ಆಂಧ್ರದಲ್ಲಿ ನಿಗೂಢ ಕಾಯಿಲೆ; ಅಕ್ಕಿಯಲ್ಲಿನ ಈ ಅಂಶ ಕಾರಣವಾಯಿತೇ?
ಹೈದರಾಬಾದ್, ಡಿಸೆಂಬರ್ 12: ಆಂಧ್ರ ಪ್ರದೇಶದ ಎಲೂರು ಪಟ್ಟಣದಲ್ಲಿ ಆತಂಕ ಮೂಡಿಸಿದ್ದ ನಿಗೂಢ ಕಾಯಿಲೆಗೆ ನಿಖರ ಕಾರಣವನ್ನು ಪತ್ತೆ ಹಚ್ಚುವ ಸಂಬಂಧ ವಾರದಿಂದಲೂ ತಜ್ಞರ ತಂಡ ಪರಿಶೀಲನೆಯಲ್ಲಿ ತೊಡಗಿಕೊಂಡಿದೆ. ಈ ಘಟನೆಯಲ್ಲಿ ಇದುವರೆಗೂ ಒಬ್ಬರು ಮೃತಪಟ್ಟಿದ್ದು, ಸುಮಾರು 600 ಮಂದಿ ಅಸ್ವಸ್ಥರಾಗಿದ್ದಾರೆ. ಸದ್ಯಕ್ಕೆ 13 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಾಥಮಿಕ ವರದಿಯಲ್ಲಿ, ಕಾಯಿಲೆಗೆ ತುತ್ತಾದವರ ರಕ್ತದ ಮಾದರಿಗಳಲ್ಲಿ ಸೀಸ ಮತ್ತು ನಿಕ್ಕಲ್ ನಂಥ ರಾಸಾಯನಿಕ ಅಂಶಗಳಿದ್ದುದು ಕಂಡುಬಂದಿತ್ತು. ಇದೀಗ ಅಕ್ಕಿಯಲ್ಲಿ ಪಾದರಸ (ಮರ್ಕ್ಯುರಿ) ಅಂಶ ಸೇರಿರುವುದು ಪತ್ತೆಯಾಗಿದೆ. ಮುಂದೆ ಓದಿ...
ಆಂಧ್ರಪ್ರದೇಶದಲ್ಲಿನ ವಿಚಿತ್ರ ಕಾಯಿಲೆಗೆ ಕಾರಣ ಇದು
ಕಾಯಿಲೆಗೆ ಅಕ್ಕಿಯಲ್ಲಿ ಪಾದರಸ ಕಾರಣವಾ?
ಈ ಕಾಯಿಲೆಯ ಕಾರಣವನ್ನು ಪತ್ತೆ ಹಚ್ಚಲು ಅಮರಾವತಿಗೆ ಬಂದಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ತಂಡವು ಕೆಲವು ಕಾರಣಗಳನ್ನು ಪತ್ತೆಹಚ್ಚಿದೆ. ಆಹಾರದಲ್ಲಿ ಬಳಸಿರುವ ತರಕಾರಿಗಳಲ್ಲಿ ಕ್ರಿಮಿನಾಶಕದ ಅಂಶವು ಅಧಿಕ ಮಟ್ಟದಲ್ಲಿರುವುದು ಕಂಡುಬಂದಿದೆ. ರಕ್ತದಲ್ಲಿ ಕೃಷಿ ಮತ್ತು ಸೊಳ್ಳೆ ನಿಯಂತ್ರಣಕ್ಕೆ ಬಳಸಲಾಗುವ ಆರ್ಗನೋಕ್ಲೋರಿನ್ ಅಂಶ ಪತ್ತೆಯಾಗಿದ್ದು, ಇದರೊಂದಿಗೆ ಅಕ್ಕಿಯಲ್ಲಿ ಪಾದರಸದ ಅಂಶ ಸೇರಿಕೊಂಡಿರುವುದು ಈ ಕಾಯಿಲೆಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಸಾಧ್ಯತೆಗಳ ಪರಿಶೀಲನೆ
ಕಳೆದ ವಾರ ರೋಗಿಗಳ ರಕ್ತದ ಮಾದರಿಯಲ್ಲಿ ಸೀಸ ಹಾಗೂ ನಿಕ್ಕಲ್ ಅಂಶಗಳು ಇದ್ದದ್ದು ತಿಳಿದುಬಂದಿತ್ತು. ಆದರೆ ಅವು ಹೇಗೆ ಅವರ ದೇಹಕ್ಕೆ ಸೇರಿವೆ ಎನ್ನುವುದು ಇನ್ನೂ ಬಗೆಹರಿದಿಲ್ಲ. ಪಿವಿಸಿ ಪೈಪ್ಗಳಲ್ಲಿ ಬಳಿದಿರುವ ಸೀಸದ ಅಂಶಗಳು ಕುಡಿಯುವ ನೀರಿನಲ್ಲಿ ಬೆರೆತು ಜನರ ದೇಹಕ್ಕೆ ವಿಷ ಪ್ರವೇಶಿಸಿರುವ ಸಾಧ್ಯತೆ ಇದೆ ಎಂದೂ ತಿಳಿಸಲಾಗಿತ್ತು.
