ಕೊರೊನಾದಿಂದ ಸಾವಿಗೆ ಹೆದರಿ 15 ತಿಂಗಳಿನಿಂದ ಮನೆಯೊಳಗೇ ಸೇರಿಕೊಂಡ ಕುಟುಂಬ
ಅಮರಾವತಿ, ಜುಲೈ 22: ಕೊರೊನಾ ಸೋಂಕಿನಿಂದ ಸಾವನ್ನಪ್ಪುವ ಭಯದಿಂದ ಕುಟುಂಬ ಸದಸ್ಯರೆಲ್ಲರೂ ಹದಿನೈದು ತಿಂಗಳಿನಿಂದ ಮನೆಯೊಳಗೇ ಬಂಧಿಯಾಗಿರುವ ಸಂಗತಿ ಆಂಧ್ರಪ್ರದೇಶದಲ್ಲಿ ನಡೆದಿದೆ.
ಆಂಧ್ರಪ್ರದೇಶದಲ್ಲಿ ಕಡಾಲಿ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಪೊಲೀಸರು, ಒಳಗೇ ಸೇರಿಕೊಂಡಿದ್ದ ಕುಟುಂಬದ ಮೂವರನ್ನು ಹೊರಕರೆತಂದು ರಕ್ಷಣೆ ಮಾಡಿದ್ದಾರೆ.
ಎಳೆ ಮನಸಿನೊಳಗೆ ಭಯ ನುಸುಳದಂತಿರಲಿ; ಮಕ್ಕಳ ಅಧೈರ್ಯದ ಬಗ್ಗೆ ಒಂದೆರಡು ಮಾತು
ಕಳೆದ ವರ್ಷ ತಮ್ಮ ನೆರೆ ಮನೆಯವರೊಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ನಂತರ, ಕೊರೊನಾ ಭಯದಿಂದ ರುತಮ್ಮ (50), ಕಾಂತಮಣಿ (32) ಹಾಗೂ ರಾಣಿ (30) ಎಂಬ ಮೂವರು ಮನೆಯೊಳಗೆ ತಮ್ಮನ್ನು ತಾವೇ ಬಂಧಿಸಿಕೊಂಡಿದ್ದಾರೆ.
ಸುಮಾರು ಹದಿನೈದು ತಿಂಗಳಿನಿಂದಲೂ ಮನೆ ಬಾಗಿಲು ತೆರೆದಿಲ್ಲ. ಅತಿ ಪುಟ್ಟ ಮನೆಯೊಳಗೇ ಈ ಮೂವರೂ ಕೂಡಿಕೊಂಡಿದ್ದಾರೆ ಎಂದು ಕಡಾಲಿ ಗ್ರಾಮ ಸರಪಂಚ್ ಚೊಪ್ಪಾಲ ಗುರುನಾಥ್ ತಿಳಿಸಿದ್ದಾರೆ.
ಸರ್ಕಾರಿ ಯೋಜನೆಯಡಿಯಲ್ಲಿ ವಸತಿ ಅನುಷ್ಠಾನ ಸಂಬಂಧ ಈ ಕುಟುಂಬದವರ ಹೆಬ್ಬೆಟ್ಟಿನ ಗುರುತು ಪಡೆದುಕೊಳ್ಳಲು ಮನೆ ಬಳಿ ಆಶಾ ಕಾರ್ಯಕರ್ತರು ಹೋದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಅವರು ಆನಂತರ ಗ್ರಾಮದ ಇನ್ನಿತರರಿಗೆ ವಿಷಯ ತಿಳಿಸಿದ್ದಾರೆ.
"ರುತ್ರಮ್ಮ ಹಾಗೂ ಅವರ ಇಬ್ಬರು ಮಕ್ಕಳು ಇಲ್ಲಿ ನೆಲೆಸಿದ್ದಾರೆ. ಕೊರೊನಾ ಭಯದಿಂದ ತಮ್ಮನ್ನು ತಾವೇ ಲಾಕ್ ಮಾಡಿಕೊಂಡು ಒಳಗೆ ಸೇರಿಕೊಂಡಿದ್ದಾರೆ. ಆಶಾ ಕಾರ್ಯಕರ್ತರು ಮನೆ ಬಳಿ ಹೋದಾಗ ಯಾರೂ ಪ್ರತಿಕ್ರಿಯೆ ನೀಡಿಲ್ಲ. ಕಿಟಕಿಯಿಂದ ನೋಡಿದಾಗ, ಅವರ ಸ್ಥಿತಿ ಕಂಡುಬಂದಿದೆ. ಅವರನ್ನು ಪ್ರಶ್ನೆ ಮಾಡಿದರೆ, "ನಾವು ಹೊರಗೆ ಬಂದರೆ ಸಾಯುತ್ತೇವೆ. ಬರುವುದಿಲ್ಲ" ಎಂದು ಉತ್ತರಿಸಿರುವುದಾಗಿ ಸರಪಂಚ್ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರ ತಂಡ ಬಂದು ಈ ಕುಟುಂಬದವರನ್ನು ರಕ್ಷಿಸಿದೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಎರಡು ಮೂರು ದಿನಗಳಾಗಿದ್ದರೆ ಅವರು ಸಾಯುವ ಸಾಧ್ಯತೆಯೇ ಹೆಚ್ಚಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.