು ಮುಂದಾಗಿದ್ದಾರೆ. ಸಂವಿಧಾನದಲ್ಲಿ ಇದಕ್ಕೆ ಅವಕಾಶ ಬೇರೆ ಇದೆ. ಒಟ್ಟಿನಲ್ಲಿ, ಸದ್ಯ, ಆಂಧ್ರದಲ್ಲಿ ನಡೆಯುತ್ತಿರುವ ರಾಜಕೀಯ ಆಟದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೈರಾಣವಾಗಿ ಹೋಗಿರುವುದಂತೂ ನಿಜ.