100 ಅಡಿ ಆಳದ ಕಮರಿಗೆ ಉರುಳಿದ ಬಸ್: ಎಂಟು ಪ್ರವಾಸಿಗರ ಸಾವು
ಅಮರಾವತಿ, ಫೆಬ್ರವರಿ 12: ಆಂಧ್ರಪ್ರದೇಶದ ವಿಶಾಖಪಟ್ಟಣಂನ ಅರಕು ಘಾಟ್ ರಸ್ತೆಯ ಕಣಿವೆಯೊಂದಕ್ಕೆ ಟೂರಿಸ್ಟ್ ಬಸ್ ಒಂದು ಉರುಳಿಬಿದ್ದು ಕನಿಷ್ಠ ಎಂಟು ಮಂದಿ ಜೀವ ಕಳೆದುಕೊಂಡ ದುರ್ಘಟನೆ ಶುಕ್ರವಾರ ಸಂಜೆ ಸಂಭವಿಸಿದೆ. ಮೃತರೆಲ್ಲರೂ ಹೈದರಾಬಾದ್ಗೆ ಸೇರಿದವರಾಗಿದ್ದಾರೆ. ಈ ದುರಂತದಲ್ಲಿ ಇತರೆ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ.
ಹೈದರಾಬಾದ್ನ ದಿನೇಶ್ ಟ್ರಾವೆಲ್ಸ್ಗೆ ಸೇರಿದ ಈ ಟೂರಿಸ್ಟ್ ಬಸ್, ಅರಕು ಕಣಿವೆಯ ಸೊಬಗನ್ನು ಪ್ರವಾಸಿಗರಿಗೆ ತೋರಿಸಲು ಸಾಗುತ್ತಿತ್ತು. ಅನಂತಗಿರಿ ಗ್ರಾಮದ ಸಮೀಪದಲ್ಲಿನ ದುಮುಕು ಎಂಬ ಸಣ್ಣಹಳ್ಳಿ ಬಳಿಯ ಕಡಿದಾದ ತಿರುವು ತೆಗೆದುಕೊಳ್ಳುತ್ತಿತ್ತು. ಆಗ ಅದು ಸುಮಾರು 100 ಅಡಿ ಆಳವಾದ ಕಮರಿಗೆ ಉರುಳಿಬಿದ್ದಿದೆ.
ದಂಡ ಹಾಕಿದ್ರು ಬೈಕ್ ಚಾಲನೆ; 15 ವರ್ಷದ ಬಾಲಕ ಸಾವು
ಬಸ್ನಲ್ಲಿ 30 ಜನರು ಪ್ರವಾಸಿಗರಿದ್ದು ಎಲ್ಲರೂ ಹೈದರಾಬಾದ್ನ ಶೈಕ್ಪೇಟ್ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೆಲವು ಗಾಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಂಬುಲೆನ್ಸ್ನಲ್ಲಿ ವಿಶಾಖಪಟ್ಟಣಂನ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಅವಘಡದ ಬಗ್ಗೆ ಸಚಿವ ಅವಂತಿ ಶ್ರೀನಿವಾಸ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ವಿಜಯ್ ಚಾಂದ್ ಅವರೊಂದಿಗೆ ಮಾತನಾಡಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ.