ಕೊರೊನಾ ಸೋಂಕಿತನಿಗೆ ಪ್ರವೇಶ ನೀಡದ ಗ್ರಾಮಸ್ಥರು; ನರಳಿ ನರಳಿ ಸತ್ತ ರೋಗಿ
ಆಂಧ್ರ, ಮೇ 5: ಕೊರೊನಾ ಸೋಂಕು ತಗುಲಿದ ಕಾರಣಕ್ಕೆ ವ್ಯಕ್ತಿಯೊಬ್ಬನಿಗೆ ಹಳ್ಳಿಗೆ ಪ್ರವೇಶ ನಿರಾಕರಿಸಿದ್ದು, ಆತ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಆಂಧ್ರ ಪ್ರದೇಶದ ಶ್ರೀಕಕುಲಂ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಕೊರೊನಾದಿಂದ ಜೀವ ಬಿಡುತ್ತಿದ್ದರೂ ಯಾರೂ ನೆರವಿಗೆ ಮುಂದಾಗಲಿಲ್ಲ. ಕೊನೆಗೆ ಆ ವ್ಯಕ್ತಿಯ ಮಗಳು ತನ್ನ ತಂದೆಗೆ ನೀರು ಕುಡಿಸಲು ಮುಂದಾಗಿದ್ದು, ಅದನ್ನು ಆಕೆಯ ತಾಯಿ ತಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಧ್ಯರಾತ್ರಿ ವೇಳೆ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಮಂಗಳೂರು ಪೊಲೀಸರು
ಐವತ್ತು ವರ್ಷದ ಈ ವ್ಯಕ್ತಿ ವಿಜಯವಾಡದಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರು ಹಳ್ಳಿಗೆ ಮರಳಿದ್ದು, ಗ್ರಾಮಸ್ಥರು ಅವರಿಗೆ ಪ್ರವೇಶ ನೀಡಿಲ್ಲ. ಊರ ಹೊರಗಿನ ಗುಡಿಸಲ ಬಳಿಯೇ ಇರಲು ಸೂಚಿಸಲಾಗಿತ್ತು ಎಂದು ತಿಳಿದುಬಂದಿದೆ.
ಕೊರೊನಾ ಸೋಂಕಿನಿಂದ ಅಸ್ವಸ್ಥಗೊಂಡು ನೆಲದಲ್ಲೇ ಬಿದ್ದು ಆತ ಒದ್ದಾಡುತ್ತಿದ್ದು, ಕೆಳಗೆ ಬಿದ್ದಿರುವ ತನ್ನ ತಂದೆಗೆ ನೀರು ಕುಡಿಸಲು ಮಗಳು ಮುಂದಾಗಿದ್ದಾಳೆ. ಆದರೆ ಅದನ್ನು ಆಕೆಯ ತಾಯಿ ತಡೆಯುತ್ತಿದ್ದು, ಕೊನೆಗೆ ಜಗಳವಾಡಿ ಮಗಳು ತಂದೆಗೆ ನೀರು ಕುಡಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಗ್ರಾಮಸ್ಥರೊಬ್ಬರು ಸೆರೆ ಹಿಡಿದಿದ್ದಾರೆ. ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವ್ಯವಸ್ಥೆಯೂ ಇಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಎರಡನೇ ಅಲೆ ಭೀಕರತೆಯಿಂದಾಗಿ ದಿನನಿತ್ಯ ಇಂಥ ಹಲವು ಸಂಗತಿಗಳು ಬೆಳಕಿಗೆ ಬರುತ್ತಿವೆ. ರೋಗದ ಭೀಕರತೆ ಕೆಲವು ಅಮಾನವೀಯ ಘಟನೆಗಳಿಗೂ ಸಾಕ್ಷಿಯಾಗುತ್ತಿದೆ.