ಆಂಧ್ರ: ಇನ್ನೂ ಬಗೆಹರಿಯದ ನಿಗೂಢ ಕಾಯಿಲೆ ಮೂಲ
ಅಮರಾವತಿಯಲ್ಲಿ ಸಿಎಂ ಸಭೆ
ರಾಜ್ಯ ಸರ್ಕಾರವು ತಜ್ಞರ ಈ ವರದಿಗಳನ್ನು ಪರಿಶೀಲಿಸಿದ್ದು, ಸಿಎಂ ಜಗನ್ ಮೋಹನ್ ರೆಡ್ಡಿ ವೈದ್ಯಕೀಯ ತಜ್ಞರೊಂದಿಗೆ ಅಮರಾವತಿಯಲ್ಲಿ ಸಭೆಯನ್ನು ನಡೆಸಿದ್ದಾರೆ.ಈ ವರದಿಯ ಕುರಿತು ವೈದ್ಯಕೀಯ ಸಲಹೆಗಳನ್ನು ಪಡೆಯಲಿದ್ದಾರೆ. ಎಲೂರು ಪ್ರದೇಶದಲ್ಲಿ ಉಂಟಾದ ಈ ನಿಗೂಢ ಕಾಯಿಲೆಯ ಕಾರಣವನ್ನು ಭೇದಿಸಲು ಆಂಧ್ರಪ್ರದೇಶದ ಸರ್ಕಾರ 21 ಸದಸ್ಯರ ಬಹುಶಿಸ್ತೀಯ ಸಮಿತಿಯನ್ನು ರಚಿಸಿತ್ತು. ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್ ಹಾಗೂ ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ಈ ಕಾಯಿಲೆಯ ಕಾರಣ ಪತ್ತೆ ಹಚ್ಚುವಲ್ಲಿ ಸೋಮವಾರದಿಂದ ತೊಡಗಿಕೊಂಡಿತ್ತು.
Recommended Video
ಏನಿದು ಪ್ರಕರಣ?
ಆಂಧ್ರ ಪ್ರದೇಶ ರಾಜ್ಯದ ಪಶ್ಚಿಮ ಗೋದಾವರಿ ಜಿಲ್ಲೆಯ ಎಲೂರು ನಗರದಲ್ಲಿ ವಿಚಿತ್ರ ಕಾಯಿಲೆ ಪತ್ತೆಯಾಗಿದ್ದು, ಡಿಸೆಂಬರ್ 5ರಿಂದ ಜನರು ಇದ್ದಕ್ಕಿದ್ದಂತೆ ಅಸ್ವಸ್ಥಗೊಂಡು ಆಸ್ಪತ್ರೆ ಸೇರುತ್ತಿದ್ದರು. ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ 45 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟ ನಂತರ ಸುಮಾರು 600ಮಂದಿಗೆ ಈ ಕಾಯಿಲೆಯ ಲಕ್ಷಣ ಕಂಡುಬಂದಿತ್ತು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಯಾವ ರೋಗದ ಲಕ್ಷಣಗಳು ಕಂಡುಬಂದಿರಲಿಲ್ಲ. ನೀರು, ಆಹಾರ ವ್ಯತ್ಯಾಸದಿಂದಾಗಿ ಹೀಗೆ ಆಗಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕಾಯಿಲೆಗೆ ತುತ್ತಾಗುವವರ ಸಂಖ್ಯೆ ಏರುತ್ತಿದ್ದಂತೆ ರಾಜ್ಯ ಸರ್ಕಾರವು ತಜ್ಞರ ಸಮಿತಿಗಳನ್ನು ರಚನೆ ಮಾಡಿತ್ತು.
ಸ್ಕೈ ವಿಲ್ಲಾ ಮಾದರಿ ನಿಮ್ಮ ಕನಸಿನ ಅಪಾರ್ಟ್ಮೆಂಟ್ ಇಲ್ಲಿದೆ. ಹೆಚ್ಚಿನ ವಿವರಗಳಿಗಾಗಿ ಕ್ಲಿಕ್ ಮಾಡಿ