5 ಕೋಟಿ ರು. ಮೌಲ್ಯದ ನೋಟುಗಳನ್ನು ಬಳಸಿ ದೇವಾಲಯ ಅಲಂಕಾರ!
ಹೈದರಾಬಾದ್, ಅಕ್ಟೋಬರ್ 12: ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯವನ್ನು ಕರೆನ್ಸಿ ನೋಟುಗಳಿಂದ ಮಾಡಿದ ಹೂವುಗಳಿಂದ ಈ ನವರಾತ್ರಿ ಮಹೋತ್ಸವದ ಹಿನ್ನೆಲೆ ಸಿಂಗಾರ ಮಾಡಲಾಗಿದೆ. ಆದರೆ ಈ ನೋಟುಗಳ ಒಟ್ಟು ಮೌಲ್ಯವನ್ನು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಈ ನೋಟುಗಳ ಒಟ್ಟು ಮೌಲ್ಯ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಕೋಟಿ ರೂಪಾಯಿ ಆಗಿದೆ.
ಈ ದೇವಾಲಯದಲ್ಲಿ ವರ್ಷದ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ದೇವರುಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಈ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಧನಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಟುಗಳನ್ನು ಹೂವುಗಳಂತೆ ಜೋಡಿಸಿಕೊಂಡು ಅಲಂಕಾರ ಮಾಡಲಾಗಿದೆ.
ಮೈಸೂರು ದಸರಾ ಅಂದ್ರೆ ಬರೀ ದಸರಾ ಅಲ್ಲ!; ಅದರಾಚೆಗೆ ಸಾಂಸ್ಕೃತಿಕ ಐತಿಹ್ಯವಿದೆ
ಸುಮಾರು ನೂರು ಸ್ವಯಂ ಸೇವಕರು ಈ ಅಲಂಕಾರವನ್ನು ಮಾಡಲು ಹಲವಾರು ಗಂಟೆಗಳ ಕಾಲ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಒಟ್ಟು ದೇವಾಲಯ ಪೂರ್ತಿ ಐದು ಕೋಟಿ ಹದಿನಾರು ಲಕ್ಷ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕಾರ ಮಾಡಲಾಗಿದೆ.
ಎರಡು ಸಾವಿರ ರೂಪಾಯಿಯ ನೋಟು, ಐನ್ನೂರು ರೂಪಾಯಿಯ ನೋಟು, ಇನ್ನೂರು ರೂಪಾಯಿಯ ನೋಟು, ನೂರು ರೂಪಾಯಿಯ ನೋಟು, ಐವತ್ತು ರೂಪಾಯಿಯ ನೋಟು, ಹತ್ತು ರೂಪಾಯಿಯ ನೋಟುಗಳನ್ನು ಬಳಸಿ ಈ ಅಲಂಕಾರವನ್ನು ವರ್ಣರಂಜಿತವಾಗಿ ಮಾಡಲಾಗಿದೆ.
ಹಳೆಯ ದೇವಾಲಯವಾಗ ಕನ್ಯಕಾ ಪರಮೇಶ್ವರಿ ದೇವಾಲಯವನ್ನು ನಾಲ್ಕು ವರ್ಷಗಳ ಹಿಂದೆ ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಆ ಬಳಿಕ ಪ್ರತಿ ವರ್ಷವೂ ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆರೋಜನೆ ಮಾಡಲಾಗುತ್ತಿದೆ.
ಈ ವರ್ಷವೂ ಕೂಡಾ ಅಧಿಕ ವೈಭವದ ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಎಲ್ಲಾ ಧಾರ್ಮಿಕ ಕಾರ್ಯಗಳನ್ನು ಅದ್ದೂರಿಯಾಗಿ ನಡೆಸಲು ದೇವಾಲಯದ ಸ್ವಯಂ ಸೇವಕರು ಉತ್ಸುಕರಾಗಿದ್ದಾರೆ. ಈ ಎಲ್ಲಾ ಕಾರ್ಯಕ್ರಮಗಳ ಜವಾಬ್ದಾರಿಯನ್ನು ನೆಲ್ಲೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಕ್ಕಳ ದ್ವಾರಕಾನಾಥ್ ವಹಿಸಿಕೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಮುಕ್ಕಳ ದ್ವಾರಕಾನಾಥ್, "ದೇವಿಯ ಶೃಂಗಾರವನ್ನು ಮಾಡಲು ಸುಮಾರು ಏಳು ಕೆಜಿ ತೂಕದ ಚಿನ್ನವನ್ನು ಹಾಗೂ 60 ಕೆ ಜಿ ತೂಕದ ಬೆಳ್ಳಿಯನ್ನು ಬಳಸಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.
ದೇವಾಲಯಗಳು ನೋಟುಗಳನ್ನು ಬಳಸಿ ಅಲಂಕಾರ ಮಾಡಿರುವ ಘಟನೆಗಳು ಈ ಹಿಂದೆಯೂ ನಡೆದಿದೆ. ಆದರೆ ಇಷ್ಟು ಭಾರೀ ಮೊತ್ತದಲ್ಲಿ ನೋಟುಗಳನ್ನು ಬಳಸಿಕೊಂಡು ಈ ಅಲಂಕಾರವನ್ನು ಮಾಡಿರುವುದು ಇದೇ ಮೊದಲು ಎಂದರೂ ಸುಳ್ಳಾಗದು ಎಂದು ಕೂಡಾ ಅಲ್ಲಿನ ಸ್ವಯಂ ಸೇವಕರು ಹೇಳಿಕೊಂಡಿದ್ದಾರೆ.
2020 ರಲ್ಲಿ ತೆಲಂಗಾಣದ ಕನ್ಯಕ ಪರಮೇಶ್ವರಿ ದೇವಾಲಯದಲ್ಲಿ ಈ ರೀತಿಯ ನವರಾತ್ರಿಯ ಸಂದರ್ಭದಲ್ಲಿ ನೋಟುಗಳನ್ನು ಹೂವುಗಳಂತೆ ಮಾಡಿ ದೇವಾಲಯವನ್ನು ಶೃಂಗಾರ ಮಾಡಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದ ನೋಟುಗಳನ್ನು ಬಳಕೆ ಮಾಡಲಾಗಿತ್ತು ಎಂದು ವರದಿಗಳು ಹೇಳಿದೆ. ಆ ಸಂದರ್ಭದಲ್ಲಿ 1,11,11,111 ಮೌಲ್ಯದ ನೋಟುಗಳನ್ನು ಬಳಲಾಗಿತ್ತು. ದೇವಿಯನ್ನು ಕೂಡಾ ನೋಟುಗಳಿಂದಲೇ ಸಿಂಗಾರ ಮಾಡಲಾಗಿತ್ತು.
ಇನ್ನು ಗುಜರಾತ್ನ ತರ್ಸಾಲಿಯಲ್ಲಿ ಹನುಮಾನ್ ದೇವಾಲಯವನ್ನು ಪ್ರತಿ ಶ್ರಾವಣ ತಿಂಗಳಿನಲ್ಲಿ ಲಕ್ಷಾಂತರ ರೂಪಾಯಿಯಿಂದ ದೇವರನ್ನು ಅಲಂಕಾರ ಮಾಡಲಾಗುತ್ತಿತ್ತು. ನೋಟು ಅಮಾನ್ಯೀಕರಣ ಮಾಡುವುದಕ್ಕೂ ಮುನ್ನ ಒಂದು ಸಾವಿರ ರೂಪಾಯಿ ಹಾಗೂ ಐನ್ನೂರು ರೂಪಾಯಿಯಿಂದ ಅಲಂಕಾರ ಮಾಡಲಾಗುತ್ತಿತ್ತು. ಆದರೆ 2019 ರಲ್ಲಿ ಇದನ್ನು ಕೊನೆ ಮಾಡಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕೆಂಗಣ್ಣಿಗೆ ಗುರಿಯಾದ ಬಳಿಕ ಈ ನಿರ್ಧಾರವನ್ನು ದೇವಾಲಯದ ಸಮಿತಿಯು ಕೈಗೊಂಡಿದೆ.
ಗೋಡೆಗಳಲ್ಲಿ ನೋಟುಗಳ ಅಲಂಕಾರವನ್ನು ಮಾಡುತ್ತಿದ್ದ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಈ ದೇವಾಲಯದ ಶ್ರೀ ಮಾರುತಿ ಮಂಡಲಕ್ಕೆ ನೋಟಿಸ್ ನೀಡಿತ್ತು. ದೇವಾಲಯದಲ್ಲಿ ಈ ರೀತಿಯಾಗಿ ಅಲಂಕಾರ ಮಾಡಲಾಗುವ ಹಣವನ್ನು ಸರ್ಕಾರದ ಸ್ವತ್ತು. ಬ್ಯಾಂಕಿನ ನೋಟುಗಳನ್ನು ಈ ರೀತಿಯಾಗಿ ಉಪಯೋಗಿಸಿಕೊಳ್ಳಬಾರದು," ಎಂದು ನೋಟಿಸ್ನಲ್ಲಿ ಆರ್ಬಿಐ ಹೇಳಿತ್ತು.
(ಒನ್ಇಂಡಿಯಾ ಸುದ್ದಿ)